ಗಾರ್ಮೆಂಟ್ಸ್ ಉದ್ದಿಮೆ, ನೌಕರರಿಗೆ ಶುಭ ಸುದ್ದಿ
ಗಾರ್ಮೆಂಟ್ಸ್ ಹಾಗೂ ಟೆಕ್ಸ್ಟೈಲ್ಸ್ ನೌಕರರಿಗೆ ಶುಭ ಸಮಾಚಾರ. ಈವರೆಗೆ ನೌಕರರ ಭವಿಷ್ಯ ನಿಧಿ (ಇಪಿಎಫ್) ಯೋಜನೆಗೆ ಒಳಪಡದ ಈ ವಲಯದ ನೌಕರರನ್ನು ಪಿಂಚಣಿ ಯೋಜನೆಯ ಅಡಿ ತರಲು ಕೇಂದ್ರ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.
ನವದೆಹಲಿ : ಗಾರ್ಮೆಂಟ್ಸ್ ಹಾಗೂ ಟೆಕ್ಸ್ಟೈಲ್ಸ್ ನೌಕರರಿಗೆ ಶುಭ ಸಮಾಚಾರ. ಈವರೆಗೆ ನೌಕರರ ಭವಿಷ್ಯ ನಿಧಿ (ಇಪಿಎಫ್) ಯೋಜನೆಗೆ ಒಳಪಡದ ಈ ವಲಯದ ನೌಕರರನ್ನು ಪಿಂಚಣಿ ಯೋಜನೆಯ ಅಡಿ ತರಲು ಕೇಂದ್ರ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.
ನೌಕರರಿಗೆ ಮೂಲ ವೇತನದ ಶೇ.12ರಷ್ಟುಪಿಎಫ್ ನೀಡುವಾಗ ಕಂಪನಿಯವರೂ ತಮ್ಮ ಪಾಲಿನ ಶೇ.12ರಷ್ಟುಪಿಎಫ್ ಮೊತ್ತವನ್ನು ನೌಕರರ ಪಿಎಫ್ ಖಾತೆಗೆ ಜಮಾ ಮಾಡಬೇಕು ಎಂಬುದು ಈಗಿನ ನಿಯಮ. ಆದರೆ ಇನ್ನು ಹೊಸದಾಗಿ ನೇಮಕಗೊಳ್ಳುವ ನೌಕರರ ಪಿಎಫ್ ಖಾತೆಗೆ ಕಂಪನಿಗಳು ಸಂದಾಯ ಮಾಡುವ ಶೇ.12ರಷ್ಟುಪಿಎಫ್ ಪಾಲನ್ನು, ಸರ್ಕಾರವೇ ಭರಿಸಲಿದೆ. ಅರ್ಥಾತ್, ನೌಕರರ ನೇಮಕದ ಮೊದಲ 3 ವರ್ಷದ ಅವಧಿಗೆ ಕಂಪನಿಗಳ ಪಿಎಫ್ ಪಾಲನ್ನು ಸರ್ಕಾರ ಕಟ್ಟಲಿದೆ. ಈ ಮೂಲಕ ಗಾರ್ಮೆಂಟ್ಸ್ ಹಾಗೂ ಟೆಕ್ಸ್ಟೈಲ್ಸ್ ನೌಕರರು ಹಾಗೂ ಕಂಪನಿಗಳ ನೆರವಿಗೆ ಸರ್ಕಾರ ಧಾವಿಸಿದೆ.
ಉಡುಪು ಉತ್ಪಾದನೆ ಕ್ಷೇತ್ರದಲ್ಲಿ ಸರ್ಕಾರ 1 ಕೋಟಿ ಉದ್ಯೋಗ ಸೃಷ್ಟಿಯ ಉದ್ದೇಶ ಹೊಂದಿದೆ. ಈಗ ತೆಗೆದುಕೊಳ್ಳುವ ನಿರ್ಧಾರವು ಇದಕ್ಕೆ ಸಹಕಾರಿಯಾಗಲಿದೆ ಎಂದು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯ ವಿವರಗಳನ್ನು ಕೇಂದ್ರ ಕಾರ್ಮಿಕ ಖಾತೆ ಸಚಿವ ಎಸ್.ಕೆ. ಗಂಗ್ವಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಮುನ್ನ ಶೇ.8.33ರಷ್ಟುಪಿಎಫ್ ಪಾಲನ್ನು ಭರಿಸಲು 2016ರಲ್ಲಿ ಸರ್ಕಾರ ನಿರ್ಧರಿಸಿತ್ತು. ಆದರೆ ಇದನ್ನು ಈಗ ಶೇ.12ಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.