ಮನೋಹರ್ ಪರ್ರಿಕರ್ ಮೃತದೇಹವಿಟ್ಟಿದ್ದ ಕಲಾ ಅಕಾಡೆಮಿ ಶುದ್ಧೀಕರಣ| ಸರ್ಕಾರದಿಂದ ತನಿಖೆಗೆ ಆದೇಶ

ಪಣಜಿ[ಮಾ.24]: ಗೋವಾದಲ್ಲಿ ದಂಗು ಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಮಾರ್ಚ್ 17 ರಂದು ಕೊನೆಯುಸಿರೆಳೆದಿದ್ದರು. ಮಾಜಿ ರಕ್ಷಣಾ ಸಚಿವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಪಣಜಿಯಲ್ಲಿರುವ ರಾಜಕೀಯ ಕಲಾ ಅಕಾಡೆಮಿಯಲ್ಲಿ ಇರಿಸಲಾಗಿತ್ತು. ಆದರೀಗ ಅಂತಿಮ ಕ್ರಿಯೆ ನಡೆದ ಬೆನ್ನಲ್ಲೇ ಪಾರ್ಥೀವ ಶರೀರವಿರಿಸಿದ್ದ ಸ್ಥಳವನ್ನು ಶುದ್ಧೀಕರಣ ಮಾಡಲಾದ ವಿಚಾರ ಭಾರೀ ವಿವಾದ ಹುಟ್ಟು ಹಾಕಿದೆ.

Add Asianetnews Kannada as a Preferred SourcegooglePreferred

ರಾಜಕೀಯ ಕಲಾ ಅಕಾಡೆಮಿಯಲ್ಲಿ ಮಾಜಿ ಸಿಎಂ ಮನೋಹರ್ ಪರ್ರಿಕರ್ ಪಾರ್ಥೀವ ಶರೀರವನ್ನಿರಿಸಿರುವ ಸ್ಥಳವನ್ನು ಶುದ್ದೀಖರಿಸಲಾಗಿದೆ ಎಮದು ಶನಿವಾರದಂದು ಗೋವಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಭಾರೀ ಆಕ್ರೊಶ ವ್ಯಕ್ತವಾಗಿದೆ. ಹೀಗಾಗಿ ಸರ್ಕಾರ ಈ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಆದೇಶಿಸಿದೆ.

ಗೋವಾದ ಕಲಾ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಗಾವ್ಡೆ ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ 'ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯನ್ವ ಅಕಾಡೆಮಿ ಪರಿಸರದಲ್ಲಿ ಮನೋಹರ್ ಪರ್ರಿಕರ್ ರವರ ಮೃತದೇಹವನ್ನಿರಿಸಿದ್ದ ಸ್ಥಳವನ್ನು ಕೆಲ ಅಪರಿಚಿತ ವ್ಯಕ್ತಿಗಳು ಶುದ್ಧೀಕರಿಸಿದ್ದಾರೆಂದು ತಿಲಿದು ಬಂದಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸರ್ಕಾರಿ ಕಟ್ಟಡಗಳಲ್ಲಿ ಅವೈಜ್ಞಾನಿಕ ವಿಧಿ ವಿಧಾನಗಳ ಅನುಕರಣೆಯನ್ನು ಖಂಡಿಸುತ್ತೇನೆ. ಈ ಕುರಿತಾಗಿ ತನಿಖೆಗೆ ಆದೇಶಿಸಿದ್ದೇನೆ' ಎಂದಿದ್ದಾರೆ.