‘ರೈತರ ಬೆಳೆ’ ಹೆಸರಲ್ಲಿ ತಮಿಳುನಾಡಿಗೆ ಕಾವೇರಿ ನೀರು!: ವಿಶೇಷ ಅಧಿವೇಶನದಲ್ಲಿ ಬಂತು ರಾಜಕೀಯದ ವಾಸನೆ!
ಬೆಂಗಳೂರು(ಅ.04): ತಮಿಳ್ನಾಡಿಗೆ ನೀರು ಹರಿಸಲು ರಾಜ್ಯಸರ್ಕಾರ ಸದನದ ಅನುಮತಿ ಪಡೆದಿದೆ. ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ತಮಿಳ್ನಾಡಿಗೆ ನೀರು ಹರಿಸಲೆಂದೇ ಮಂಡಿಸಿ ಅನುಮತಿ ಪಡೆದ ರಾಜ್ಯಸರ್ಕಾರ ನ್ಯಾಯಾಂಗ ನಿಂದನೆಯ ತೂಗುಗತ್ತಿಯಿಂದ ಪಾರಾಗಲು ಕೊನೆ ಪ್ರಯತ್ನಕ್ಕೆ ಕೈಹಾಕಿದೆ. ಈ ನಿಟ್ಟಿನಲ್ಲಿ ನಿನ್ನೆ ನಡೆದ ವಿಶೇಷ ಅಧಿವೇಶನದ ಕಲಾಪದ ಸಂಪೂರ್ಣ ವಿವರ ಇಲ್ಲಿದೆ.
ವಿಶೇಷ ಅಧಿವೇಶನದಲ್ಲಿ ಬಂತು ರಾಜಕೀಯದ ವಾಸನೆ!
ಕಾವೇರಿಕೊಳ್ಳದ ಜಲಾಶಯಗಳಲ್ಲಿ ಒಳಹರಿವಿನಿಂದ ನೀರಿನ ಪ್ರಮಾಣ 34.13 ಟಿಎಂಸಿಗೆ ಏರಿಕೆಯಾಗಿದೆ. ಕಾವೇರಿ ಕೊಳ್ಳದ ರೈತರು ಬೆಳೆದು ನಿಂತ ತಮ್ಮ ಬೆಳೆಗೆ ಅವಶ್ಯವಾದ ನೀರನ್ನು ಬಿಡಲು ಒತ್ತಾಯಿಸುತ್ತಿರುವುದನ್ನೂ ಸದನ ಗಮನಿಸಿದೆ. ಈ ಹಿನ್ನಲೆಯಲ್ಲಿ ಸೆ.23ರಂದು ಕೈಗೊಂಡ ನಿರ್ಣಯದಂತೆ ಕುಡಿಯುವ ನೀರಿನ ಲಭ್ಯತೆ ಖಚಿತಪಡಿಸಿಕೊಂಡು ರೈತರ ಬೆಳೆಗಳಿಗೆ ನೀರು ಬಿಡುಗಡೆಗೊಳಿಸುವ ಬಗ್ಗೆ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಬಹುದು.
ಸುಪ್ರೀಂ ಕೋರ್ಟ್ ಅಥವಾ ನ್ಯಾಯಾಧೀಶರ ಬಗ್ಗೆ ಯಾವುದೇ ಚರ್ಚೆ ಮಾಡಬಾರದು ಎಂಬ ಸ್ಪೀಕರ್ ಮುನ್ನೆಚ್ಚರಿಕೆಯ ಜೊತೆಗೆ ವಿಧಾನಸಭೆಯಲ್ಲಿ ನಿರ್ಣಯದ ಚರ್ಚೆ ನಡೆದಿತ್ತು. ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ನಮ್ಮ ರಾಜ್ಯದ ರೈತರಿಗೆ ಮಾತ್ರ ಅನ್ವಯಿಸಬೇಕು ಎನ್ನುವ ಪಟ್ಟು ಹಿಡಿದಿದ್ದರು. ಆದರೆ, ಕೊನೆಗೆ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದರು.
ಜೆಡಿಎಸ್ ನಾಯಕ ಕುಮಾರಸ್ವಾಮಿ ಅಗತ್ಯಬಿದ್ದರೆ ನ್ಯಾಯಾಂಗದ ಪರಿಪಾಲಕರು ಅಂತ ಸಾಬೀತುಪಡಿಸಲು ಯಾವುದೇ ನಿರ್ಧಾರಕ್ಕೂ ಸಿದ್ದರಾಗಬೇಕು ಎಂದು ಹೇಳಿ ನಿರ್ಣಯಕ್ಕೆ ಒಪ್ಪಿಗೆ ಕೊಟ್ಟರು.
ಇದಕ್ಕೂ ಮುನ್ನ, ಸದನದಲ್ಲಿ ಕೇಂದ್ರ ಸರ್ಕಾರದ ಅಫಿಡವಿಟ್ ವಿಚಾರಕ್ಕೆ ಸದನ ನಾಯಕರು ಒಕ್ಕೊರಲಿನಿಂದ ಪ್ರಶಂಸೆ ವ್ಯಕ್ತಪಡಿಸಿದರು. ಸಿಎಂ ಸಿದ್ದರಾಮಯ್ಯ ಸದನದ ನಿರ್ಣಯಕ್ಕೆ ಒಪ್ಪಿಗೆ ಪಡೆಯುವ ಮುನ್ನ ಈವರೆಗೆ ನಡೆದ ಕಾವೇರಿ ಹೋರಾಟದ ಸಂಪೂರ್ಣ ವಿವರ ಬಿಡಿಸಿಟ್ಟರು. ಕಾವೇರಿ ಮತ್ತು ಕೃಷ್ಣಾ ನಮ್ಮ ಎರಡು ಕಣ್ಣುಗಳಿದ್ದಂತೆ ಎಂದೂ ಹೇಳಿದರು.
ವಿಧಾನ ಪರಿಷತ್'ನಲ್ಲೂ ಈ ನಿರ್ಣಯಕ್ಕೆ ಅಂಕಿತ ಬಿದ್ದಿದೆ. ನ್ಯಾಯಾಂಗ ನಿಂದನೆ ತಪ್ಪಿಸಿಕೊಳ್ಳುವ ಮತ್ತು ಇದೇ ತಿಂಗಳ 18ರಂದು ವಿಚಾರಣೆಗೆ ಬರಲಿರುವ ಮುಖ್ಯ ಅರ್ಜಿ ವಿಚಾರಣೆ ದೃಷ್ಟಿಯಿಂದ ಈ ನಿರ್ಣಯ ಕೈಗೊಂಡಿದ್ದಾರೆ. ಇಂದು ರಾತ್ರಿಯಿಂದಲ್ಲೇ ಕೆಆರ್ಎಸ್ನಿಂದ ತಮಿಳುನಾಡಿಗೆ ಕಾವೇರಿ ಹರಿಯಲಿದ್ದಾಳೆ.