ಧಾರವಾಡ(ಸೆ.18): ಕಾವೇರಿ ಕಿಚ್ಚು ರಾಜ್ಯದಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ನಡುವೆ ಗೋವಾ ಸರ್ಕಾರ ಮಹದಾಯಿ ವಿವಾದವನ್ನು ಕೆದಕುವ ಯತ್ನ ಮಾಡಿದೆ. ಕರ್ನಾಟಕ 7 ಟಿಎಂಸಿ ನೀರು ಕೇಳುವುದು ಸರಿಯಲ್ಲ ಎಂದು ಮಹದಾಯಿ ನ್ಯಾಯಾಧಿಕರಣಕ್ಕೆ ಅಫಿಡವಿಟ್ ಸಲ್ಲಿಸಿದೆ. ಇದು ಕಳಸಾ ಹೋರಾಟಗಾರರನ್ನು ಕೆರಳಿಸಿದೆ.
ಬೆಣ್ಣೆಹಳ್ಳ ಮುಂದಿಟ್ಟುಕೊಂಡು ಕರ್ನಾಟಕ ಕೆಣಕಿದ ಗೋವಾ
ಕರ್ನಾಟಕದಲ್ಲಿ ಕಾವೇರಿ ಕದನ ಬೂದಿ ಮುಚ್ಚಿದ ಕೆಂಡದಂತಿದೆ. ಈ ನಡುವೆ ಮಹದಾಯಿ ಕಿಚ್ಚು ಸ್ಫೋಟಿಸುವ ಎಲ್ಲ ಲಕ್ಷಣಗಳು ಉತ್ತರ ಕರ್ನಾಟಕದಲ್ಲಿ ಕಂಡುಬರುತ್ತಿವೆ. ಇದಕ್ಕೆಲ್ಲಾ ಕಾರಣ ಗೋವಾ ಸರ್ಕಾರ. ಮಹದಾಯಿ ವಿವಾದದಲ್ಲಿ ಗೋವಾ ಸರ್ಕಾರ ಕರ್ನಾಟಕವನ್ನು ಕೆಣಕಿದೆ. ಅದು ಬೆಣ್ಣೆಹಳ್ಳದಲ್ಲಿ ಹರಿಯುವ ನೀರನ್ನು ಮುಂದಿಟ್ಟುಕೊಂಡು ಮಹದಾಯಿ ನ್ಯಾಯಾಧೀಕರಣಕ್ಕೆ ಗೋವಾ ಸರ್ಕಾರದ ಪರ ವಕೀಲರು ಅಫಿಡವಿಟ್ ಸಲ್ಲಿಸಿದ್ದಾರೆ. ಕರ್ನಾಟಕ ಬೆಣ್ಣೆಹಳ್ಳದಲ್ಲಿ ಹರಿಯುವ 10 ಟಿಎಂಸಿ ನೀರನ್ನು ಬಳಸಿಕೊಳ್ಳುದು ಬಿಟ್ಟು ಮಹದಾಯಿಯಿಂದ 7 ಟಿಎಂಸಿ ನೀರು ಕೇಳುವುದು ಸರಿಯಲ್ಲ ಎಂದು ವಾದಿಸಿದೆ. ಇದು ಮಹದಾಯಿ ಹೋರಾಟಗಾರರನ್ನು ಕೆರಳಿಸಿದೆ.
ಮಹದಾಯಿ ವಿವಾದವನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿರುವ ಗೋವಾ, ಬೆಣ್ಣೆಹಳ್ಳವನ್ನು ಎಳೆತಂದಿದೆ. ಧಾರವಾಡದ ದುಂಡಸಿ ಗ್ರಾಮದಲ್ಲಿ ಹುಟ್ಟುವ ಬೆಣ್ಣೆಹಳ್ಳದ ನೀರು ಕುಡಿಯಲು ಮತ್ತು ಕೃಷಿಗೆ ಯೋಗ್ಯವಲ್ಲ. ಇಲ್ಲಿ ಸಿಗುವ ನೀರಿನ ಪ್ರಮಾಣವನ್ನು ಗೋವಾ ಸರ್ಕಾರ ಮುಂದಿಡುತ್ತಿದೆಯೋ ಹೊರತು ಅದರ ಗುಣಮಟ್ಟವನ್ನು ಹೇಳುತ್ತಿಲ್ಲ ಏಕೆ ಅನ್ನೋದು ಹೋರಾಟಗಾರರ ಪ್ರಶ್ನೆ
ಉತ್ತರ ಕರ್ನಾಟಕದ ಬಹುತೇಕ ತಾಲೂಕುಗಳಿಗೆ ಮಲಪ್ರಭಾ ಜಲಾಶಯವೇ ಕುಡಿಯುವ ನೀರಿನ ಮೂಲ. ಆದರೆ, ಈ ಅಂಶವನ್ನು ಮರೆಮಾಚುವ ನಿಟ್ಟಿನಲ್ಲಿ ಗೋವಾ ಸರ್ಕಾರ ಹಲವು ಮಿಥ್ಯಗಳನ್ನು ಸೃಷ್ಟಿಸಿ ಕರ್ನಾಟಕವನ್ನು ಕೆಣಕಿದೆ. ಗೋವಾದ ಹೊಸ ಕ್ಯಾತೆಗೆ ಕರ್ನಾಟಕ ಮಹದಾಯಿ ನ್ಯಾಯಾಧಿಕರಣದಲ್ಲಿ ತಕ್ಕ ಉತ್ತರ ನೀಡಬೇಕಿದೆ.
