ಅಕ್ರಮ ಗಣಿಗಾರಿಕೆಯಲ್ಲಿ ರಫ್ತಾಗಿದ್ದು 35 ಕೋಟಿ ಟನ್ ಅದಿರು!: ಸಂಪುಟ ಸಮಿತಿಯಿಂದ ಆಘಾತಕಾರಿ ಅಂಶ ಬಯಲು
ಅಕ್ರಮ ಗಣಿಗಾರಿಕೆ ಕುರಿತು ಸಂತೋಷ್ ಹೆಗ್ಡೆ ಅವರು ಕೊಟ್ಟಿದ್ದ ವರದಿ ಆಧರಿಸಿ ಕ್ರಮ ಕೈಗೊಳ್ಳಲು ರಚನೆ ಆಗಿರುವ ಸಚಿವ ಸಂಪುಟ ಉಪ ಸಮಿತಿ ಮತ್ತಷ್ಟು ಅಕ್ರಮಗಳನ್ನು ಪತ್ತೆ ಹಚ್ಚಿದೆ. ಲೋಕಾಯುಕ್ತರ ವರದಿಯಲ್ಲಿ ದಾಖಲಾಗದೇ ಇರುವ ಅಕ್ರಮಗಳನ್ನು ಬೆಳಕಿಗೆ ತಂದಿರುವ ಸಮಿತಿ, ನಷ್ಟದ ಪ್ರಮಾಣವನ್ನೂ ಹೆಚ್ಚಳ ಮಾಡಿದೆ. ಆದರೆ, ರಾಜ್ಯದ ಬೊಕ್ಕಸಕ್ಕೆ ನಷ್ಟ ಮಾಡಿರೋ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳಿಂದ ಒಂದೇ ಒಂದು ಪೈಸೆಯನ್ನೂ ವಸೂಲಿ ಮಾಡಿಲ್ಲ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.
ಬೆಂಗಳೂರು(ಜ.09): ಅಕ್ರಮ ಗಣಿಗಾರಿಕೆ ಕುರಿತು ಸಂತೋಷ್ ಹೆಗ್ಡೆ ಅವರು ಕೊಟ್ಟಿದ್ದ ವರದಿ ಆಧರಿಸಿ ಕ್ರಮ ಕೈಗೊಳ್ಳಲು ರಚನೆ ಆಗಿರುವ ಸಚಿವ ಸಂಪುಟ ಉಪ ಸಮಿತಿ ಮತ್ತಷ್ಟು ಅಕ್ರಮಗಳನ್ನು ಪತ್ತೆ ಹಚ್ಚಿದೆ. ಲೋಕಾಯುಕ್ತರ ವರದಿಯಲ್ಲಿ ದಾಖಲಾಗದೇ ಇರುವ ಅಕ್ರಮಗಳನ್ನು ಬೆಳಕಿಗೆ ತಂದಿರುವ ಸಮಿತಿ, ನಷ್ಟದ ಪ್ರಮಾಣವನ್ನೂ ಹೆಚ್ಚಳ ಮಾಡಿದೆ. ಆದರೆ, ರಾಜ್ಯದ ಬೊಕ್ಕಸಕ್ಕೆ ನಷ್ಟ ಮಾಡಿರೋ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳಿಂದ ಒಂದೇ ಒಂದು ಪೈಸೆಯನ್ನೂ ವಸೂಲಿ ಮಾಡಿಲ್ಲ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.
ಗಣಿ ಅಕ್ರಮಗಳನ್ನು ಮರೆತ ಕಾಂಗ್ರೆಸ್ ಸರ್ಕಾರ: ಅಧಿಕಾರಕ್ಕೆ ಬಂದು 4 ವರ್ಷವಾದರೂ ಒಂದೂ ಕ್ರಮವಿಲ್ಲ
ಅಕ್ರಮ ಗಣಿಗಾರಿಕೆ ವಿರುದ್ಧ ತೊಡೆತಟ್ಟಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಸರಿ ಸುಮಾರು 4 ವರ್ಷ ಆಯ್ತು. ಲೋಕಾಯುಕ್ತ ವರದಿ ಆಧರಿಸಿ ಏನೇನ್ ಕ್ರಮ ಕೈಗೊಳ್ಳಬೇಕು ಮತ್ತು ವರದಿಯ ಶಿಫಾರಸ್ಸುಗಳನ್ನ ಅನುಷ್ಠಾನಕ್ಕೆ ಸಚಿವ ಎಚ್.ಕೆ.ಪಾಟೀಲ್ ಅವರ ನೇತೃತ್ವದಲ್ಲಿ ಕ್ಯಾಬಿನೆಟ್ ಸಬ್ ಕಮಿಟಿ ರಚನೆ ಮಾಡಿದ್ದರು. ಇದ್ ಬಿಟ್ರೆ ಬೇರೆ ಇನ್ನೇನೂ ಕ್ರಮವೂ ಕೈಗೊಂಡಿಲ್ಲ. ಈ ಸಮಿತಿ ಬಯಲು ಮಾಡಿರುವ ಆಘಾತಕಾರಿ ಅಂಶಗಳತ್ತ ಸಿದ್ದರಾಮಯ್ಯ ಅವರು ಗಮನಿಸಿಯೇ ಇಲ್ಲ.
ಅಕ್ರಮ ಗಣಿಗಾರಿಕೆ ಕುರಿತು ವರದಿ ನೀಡಿದ್ದ ಆಗಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು 2006ರಿಂದ 2010ರವರೆಗೆ 2.98 ಕೋಟಿ ಟನ್ ಅದಿರು ರಫ್ತಾಗಿತ್ತು ಅಂತ ಹೇಳಿದ್ದರು. ಆದರೆ ಸಚಿವ ಸಂಪುಟ ಉಪ ಸಮಿತಿ, ಇದೇ ಅವಧಿಯಲ್ಲಿ ಒಟ್ಟು 35 ಕೋಟಿ ಟನ್ ಅದಿರು ಅಕ್ರಮವಾಗಿ ರಫ್ತಾಗಿದೆ ಅಂತ ಪತ್ತೆ ಹಚ್ಚಿದೆ.
ಲೋಕಾ ಅಂದಾಜಿಸಿದ್ದು 12,228 ಕೋಟಿ ರೂ.ನಷ್ಟ: ಸಂಪುಟ ಉಪ ಸಮಿತಿ ಪ್ರಕಾರ 1 ಲಕ್ಷ 43 ಸಾವಿರ ಕೋಟಿ ರೂ.
ಅಕ್ರಮವಾಗಿ ರಫ್ತಾಗಿದ್ದ 2.98 ಕೋಟಿ ಟನ್ ಅದಿರಿನಿಂದಾಗಿ ಒಟ್ಟು 12,228 ಕೋಟಿ ರೂಪಾಯಿ ನಷ್ಟ ಆಗಿದೆ ಅಂತ ಸಂತೋಷ್ ಹೆಗ್ಡೆ ವರದಿಯಲ್ಲಿದೆ. ಒಂದ್ ಟನ್ಗೆ 4,103 ರೂಪಾಯಿ ಪ್ರಕಾರ ನಷ್ಟದ ಮೊತ್ತವನ್ನು ಹೇಳಿತ್ತು. ಲೋಕಾಯುಕ್ತ ಸಂಸ್ಥೆ ಒಂದ್ ಟನ್ಗೆ ಹಾಕಿರೋ ರೇಟ್ ಪ್ರಕಾರ 35 ಕೋಟಿ ಟನ್ಗೆ ಲೆಕ್ಕ ಹಾಕಿದ್ರೆ ಆಗಿರುವ ನಷ್ಟದ ಮೊತ್ತ 1 ಲಕ್ಷ 43 ಸಾವಿರ ಕೋಟಿ ರೂಪಾಯಿ. 20,000 ಟ್ರಕ್ಗಳಲ್ಲಿ ಅದಿರು ಸಾಗಣೆ!
ಬಳ್ಳಾರಿಯಿಂದ ಹೊರಗಡೆ 6 ರೈಲ್ವೇ ನಿಲ್ದಾಣಗಳಿಂದ ಮತ್ತು 14 ರೈಲ್ವೆ ಸೈಡಿಂಗ್ಗಳಿಂದ ಅಕ್ರಮವಾಗಿ ರಫ್ತಾಗಿರುವ ಅದಿರಿನ ಪ್ರಮಾಣ ಒಟ್ಟು 20 ಕೋಟಿ ಟನ್. ಇದು 2006ರಿಂದ 2010ರವರೆಗಿನ ಲೆಕ್ಕ. ಸೆಪ್ಟಂಬರ್ 2009ರಿಂದ ಜೂನ್ 2010ರವರೆಗೆ ಕೇವಲ 9 ತಿಂಗಳ ಅವಧಿಯಲ್ಲಿ ಅಕ್ರಮವಾಗಿ ರಫ್ತಾಗಿದ್ದ ಅದಿರಿನ ಪ್ರಮಾಣ 14 ಕೋಟಿ ಟನ್. ಇವಿಷ್ಟೂ ಸಾಗಣೆಯಾಗಿದ್ದು 20,000 ಟ್ರಕ್ಗಳಲ್ಲಿ.
ಮನಿ ಲ್ಯಾಂಡ್ರಿಂಗ್ ಕಾಯ್ದೆ ಅನುಷ್ಠಾನ ಎಂದು?
ಅಕ್ರಮ ಗಣಿಗಾರಿಕೆಯಿಂದ ರಾಷ್ಟ್ರದ ಸಂಪತ್ತು ಕೆಲವೇ ಕೆಲವು ಬಲಾಢ್ಯ ವ್ಯಕ್ತಿಗಳ ಪಾಲಾಗಿದೆ. ಈ ನಷ್ಟವನ್ನು ವಸೂಲಿ ಮಾಡ್ಲಿಕ್ಕೆ ಮತ್ತು ನಷ್ಟ ಮಾಡಿರೋ ಆರೋಪಿಗಳು ಗಳಿಸಿರೋ ಸ್ಥಿರಾಸ್ತಿ, ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳೋದಿಕ್ಕೆ ಇದುವರೆಗೂ ಒಂದೇ ಒಂದು ಕ್ರಮ ಕೈಗೊಂಡಿಲ್ಲ. ಅಕ್ರಮ ಗಣಿಗಾರಿಕೆ ವ್ಯವಹಾರದ ಹಣವನ್ನು ಅಥವಾ ಅಂತಹ ಹಣದಿಂದ ಗಳಿಸಿರುವ ಆಸ್ತಿಯೆಲ್ಲವೂ ಅಕ್ರಮ ಆಸ್ತಿ. ಇದನ್ನು ಮನಿ ಲ್ಯಾಂಡ್ರಿಂಗ್ ಕಾಯ್ದೆ ಪ್ರಕಾರ ಅಥ್ವಾ ಬೇರೆ ಸೂಕ್ತ ಕಾಯ್ದೆ ಅನುಸಾರ ವಸೂಲಿ ಮಾಡ್ಲಿಕ್ಕೆ ಮುಂದಾಗ್ಬೇಕಿತ್ತು. ರಾಜ್ಯ ಸರ್ಕಾರ ಈ ಬಗ್ಗೆ ಗಮನವನ್ನೇ ಹರಿಸಿಲ್ಲ.