ಸರ್ಕಾರಿ ಶಾಲೆಗಳ ಉಳಿಯುವಿಕೆಗೆ ಮಾಸ್ಟರ್ ಪ್ಲಾನ್; ಖಾಸಗಿ ಶಾಲೆಗಳಿಗೆ ಶಾಕ್!
ಸರ್ಕಾರಿ ಶಾಲೆಗಳು ದಿನದಿಂದ ದಿನಕ್ಕೆ ಮಕ್ಕಳಿಲ್ಲದೇ ಬಡವಾಗುತ್ತಿವೆ. ಒಂದೊಂದೇ ಶಾಲೆಗಳು ಮುಚ್ಚುತ್ತಿವೆ. ಹೀಗಿರುವಾಗ ಪರಿಷತ್ ಸದಸ್ಯರೊಬ್ಬರು ಇದೀಗ ಸರ್ಕಾರಿ ಶಾಲೆಗಳ ಉಳಿವಿಕೆಗೆ ಒಂದು ವಿಧೇಯಕ ಸಿದ್ಧಪಡಿಸಿದ್ದಾರೆ.
ಬೆಂಗಳೂರು (ನ.22): ಸರ್ಕಾರಿ ಶಾಲೆಗಳು ದಿನದಿಂದ ದಿನಕ್ಕೆ ಮಕ್ಕಳಿಲ್ಲದೇ ಬಡವಾಗುತ್ತಿವೆ. ಒಂದೊಂದೇ ಶಾಲೆಗಳು ಮುಚ್ಚುತ್ತಿವೆ. ಹೀಗಿರುವಾಗ ಪರಿಷತ್ ಸದಸ್ಯರೊಬ್ಬರು ಇದೀಗ ಸರ್ಕಾರಿ ಶಾಲೆಗಳ ಉಳಿವಿಕೆಗೆ ಒಂದು ವಿಧೇಯಕ ಸಿದ್ಧಪಡಿಸಿದ್ದಾರೆ.
ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಖಾಸಗಿ ಶಾಲೆಗಳ ಜೊತೆ ಸರ್ಕಾರಿ ಶಾಲೆಗಳಿಗೆ ಪೈಪೋಟಿ ನೀಡಲು ಆಗುತ್ತಿಲ್ಲ. ವಿದ್ಯಾರ್ಥಿಗಳ ಕೊರತೆಯಿಂದ ಸರ್ಕಾರಿ ಶಾಲೆಗಳಿಗೆ ಬೀಗ ಬೀಳುತ್ತಿವೆ. ಕೆಲವು ನಿರ್ವಹಣೆ ಕೊರತೆಯಿಂದ ಸೊರಗುತ್ತಿವೆ. ಇದಕ್ಕೆಲ್ಲಾ ಬ್ರೇಕ್ ಹಾಕಲು ಖಾಸಗಿ ವಿಧೇಯಕವೊಂದು ರೆಡಿಯಾಗಿದೆ. ಅದೇನಂದರೆ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ಓದುವಂತೆ ನಿಯಮ ಜಾರಿಗೊಳಿಸಬೇಕೆಂಬ ವಿಧೇಯಕ ನಾಳೆ ಪರಿಷತ್ನಲ್ಲಿ ಮಂಡನೆಯಾಗಲಿದೆ. ಕಾಂಗ್ರೆಸ್ ಸದಸ್ಯ ರಘು ಆಚಾರ್ ಈ ಖಾಸಗಿ ವಿಧೇಯಕ ಮಂಡಿಸಲಿದ್ದಾರೆ.
ಈ ವಿಧೇಯಕ ಅಂಗೀಕಾರವಾದರೆ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚಾಗಲಿದೆ. ಇದರಿಂದ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಗಳನ್ನು ಒದಗಿಸುವ ಜೊತೆಗೆ , ಶಾಲೆಗಳನ್ನು ಎಲ್ಲ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಬೇಕಾಗುತ್ತದೆ. ಇದರಿಂದ ಖಾಸಗಿ ಶಾಲೆಗಳ ಆಟಾಟೋಪಕ್ಕೆ ಬ್ರೇಕ್ ಬೀಳಲಿದೆ.
ಈಗಾಗಲೇ ಈ ವಿಧೇಯಕಕ್ಕೆ ಬೆಂಬಲ ನೀಡುವಂತೆ ಪರಿಷತ್ ಸದಸ್ಯ ರಘು ಆಚಾರ್ ,ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಎಚ್ ಡಿ ಕುಮಾರಸ್ವಾಮಿ, ಈಶ್ವರಪ್ಪ ಎಲ್ಲರನ್ನೂ ಕೋರಿದ್ದಾರೆ. ಎಲ್ಲರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದೆ.