ಅಪಘಾತಗಳಿಗೆ ಒಳ್ಳೆಯ ರಸ್ತೆಗಳೇ ಕಾರಣ: ಡಿಸಿಎಂ!
ಸಂಚಾರ ನಿಯಮ ಉಲ್ಲಂಘನೆಗೆ ಭಾರಿ ಮೊತ್ತದ ದಂಡ ಹೇರುವ ಮುನ್ನ ರಸ್ತೆ ಚೆನ್ನಾಗಿರಲಿ ಎಂದ ಸಾರ್ವಜನಿಕರು| ಅಪಘಾತಗಳಿಗೆ ಒಳ್ಳೆಯ ರಸ್ತೆಗಳೇ ಕಾರಣ: ಡಿಸಿಎಂ!||
ಬೆಂಗಳೂರು[ಸೆ.13]: ಸಂಚಾರ ನಿಯಮ ಉಲ್ಲಂಘನೆಗೆ ಭಾರಿ ಮೊತ್ತದ ದಂಡ ಹೇರುವ ಮುನ್ನ ರಸ್ತೆ ಮೂಲಸೌಕರ್ಯವನ್ನು ಸುಧಾರಿಸಬೇಕು ಎಂಬ ಕೂಗು ಕೇಳಿಬರುತ್ತಿರುವಾಗಲೇ, ಅಪಘಾತಗಳಿಗೆ ಉತ್ತಮ ರಸ್ತೆಗಳೇ ಕಾರಣ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಅವರ ತರ್ಕವನ್ನೇ ಹಲವು ಮಂದಿ ಪ್ರಶ್ನಿಸಿದ್ದಾರೆ.
ಕಳಪೆ ಮೂಲಸೌಕರ್ಯದಿಂದ ಅಪಘಾತಗಳು ಸಂಭವಿಸುತ್ತಿವೆ. ಆದಾಗ್ಯೂ ದುಬಾರಿ ದಂಡ ಏಕೆ ಎಂಬ ಸುದ್ದಿಗಾರರ ಪ್ರಶ್ನೆಗೆ ಚಿತ್ರದುರ್ಗದಲ್ಲಿ ಉತ್ತರ ನೀಡಿದ ಅವರು, ಉತ್ತಮ ರಸ್ತೆಗಳಿಂದಾಗಿ ಅಪಘಾತ ಸಂಭವಿಸುತ್ತಿವೆಯೇ ಹೊರತು ಕೆಟ್ಟರಸ್ತೆಗಳಿಂದಲ್ಲ. ಹೆದ್ದಾರಿಗಳನ್ನೇ ನೋಡಿ, ವಾಹನಗಳು ಗಂಟೆಗೆ 100ರಿಂದ 120 ಕಿ.ಮೀ. ವೇಗದಲ್ಲಿ ಚಲಿಸುತ್ತಿರುತ್ತವೆ ಎಂದು ಲೋಕೋಪಯೋಗಿ ಸಚಿವರೂ ಆಗಿರುವ ಕಾರಜೋಳ ಸಮರ್ಥನೆ ನೀಡಿದರು.
ಭಾರಿ ಮೊತ್ತದ ದಂಡ ಹೇರುವುದರ ಪರ ತಾವೂ ಇಲ್ಲ. ಆದರೆ ದಂಡ ಮೊತ್ತ ಇಳಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.