ಖಾಸಗಿ ಕಂಪನಿಗಳೂ ವಾಣಿಜ್ಯಿಕ ಉದ್ದೇಶದಿಂದ ಕಲ್ಲಿದ್ದಲು ಗಣಿಗಾರಿಕೆ ನಡೆಸಲು ಅನುಮತಿ ನೀಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸಂಪುಟ ಕೈಗೊಂಡಿದೆ. ಇದರಿಂದಾಗಿ ಕಲ್ಲಿದ್ದಲು ಗಣಿಗಳ ಮೇಲೆ ಈವರೆಗೆ ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್‌ಗೆ ಇದ್ದ ಏಕಸ್ವಾಮ್ಯ ಅಂತ್ಯಗೊಳ್ಳಲಿದೆ.
ನವದೆಹಲಿ: ಖಾಸಗಿ ಕಂಪನಿಗಳೂ ವಾಣಿಜ್ಯಿಕ ಉದ್ದೇಶದಿಂದ ಕಲ್ಲಿದ್ದಲು ಗಣಿಗಾರಿಕೆ ನಡೆಸಲು ಅನುಮತಿ ನೀಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸಂಪುಟ ಕೈಗೊಂಡಿದೆ. ಇದರಿಂದಾಗಿ ಕಲ್ಲಿದ್ದಲು ಗಣಿಗಳ ಮೇಲೆ ಈವರೆಗೆ ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್ಗೆ ಇದ್ದ ಏಕಸ್ವಾಮ್ಯ ಅಂತ್ಯಗೊಳ್ಳಲಿದೆ.
1973ರಲ್ಲಿ ಕಲ್ಲಿದ್ದಲು ವಲಯವನ್ನು ರಾಷ್ಟ್ರೀಕರಣಗೊಳಿಸಲಾಗಿತ್ತು. ಇದಾದ ನಂತರದ ಕಲ್ಲಿದ್ದಲು ವಲಯದ ಅತಿದೊಡ್ಡ ಸುಧಾರಣಾ ಕ್ರಮ ಇದಾಗಿದೆ ಎಂದು ಹೇಳಲಾಗಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಗಳವಾರ ಇದಕ್ಕೆ ಅನುಮೋದನೆ ನೀಡಲಾಯಿತು ಎಂದು ಕೇಂದ್ರ ಕಲ್ಲಿದ್ದಲು ಹಾಗೂ ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈವರೆಗೆ ವಾಣಿಜ್ಯಿಕ ಗಣಿಗಾರಿಕೆ ನಡೆಸಲು ಕೋಲ್
ಇಂಡಿಯಾಗೆ ಮಾತ್ರ ಅನುಮತಿ ಇತ್ತು. ಖಾಸಗಿ ಕಂಪನಿಗಳಿಗೆ ನಿರ್ದಿಷ್ಟ ಉದ್ದೇಶಗಳಿಗೆ ಮಾತ್ರ ಗಣಿಗಾರಿಕೆಗೆ ಅನುಮತಿ ಇರುತ್ತಿತ್ತು. ಅಂದರೆ ತಾವು ಹೊಂದಿರುವ ಸಿಮೆಂಟ್, ವಿದ್ಯುತ್, ಅಲ್ಯುಮಿನಿಯಂ ಘಟಕಗಳಿಗೆ ಅಗತ್ಯವಾದ ಕಲ್ಲಿದ್ದಲು ಮಾತ್ರವೇ ಅವು ಗಣಿಗಾರಿಕೆ ಮೂಲಕ ಹೊರತೆಗೆದು ಸ್ವಂತಕ್ಕೆ ಬಳಸಬಹುದುದಿತ್ತು.
ಆದರೆ ಇದನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಮಾರಾಟ ಮಾಡುವಂತೆ ಇರಲಿಲ್ಲ. ಆದರೆ ಹೊಸ ನಿಯಮದ ಅನ್ವಯ ಯಾವುದೇ ಖಾಸಗಿ ಕಂಪನಿ, ಕಲ್ಲಿದ್ದಲು ಗಣಿಗಾರಿಕೆ ನಡೆಸಿ, ಅದನ್ನು ಮಾರಾಟ ಮಾಡಬಹುದು. ಸರ್ಕಾರದ ಈ ನಡೆಯಿಂದ ಕಲ್ಲಿದ್ದಲು ಹಾಗೂ ಇಂಧನ ವಲಯದಲ್ಲಿ ಸ್ಪರ್ಧೆ ಹೆಚ್ಚಲಿದೆ. ಕಡಿಮೆ ವಿದ್ಯುತ್ ದರಕ್ಕೂ ಇದು ಕಾರಣ ವಾಗಬಹುದು. ಲಕ್ಷಾಂತರ ಉದ್ಯೋಗಾ ವಕಾಶಗಳು ಲಭಿಸಲಿವೆ ಎಂದು ಗೋಯಲ್ ವಿವರಿಸಿದರು. ಸದ್ಯ ದೇಶದ ಶೇ.70 ರಷ್ಟು ವಿದ್ಯುತ್ ಬೇಡಿಕೆಯನ್ನು ಕಲ್ಲಿದ್ದಲು ಆಧರಿತ ಉಷ್ಣ ವಿದ್ಯುತ್ ಸ್ಥಾವರಗಳು ಪೂರೈಸುತ್ತಿವೆ.
