ಗುಡ್ ಬೈ 2018 : ಇಂಥದ್ದು 2019ರಲ್ಲಿ ಬೇಡಪ್ಪಾ ಬೇಡ..!
2018ರ ಅಧ್ಯಾಯ ಮುಗಿದಿದ್ದು, 2019ಕ್ಕೆ ಪದಾರ್ಪಣೆ ಮಾಡುತ್ತಿದ್ದೇವೆ. ಆದರೆ 2018 ಅನೇಕ ದುರಂತಗಳಿಗೆ ಸಾಕ್ಷಿಯಾಗಿದೆ. ಕರ್ನಾಟಕ ಮತ್ತು ಸಂಪೂರ್ಣ ಭಾರತವನ್ನೂ ಕಾಡಿದ, ಕಣ್ಣೀರು ಹಾಕಿಸಿದ ಅನೇಕ ಕುಟುಂಬಗಳ ಸ್ಥಿತಿಯನ್ನೇ ಬದಲಾಯಿಸಿದ ಕರುಣಾಜನಕ ಘಟನೆಗಳ ಸಮಗ್ರ ಚಿತ್ರಣ ಇಲ್ಲಿದೆ.
ಜ. 3 : ಕರಾವಳಿ ಕೋಮುಸಂಘರ್ಷ
ಮಂಗಳೂರು ಹೊರವಲಯದ ಕಾಟಿಪಳ್ಯದಲ್ಲಿ ಜ.3 ರಂದು ಹಿಂದೂ ಸಂಘಟನೆ ಕಾರ್ಯಕರ್ತ ದೀಪಕ್ ರಾವ್ (28) ಎಂಬುವರ ಹತ್ಯೆಯಾಯಿತು. ಇದು ಕೋಮುಸಂಘರ್ಷದ ರೂಪ ಪಡೆದು, ಜ. 7 ರಂದು ಬಶೀರ್ ಎಂಬುವರ ಕೊಲೆಯಲ್ಲಿ ಅಂತ್ಯವಾಯಿತು.
ಮಾ. 7: ಲೋಕಾಯುಕ್ತರಿಗೇ ಚಾಕು ಇರಿತ
ಎಂದೂ ಕಾಣದ ಘೋರ ಘಟನೆಗೆ ಮಾ.7 ರಂದು ರಾಜ್ಯ ಸಾಕ್ಷಿಯಾಯಿತು. ಲೋಕಾಯುಕ್ತರ ಕಚೇರಿಯಲ್ಲೇ ಲೋಕಾಯುಕ್ತ ನ್ಯಾ| ವಿಶ್ವನಾಥ ಶೆಟ್ಟಿಯವರಿಗೆ ವ್ಯಕ್ತಿಯೊಬ್ಬ 5 ಬಾರಿ ಚಾಕುವಿನಿಂದ ಇರಿದ. ಅದೃಷ್ಟವಶಾತ್ ಲೋಕಾಯುಕ್ತರು ಪ್ರಾಣಾಪಾಯದಿಂದ ಪಾರಾದರು.
ಫೆ.18 : ಹ್ಯಾರಿಸ್ ಪುತ್ರ ನಲಪಾಡ್ ರೌಡಿಸಂ
ಉದ್ಯಮಿಯೊಬ್ಬರ ಪುತ್ರ ವಿದ್ವತ್ ಮೇಲೆ ಬೆಂಗಳೂರಿನ ಶಾಂತಿ ನಗರ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಫೆ. 18 ರಂದು ಮಾರಣಾಂತಿಕ ಹಲ್ಲೆ ನಡೆಸಿ ಬಂಧಿತನಾದ. ಕೆಲ ತಿಂಗಳ ಕಾಲ ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿದ.
ಮಾ. 3: ಕಾಡಾನೆ ಸಿಟ್ಟಿಗೆ ಅರಣ್ಯಾಧಿಕಾರಿ ಬಲಿ
ಕಾಡ್ಗಿಚ್ಚು ಸಮೀಕ್ಷೆ ನಡೆಸುತ್ತಿದ್ದ ಐಎಫ್ಎಸ್ ಅಧಿಕಾರಿ ಮಣಿಕಂಠನ್ (45) ಮೇಲೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಕಾಡಾನೆಯೊಂದು ಮಾ.೩ರಂದು ದಾಳಿ ನಡೆಸಿ ಹೊಸಕಿ ಹಾಕಿತು.
ಜು. 1: ಬುರಾರಿಯಲ್ಲಿ 11 ಜನರ ನಿಗೂಢ ಸಾವು
ರಾಷ್ಟ್ರ ರಾಜಧಾನಿ ದೆಹಲಿಯ ಬುರಾರಿಯಲ್ಲಿ ಜು. 1ರಂದು ಒಂದೇ ಕುಟುಂಬದ 11 ಮಂದಿ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾದರು. ‘ಬುರಾರಿ ಸಾವುಗಳು’ ಎಂದೇ ಈ ಪ್ರಕರಣ ಚರ್ಚೆಯಾಯಿತು. ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೊನೆಗೆ ಪೊಲೀಸರು ತೆರೆ ಎಳೆದರು.
ಏ.11 : ವರ್ಷದಲ್ಲೇ ಭೀಕರ ವಿಮಾನ ದುರಂತ
4 ವರ್ಷಗಳ ಬಳಿಕ ಭೀಕರ ವಿಮಾನ ದುರಂತವೊಂದು ಏ.11ರಂದು ಸಂಭವಿಸಿತು. ಅಲ್ಜೀರಿಯಾದಲ್ಲಿ ಸೇನಾ ವಿಮಾನ ಪತನಗೊಂಡು 257 ಮಂದಿ ಮೃತಪಟ್ಟರು. 2013 ರ ಮಲೇಷ್ಯಾ ವಿಮಾನ ದುರಂತ ಬಳಿಕ ಇದು ಅತಿದೊಡ್ಡ ದುರ್ಘಟನೆ.
ಅ.19: ರೈಲು ಹರಿದು 61 ಸಾವು
ಪಂಜಾಬ್ನ ಅಮೃತಸರ ಬಳಿ ರೈಲ್ವೆ ಹಳಿ ಮೇಲೆ ನಿಂತು ರಾವಣದಹನ ವೀಕ್ಷಿಸುತ್ತಿದ್ದವರ ಮೇಲೆ ರೈಲು ಹರಿದು ನೋಡನೋಡುತ್ತಿದ್ದಂತೆ 61 ಜನ ಅ. 19 ರಂದು ಹೆಣವಾದರು. ಪಟಾಕಿ ಸಿಡಿತ ಶಬ್ದದಿಂದಾಗಿ ರೈಲು ಬಂದಿದ್ದು ಇವರಿಗೆ ಗೊತ್ತಾಗಿರಲಿಲ್ಲ.
ನ.24: ಮಂಡ್ಯ ಬಸ್ ನಾಲೆಗೆ ಪಲ್ಟಿ: 30 ಸಾವು
ಮಂಡ್ಯ ಜಿಲ್ಲೆ ಘೋರ ದುರಂತವೊಂದಕ್ಕೆ ಸಾಕ್ಷಿಯಾಯಿತು. ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ಖಾಸಗಿ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ 18 ಅಡಿ ಆಳದ ವಿಶ್ವೇಶ್ವರಯ್ಯ ನಾಲೆಗೆ ಉರುಳಿದ್ದರಿಂದ ೩೦ ಮಂದಿ ಜಲಸಮಾಧಿಯಾದರು.
ಡಿ. 14: ವಿಷ ಪ್ರಸಾದಕ್ಕೆ 17 ದುರ್ಮರಣ
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ಮಾರಮ್ಮನ ದೇಗುಲದ ವಿಷ ಪ್ರಸಾದ ಸೇವಿಸಿ 17 ಮಂದಿ ಸಾವನ್ನಪ್ಪಿದರು. ಟ್ರಸ್ಟ್ ಅಧಿಕಾರಕ್ಕಾಗಿ ವಿಷ ಬೆರೆಸಿದ್ದ ಟ್ರಸ್ಟ್ ಅಧ್ಯಕ್ಷ ಸಾಲೂರು ಮಠದ ಕಿರಿಯ ಶ್ರೀ, ಇತರ ಮೂವರು ಜೈಲು ಸೇರಿದರು.
ಜು. 11: ಜಾವೆಲಿನ್ ಕುತ್ತಿಗೆ ಸೀಳಿತು
ಜಾವೆಲಿನ್ ಎಸೆತ ಸ್ಪರ್ಧೆ ಶಾಲಾ-ಕಾಲೇಜುಗಳಲ್ಲಿ ಸಾಮಾನ್ಯ. ಆದರೆ ಈ ಆಟ ಹಾವೇರಿ ಜಿಲ್ಲೆಯ ಕೆರವಡಿ ಗ್ರಾಮದಲ್ಲಿ 15 ವರ್ಷದ ವಿದ್ಯಾರ್ಥಿ ಬಲಿ ಪಡೆದ ದಾರುಣ ಘಟನೆ ಜು. 11ರಂದು ನಡೆಯಿತು. ಸಹಪಾಠಿ ಎಸೆದ ಭರ್ಜಿ ಕುತ್ತಿಗೆ ಸೀಳಿ ಮಲ್ಲಿಕ್ ಎಂಬ ಬಾಲಕ ಮೃತಪಟ್ಟ.
ನ.5: ದೆಹಲಿ ನರಳಿತು
ಪಂಜಾಬ್, ಹರ್ಯಾಣ ರೈತರು ಕಟಾವಿನ ನಂತರ ಬೆಳೆ ತ್ಯಾಜ್ಯಕ್ಕೆ ಬೆಂಕಿ ಹಚ್ಚಿದ್ದು ಹಾಗೂ ಮಿತಿಮೀರಿದ ವಾಯುಮಾಲಿನ್ಯದಿಂದಾಗಿ ನವೆಂಬರ್ನಾದ್ಯಂತ ದೆಹಲಿ ಹಲವು ಬಾರಿ ನರಳಿತು. ಜನರು ಉಸಿರಾಡಲೂ ಕಷ್ಟಪಡುವಂತಹ ಸ್ಥಿತಿ ನಿರ್ಮಾಣವಾಯಿತು.
ನ. 16: ತಮಿಳುನಾಡಿನ ಮೇಲೆ ಗಜ ದಾಳಿ
ತಮಿಳುನಾಡು, ಪುದುಚೇರಿಗೆ 120 ಕಿ.ಮೀ. ವೇಗದಲ್ಲಿ ‘ಗಜ’ ಚಂಡಮಾರುತ ನ. 16ರಂದು ಅಪ್ಪಳಿಸಿತು. ಬಿರುಗಾಳಿ ಮಳೆ ಯಿಂದಾಗಿ ಭಾರಿ ಹಾನಿಯಾಯಿತು. 28 ಮಂದಿ ಬಲಿಯಾದರು.
ಜೂ.24: ಶಾಲೆ ಮುಚ್ಚಿಸಲು ವಿದ್ಯಾರ್ಥಿ ಹತ್ಯೆ
ಶಿಕ್ಷಕರು ಬೈದಿದ್ದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಯೊಬ್ಬ ಶಾಲೆಯನ್ನೇ ಮುಚ್ಚಿಸಬೇಕು ಎಂದು ವಿದ್ಯಾರ್ಥಿಯೊಬ್ಬನನ್ನು ಶಾಲೆಯಲ್ಲೇ ಇರಿದು ಕೊಂದ ಘಟನೆ ವಡೋದರಾದಲ್ಲಿ ನಡೆಯಿತು. ದುರುಳ ವಿದ್ಯಾರ್ಥಿಯನ್ನು ಜೂ. 24ರಂದು ಬಂಧಿಸಲಾಯಿತು.
ಆ.9 : ಕೊಡಗು, ಕೇರಳ ಜಲಪ್ರಳಯ
ಆಗಸ್ಟ್ನಲ್ಲಿ ಕರ್ನಾಟಕದ ಕೊಡಗು ಹಾಗೂ ಕೇರಳ ಜನರು ಜಲಪ್ರಳಯಕ್ಕೆ ಸಾಕ್ಷಿಯಾದರು. ಭಾರಿ, ಮಳೆ ಪ್ರವಾಹ ಹಾಗೂ ಭೂಕುಸಿತದಿಂದ ನಿರಾಶ್ರಿತರಾದರು.
ಕೇರಳವೊಂದರಲ್ಲಿ 400ಕ್ಕೂ ಅಧಿಕ ಜನರು ಬಲಿಯಾದರೆ, ಕೊಡಗು ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಜನ ಬಲಿಯಾದರು.
ನ.24 : ಮಂಡ್ಯ ಬಸ್ ನಾಲೆಗೆ ಪಲ್ಟಿ
30 ಸಾವು ಮಂಡ್ಯ ಜಿಲ್ಲೆ ಘೋರ ದುರಂತವೊಂದಕ್ಕೆ ಸಾಕ್ಷಿಯಾಯಿತು. ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ಖಾಸಗಿ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ 18 ಅಡಿ ಆಳದ ವಿಶ್ವೇಶ್ವರಯ್ಯ ನಾಲೆಗೆ ಉರುಳಿದ್ದರಿಂದ 30 ಮಂದಿ ಜಲಸಮಾಧಿಯಾದರು.
ಡಿ. 14: ವಿಷ ಪ್ರಸಾದಕ್ಕೆ 17 ದುರ್ಮರಣ
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ಮಾರಮ್ಮನ ದೇಗುಲದ ವಿಷ ಪ್ರಸಾದ ಸೇವಿಸಿ 17 ಮಂದಿ ಸಾವನ್ನಪ್ಪಿದರು. ಟ್ರಸ್ಟ್ ಅಧಿಕಾರಕ್ಕಾಗಿ ವಿಷ ಬೆರೆಸಿದ್ದ ಟ್ರಸ್ಟ್ ಅಧ್ಯಕ್ಷ ಸಾಲೂರು ಮಠದ ಕಿರಿಯ ಶ್ರೀ, ಇತರ ಮೂವರು ಜೈಲು ಸೇರಿದರು.