ಬೆಂಗಳೂರಿನ ಪ್ರಸಿದ್ಧ ಗೋಪಾಲನ್ ಮಾಲ್ ಮತ್ತು ಗೋಪಾಲನ್ ಎಂಟರ್ ಪ್ರೈಸೆಸ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರ ಬೆನ್ನಲ್ಲೇ, ಅದೇ ಗೋಪಾಲನ್ ಎಂಟರ್ ಪ್ರೈಸೆಸ್ ಸರ್ಕಾರಿ ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಹೈಕೋರ್ಟ್ ಆದೇಶದಂತೆ ಸರ್ವೆ ನಡೆಸಿದ್ದ ಅಧಿಕಾರಿಗಳು ಒತ್ತುವರಿ ಆಗಿರೋದನ್ನು ಸಾಬೀತುಪಡಿಸಿ 2 ವರ್ಷದ ಹಿಂದೆಯೇ ವರದಿ ಸಲ್ಲಿಸಿದರೂ ಇದುವರೆಗೂ ಒತ್ತುವರಿಯನ್ನು ತೆರವುಗೊಳಿಸ್ದೇ ಇರೋದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬೆಂಗಳೂರು(ಫೆ.22): ಬೆಂಗಳೂರಿನ ಪ್ರಸಿದ್ಧ ಗೋಪಾಲನ್ ಮಾಲ್ ಮತ್ತು ಗೋಪಾಲನ್ ಎಂಟರ್ ಪ್ರೈಸೆಸ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರ ಬೆನ್ನಲ್ಲೇ, ಅದೇ ಗೋಪಾಲನ್ ಎಂಟರ್ ಪ್ರೈಸೆಸ್ ಸರ್ಕಾರಿ ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಹೈಕೋರ್ಟ್ ಆದೇಶದಂತೆ ಸರ್ವೆ ನಡೆಸಿದ್ದ ಅಧಿಕಾರಿಗಳು ಒತ್ತುವರಿ ಆಗಿರೋದನ್ನು ಸಾಬೀತುಪಡಿಸಿ 2 ವರ್ಷದ ಹಿಂದೆಯೇ ವರದಿ ಸಲ್ಲಿಸಿದರೂ ಇದುವರೆಗೂ ಒತ್ತುವರಿಯನ್ನು ತೆರವುಗೊಳಿಸ್ದೇ ಇರೋದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸರ್ಕಾರವೇ ಶ್ರೀರಕ್ಷೆ!
ಬೆಂಗಳೂರು ನಗರದ ಸರ್ಕಾರಿ ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿರುವ ಪಟ್ಟಿಗೆ ಈಗ ಗೋಪಾಲನ್ ಎಂಟರ್ಪ್ರೈಸೆಸ್ ಕೂಡ ಸೇರ್ಪಡೆ ಆಗಿದೆ. ಕೆ.ಆರ್.ಪುರಂ ಹೋಬಳಿಯ ಚಿನ್ನಪ್ಪನಹಳ್ಳಿ ಗ್ರಾಮದ ಸರ್ವೆ ನಂಬರ್ 17ರಲ್ಲಿದ್ದ 11 ಎಕರೆ ವಿಸ್ತೀರ್ಣದ ಕೆರೆ ಪ್ರದೇಶದಲ್ಲಿ ಗೋಪಾಲನ್ ಎಂಟರ್ಪ್ರೈಸೆಸ್ 10 ಗುಂಟೆ ಒತ್ತುವರಿ ಮಾಡ್ಕೊಂಡಿದೆ. ಒತ್ತುವರಿ ಆಗಿರೋದನ್ನು ಭೂ ದಾಖಲೆಗಳ ಜಂಟಿ ನಿರ್ದೇಶಕ ಜಯಪ್ರಕಾಶ್ ಅವರು ಸಾಬೀತುಪಡಿಸಿ 2 ವರ್ಷಗಳ ಹಿಂದೆಯೇ ವರದಿ ಕೊಟ್ಟಿದ್ದಾರೆ. ಆದರೆ ವರದಿ ಆಧರಿಸಿ ಇದುವರೆಗೂ ಒಂದೇ ಒಂದು ಕ್ರಮ ತೆಗೆದುಕೊಂಡಿಲ್ಲ.
ಸರ್ವೆ ನಂಬರ್ 17ರಲ್ಲಿ 11 ಎಕರೆ ಸರ್ಕಾರಿ ಕೆರೆ ಎಂದು ಆರ್ಟಿಸಿಯಲ್ಲಿ ನಮೂದಿಸಲಾಗಿದೆ. ಆದರೂ ಇದೇ ಕೆರೆ ಪ್ರದೇಶದಲ್ಲಿ ಗೋಪಾಲನ್ ಎಂಟರ್ ಪ್ರೈಸೆಸ್ 10 ಗುಂಟೆ ಒತ್ತುವರಿ ಮಾಡಿಕೊಂಡು ಬರೋಬ್ಬರಿ 99 ಅಪಾರ್ಟ್ಮೆಂಟ್ ಕಟ್ಟಿದೆ.
ಇನ್ನು, ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತ ಸರ್ಕಾರಿ ಕೆರೆಗಳ ಒತ್ತುವರಿ ತೆರವುಗೊಳಿಸುವ ಸಂಬಂಧ ಸ್ಪೀಕರ್ ಕೆ.ಬಿ.ಕೋಳಿವಾಡ ನೇತೃತ್ವದಲ್ಲಿ ಇರುವ ಸದನ ಸಮಿತಿಯೂ ಈ ಪ್ರಕರಣದಲ್ಲಿ ಮೌನ ವಹಿಸಿದೆ. ಅಷ್ಟೇ ಏಕೆ, ಈ ಪ್ರಕರಣ ಬಿಬಿಎಂಪಿ ಗಮನದಲ್ಲಿದೆ. ಆದರೂ ಬಿಬಿಎಂಪಿ ಇದಕ್ಕೂ ತನಗೂ ಯಾವುದೇ ಸಂಬಂಧ ಇಲ್ಲದ ಹಾಗೆ ವರ್ತಿಸುತ್ತಿದೆ. ಬಿಬಿಎಂಪಿಯ ಈ ನಡೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ವರದಿ: ಜಿ.ಮಹಾಂತೇಶ್, ಸುವರ್ಣನ್ಯೂಸ್
