Asianet Suvarna News Asianet Suvarna News

ರಾಜ್ಯ ಸರ್ಕಾರಿ ನೌಕರರಿಗೆ ಶುಭ ಸುದ್ದಿ

ರಾಜ್ಯ ಸರ್ಕಾರಿ ನೌಕರರಿಗೆ ಇಲ್ಲಿದೆ ಸಿಹಿ ಸುದ್ದಿ, ಇಷ್ಟು ದಿನಗಳ ಕಾಲ ನಿಮಗಿಲ್ಲದ ಅವಕಾಶವೊಂದು ಇನ್ನು ಮುಂದೆ ಲಭ್ಯವಾಗುತ್ತಿದೆ. ಎನ್‌ಪಿಎಸ್‌ನಿಂದ ಸರ್ಕಾರಿ ನೌಕರರಿಗೆ ಯಾವುದೇ ಉಪಯೋಗ ಆಗುತ್ತಿಲ್ಲ, ಇದನ್ನು ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ಸರ್ಕಾರಿ ನೌಕರರಿಗೆ ಕೊಂಚ ಫಲ ಸಿಕ್ಕಂತಾಗಿದೆ.

Good News For Karnataka State Govt Employees

ಲಿಂಗರಾಜು ಕೋರಾ

ಬೆಂಗಳೂರು :  ರಾಷ್ಟ್ರೀಯ ಪಿಂಚಣಿ ಯೋಜನೆಯಡಿ (ಎನ್‌ಪಿಎಸ್‌) ಬರುವ ರಾಜ್ಯ ಸರ್ಕಾರಿ ನೌಕರರು ಇನ್ನು ಮುಂದೆ ತಮ್ಮ ಮಕ್ಕಳ ಉನ್ನತ ಶಿಕ್ಷಣ, ಮದುವೆ, ಮನೆ ನಿರ್ಮಾಣ ಸೇರಿದಂತೆ ಗಂಭೀರ ಕಾಯಿಲೆ, ಅಪಘಾತದಂತಹ ಸಮಸ್ಯೆಗೊಳಗಾದ ವೇಳೆ ತಾವು ಪಾವತಿಸಿದ ಪಿಂಚಣಿ ಮೊತ್ತದ ಶೇ.25ರಷ್ಟುಹಣವನ್ನು ಮುಂಗಡವಾಗಿ ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಎನ್‌ಪಿಎಸ್‌ನಿಂದ ಸರ್ಕಾರಿ ನೌಕರರಿಗೆ ಯಾವುದೇ ಉಪಯೋಗ ಆಗುತ್ತಿಲ್ಲ, ಇದನ್ನು ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ಸರ್ಕಾರಿ ನೌಕರರಿಗೆ ಕೊಂಚ ಫಲ ಸಿಕ್ಕಂತಾಗಿದೆ.

ಪಿಂಚಣಿ ಯೋಜನೆಗೆ ಭದ್ರತೆ ಒದಗಿಸುವ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) 2015ರ ಜನವರಿಯಲ್ಲಿ ಹೊರಡಿಸಿರುವ ಅಧಿಸೂಚನೆಯಲ್ಲಿ ಹೊಸ ಪಿಂಚಣಿ ಯೋಜನೆಯಾದ ಎನ್‌ಪಿಎಸ್‌ನಡಿ ಬರುವ ಸರ್ಕಾರಿ ನೌಕರರಿಗೆ ಕೆಲ ವಿಶೇಷ ಸಂದರ್ಭ ಹಾಗೂ ಸಮಸ್ಯೆಗಳು ಎದುರಾದಾಗ ತಮ್ಮ ವೇತನದಲ್ಲಿ ಕಡಿತವಾಗಿರುವ ಪಿಂಚಣಿ ಮೊತ್ತದ ಶೇ.25ರಷ್ಟುಹಣವನ್ನು ಮುಂಗಡವಾಗಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಇದರ ಆಧಾರದ ಮೇಲೆ ಸರ್ಕಾರದ ಖಜಾನೆ ನಿರ್ದೇಶಕರು ಸಲ್ಲಿಸಿರುವ ಪ್ರಸ್ತಾವನೆಯನ್ನು ಒಪ್ಪಿ ರಾಜ್ಯ ಸರ್ಕಾರ ಮಂಗಳವಾರ ಹೊಸ ಪಿಂಚಣಿ ಯೋಜನೆಯಡಿ ಬರುವ ಸರ್ಕಾರಿ ನೌಕರರು ತಮ್ಮ ಇಡಿಗಂಟು ಪಿಂಚಣಿಯಲ್ಲಿ ಶೇ.25ರಷ್ಟುಹಣವನ್ನು ಮುಂಗಡ ಪಡೆಯಲು ಅವಕಾಶ ಕಲ್ಪಿಸಿ ಹಣಕಾಸು ಇಲಾಖೆ (ಪಿಂಚಣಿ) ಜಂಟಿ ಕಾರ್ಯದರ್ಶಿ ವೈ.ಕೆ. ಪ್ರಕಾಶ್‌ ಆದೇಶ ಹೊರಡಿಸಿದ್ದಾರೆ.

ಸೌಲಭ್ಯ ಯಾವಾಗ ಸಿಗುತ್ತೆ?:  ಸರ್ಕಾರಿ ನೌಕರರು ತಮ್ಮ ಮಕ್ಕಳ ಉನ್ನತ ಶಿಕ್ಷಣ, ಮದುವೆ ಕಾರ್ಯಗಳು, ಸ್ವಂತ ಮನೆ ಕಟ್ಟಲು, ಕೊಳ್ಳಲು ಅಥವಾ ಪ್ಲಾಟ್‌ (ಸೈಟ್‌) ಖರೀದಿಸಲು ಶೇ.25ರಷ್ಟುಪಿಂಚಣಿ ಹಣ ಪಡೆಯಬಹುದಾಗಿದೆ. ಒಂದು ವೇಳೆ ಈಗಾಗಲೇ ನೌಕರನ ಹೆಸರಲ್ಲಿ ಮನೆ, ಪ್ಲಾಟ್‌ ಹೊಂದಿದ್ದರೆ (ಪಿತ್ರಾರ್ಜಿತವಾಗಿ ಬಂದ ನಿವಾಸ ಹೊರತುಪಡಿಸಿ) ಈ ಸೌಲಭ್ಯ ಸಿಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರಿ ನೌಕರ ತಾನು ಅಥವಾ ತನ್ನ ಕುಟುಂಬ ಸದಸ್ಯರಲ್ಲಿ (ಪತ್ನಿ, ಮಕ್ಕಳು, ಪೋಷಕರು) ಯಾರಾದರೂ ಕ್ಯಾನ್ಸರ್‌, ಕಿಡ್ನಿ ವೈಫಲ್ಯ, ಹೃದಯ ಶಸ್ತ್ರ ಚಿಕಿತ್ಸೆ, ಪಾಶ್ರ್ವವಾಯು, ಪ್ರಜ್ಞಾಹೀನ ಸ್ಥಿತಿ, ಅಂಗಾಗ ಕಸಿ, ಶಾಶ್ವತ ದೃಷ್ಟಿದೋಷದಂತಹ ಗಂಭೀರ ಕಾಯಿಲೆ, ಆರೋಗ್ಯ ಸಮಸ್ಯೆ, ಅಪಘಾತದಲ್ಲಿ ಗಂಭೀರ ಗಾಯಗೊಂಡ ಸಂದರ್ಭದಲ್ಲಿ ಶೇ.25ರಷ್ಟುಪಿಂಚಣಿ ಹಣವನ್ನು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.

ಅಷ್ಟೇ ಅಲ್ಲ, ನೌಕರರು ತಮ್ಮ ವೃತ್ತಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೌಶಲ್ಯಾಧಾರಿತ ಕೋರ್ಸು, ಪದವಿ, ಡಿಪ್ಲೊಮಾ, ಸರ್ಟಿಫಿಕೇಟ್‌ ಕೋರ್ಸುಗಳಿಗೆ ಪ್ರವೇಶ ಪಡೆಯಲು ಕೂಡ ಈ ಹಣ ಪಡೆದುಕೊಳ್ಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ರೆಗ್ಯೂಲರ್‌ ಅಥವಾ ದೂರ ಶಿಕ್ಷಣ ಎರಡೂ ರೀತಿಯಲ್ಲೂ ಅಧ್ಯಯನಕ್ಕೆ ಅವಕಾಶವಿದ್ದು, ಕೋರ್ಸುಗಳು ಕನಿಷ್ಠ ಮೂರರಿಂದ ಅದಕ್ಕೂ ಹೆಚ್ಚು ತಿಂಗಳ ಅಧ್ಯಯನದಿಂದ ಕೂಡಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯ, ಕಾಲೇಜು, ಯುಜಿಸಿಯಂತಹ ಅಧಿಕೃತ ಸಂಸ್ಥೆಗಳಿಂದ ಅಂಗೀಕೃತವಾಗಿರಬೇಕು. ಅಧ್ಯಯನಕ್ಕೆ ತಮ್ಮ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ.

ನಿಯಮಗಳೇನು?

ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) 2006 ಏಪ್ರಿಲ್‌ 1ರಿಂದ ಸರ್ಕಾರಿ ಹುದ್ದೆಗಳಿಗೆ ನೇಮಕವಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಹಾಗೂ 2004ರ ಜನವರಿ 1ರಿಂದ ಅಖಿಲ ಭಾರತ ಸೇವಾ ಹುದ್ದೆಗಳಿಗೆ ನೇಮಕವಾಗಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ಕೇಡರ್‌ನ ಅಧಿಕಾರಿಗಳು ಈ ಸೌಲಭ್ಯ ಪಡೆಯಬಹುದು. ಪಿಂಚಣಿ ಮುಂಗಡ ಸೌಲಭ್ಯಕ್ಕೆ ನೌಕರರು ಕನಿಷ್ಠ ಮೂರು ವರ್ಷ ಸೇವೆ ಪೂರೈಸಿರಬೇಕು. ನೌಕರರು ವೃತ್ತಿಗೆ ಸೇರಿದ ದಿನದಿಂದ ಮುಂಗಡ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಿದ ದಿನದವರೆಗೆ ಪಾವತಿಸಿರುವ ಪಿಂಚಣಿ ಮೊತ್ತದಲ್ಲಿ ಶೇ.25ರಷ್ಟನ್ನು ಮಾತ್ರ ಪಡೆಯಬಹುದಾಗಿದೆ. ನೌಕರ ತನ್ನ ವೃತ್ತಿ ಅವಧಿಯಲ್ಲಿ ಮೂರು ಬಾರಿ ಮಾತ್ರ ಈ ರೀತಿ ಮುಂಗಡ ಪಿಂಚಣಿ ಪಡೆಯಬಹುದು. ಒಂದು ವೇಳೆ ಸರ್ಕಾರಿ ನೌಕರ ಗಂಭೀರ ಕಾಯಿಲೆಯಿಂದ ಆಸ್ಪತ್ರೆಯಲ್ಲಿದ್ದರೆ ಆತನ ಪತ್ನಿ ಅಥವಾ ಕುಟುಂಬದ ಇತರೆ ಸದಸ್ಯರು ಅರ್ಜಿ ಸಲ್ಲಿಸಲು ಅವಕಾಶವಿದೆ.

ಈವರೆಗಿನ ಪಿಂಚಣಿ ಯೋಜನೆ ಏನಿತ್ತು?

ಎನ್‌ಪಿಎಸ್‌ ಯೋಜನೆಯಲ್ಲಿ ಸರ್ಕಾರಿ ನೌಕರರ ವೇತನದಲ್ಲಿ ಪ್ರತಿ ತಿಂಗಳು ನಿಗದಿತ ಮೊತ್ತದ ಹಣ ನೌಕರನ ಪಿಂಚಣಿ ಖಾತೆಗೆ ಜಮೆಯಾಗುತ್ತಿತ್ತು. ಅಷ್ಟೇ ಮೊತ್ತದ ಹಣವನ್ನು ಸರ್ಕಾರ ಪಾವತಿಸುತ್ತಿತ್ತು. ಈ ಹಣವನ್ನು ಸೇವಾ ಅವಧಿಯ ಮಧ್ಯದಲ್ಲಿ ಒಂದು ರುಪಾಯಿ ಸಹ ಮುಂಗಡವಾಗಿ ಪಡೆಯಲು ಅವಕಾಶ ಇರಲಿಲ್ಲ. ಬದಲಿಗೆ ನೌಕರ ನಿವೃತ್ತಿ ಹೊಂದಿದಾಗ, ಸ್ವಯಂ ನಿವೃತ್ತಿ ಅಥವಾ ರಾಜೀನಾಮೆ ನೀಡಿದಾಗ ಅಥವಾ ಸೇವಾ ಅವಧಿಯಲ್ಲೇ ಮೃತಪಟ್ಟರೆ ಆತನ ಕುಟುಂಬದವರು ಇಡಿಗಂಟು ರೂಪದಲ್ಲಿ ಒಟ್ಟು ಹಣವನ್ನು ಪಡೆದುಕೊಳ್ಳಬಹುದಿತ್ತು. ಈಗ ಸೇವಾ ಅವಧಿಯಲ್ಲೇ ಶೇ.25ರಷ್ಟುಪಿಂಚಣಿಯನ್ನು ಮುಂಗಡವಾಗಿ ಪಡೆಯಲು ಅವಕಾಶ ದೊರೆತಿದೆ.

Follow Us:
Download App:
  • android
  • ios