ಅಪನಗದೀಕರಣ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಳ್ಳುತ್ತಿದ್ದಂತೆಯೇ ಜನಧನ ಖಾತೆಗಳ ಮೇಲೆ ಮತ್ತೆ ಸರ್ಕಾರದ ಕಣ್ಣು ಬಿದ್ದಿದೆ. ಅತ್ಯಧಿಕ ಪ್ರಮಾಣದಲ್ಲಿ ಅಕ್ರಮ ಹಣ ಹರಿದು ಬಂದ ಶಂಕೆ ಹಿನ್ನೆಲೆಯಲ್ಲಿ ಸರ್ಕಾರ ಖಾತೆಗಳ ಮೇಲೆ ಕಣ್ಣಿಟ್ಟಿದೆ. 

ನವದೆಹಲಿ: ಅಪನಗದೀಕರಣದ ಸಂದರ್ಭದಲ್ಲಿ ಸಾಕಷ್ಟು ಅಕ್ರಮ ಹಣವು ಜನಧನ ಬ್ಯಾಂಕ್ ಖಾತೆಗಳಿಗೆ ಹರಿದು ಬಂದಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಇದೀಗ ಅಪನಗದೀಕರಣ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಳ್ಳುತ್ತಿದ್ದಂತೆಯೇ ಜನಧನ ಖಾತೆಗಳ ಮೇಲೆ ಮತ್ತೆ ಸರ್ಕಾರದ ಕಣ್ಣು ಬಿದ್ದಿದೆ. 

Add Asianetnews Kannada as a Preferred SourcegooglePreferred

ನೋಟು ರದ್ದತಿ ವೇಳೆಯಲ್ಲಿನ ಸುಮಾರು 3.7 ಕೋಟಿ ಜನಧನ ಖಾತೆಗಳ ಪೈಕಿ ಶೇ. 60ರಷ್ಟು ಠೇವಣಿ ಅನುಮಾನಾಸ್ಪದವಾಗಿವೆ ಎಂದು ಸರ್ಕಾರ ಹೇಳಿದೆ. ಈ ಖಾತೆಗಳಲ್ಲಿನ ವಹಿವಾಟುಗಳನ್ನು ತನಿಖೆಗೆ ಒಳಪಡಿಸಲಾಗಿದೆ. ಮೇಲ್ನೋಟಕ್ಕೆ ಇವುಗಳನ್ನು ಅಕ್ರಮ ಎಂದು ಘಂಟಾಘೋಷವಾಗಿ ಹೇಳಲಾಗದು. ತನಿಖೆಗಾರರು ಠೇವಣಿಗಳನ್ನು ಪರಿಶೀಲಿಸುತ್ತಿದ್ದಾರೆ. 

ಒಂದು ವೇಳೆ ಠೇವಣಿ ಪ್ರಮಾಣಕ್ಕೂ, ಠೇವಣಿದಾರರು ಕೊಟ್ಟ ಮಾಹಿತಿಗಳಿಗೂ ಹೊಂದಾಣಿಕೆಯಾಗದಿದ್ದರೆ ಖಂಡಿತ ಕ್ರಮ ಜರುಗಿಸಲಾಗುವುದು ಎಂದು ವಿತ್ತ ಸಚಿವಾಲಯದ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಹೇಳಿದರು. ಆದರೆ ಠೇವಣಿಗಳು ಅಕ್ರಮವೋ-ಸಕ್ರಮವೋ ಎಂಬುದನ್ನು ಕೊನೆಗೆ ನ್ಯಾಯಾಲಯವೇ ತೀರ್ಮಾನಿಸಬೇಕು ಎಂದು ಅವರು ನುಡಿದರು.