Call Of Duty: ರಸ್ತೆಯಲ್ಲೇ ಕಾರು ನಿಲ್ಲಿಸಿ ಅಸಲಿ ವೃತ್ತಿಗಿಳಿದ ಸಿಎಂ!
ಮುಖ್ಯಮಂತ್ರಿಯಾದರೂ ವೈದ್ಯಕೀಯ ಧರ್ಮ ಮರೆಯದ ಪ್ರಮೋದ್ ಸಾವಂತ್| ಅಪಘಾತದಲ್ಲಿ ಗಾಯಾಳುವಾಗಿದ್ದ ಮಹಿಳೆಗೆ ತುರ್ತು ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸಿದ ಗೋವಾ ಸಿಎಂ| ಸಿಎಂ ಕರ್ತವ್ಯ ನಿಷ್ಠೆಗೆ ಸಲಾಂ ಎಂದ ಜನತೆ
ಪಣಜಿ[ಅ.05]: ಅಪಾಯದಲ್ಲಿದ್ದವರಿಗೆ ಸಹಾಯ ಮಾಡುವುದು, ಟ್ರಾಫಿಕ್ ಕ್ಲಿಯರ್ ಮಾಡುವುದು ಹೀಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುವ ಮೂಲಕ ರಾಜಕಾರಣಿಗಳು ಸುದ್ದಿಯಾಗುತ್ತಾರೆ. ಸದ್ಯ ಈ ಪಟ್ಟಿಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ಹೆಸರು ಕೂಡಾ ಸೇರಿದೆ. ಸಿಎಂ ಅಗುವುದಕ್ಕೂ ಮುನ್ನ ಓರ್ವ ವೃತ್ತಿಪರ ವೈದ್ಯರಾಗಿದ್ದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪ್ರವಾಸಿಗರ ನೆರವಿಗೆ ಧಾವಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ರಸ್ತೆ ರಿಪೇರಿ ಬಳಿಕ ಹೊಸ ರೂಲ್ಸ್ ಜಾರಿ; ನಿಟ್ಟುಸಿರು ಬಿಟ್ಟ ಸವಾರರು!
ಗೋವಾದ ಜನನಿಬಿಡ ಪ್ರದೇಶ, ಸೌತ್ ಗೋವಾ ಮತ್ತು ನಾರ್ತ್ ಗೋವಾವನ್ನು ಸಂಪರ್ಕಿಸುವ ಜುವಾರಿ ಸೇತುವೆ ಮೇಲೆ ಸಂಭವಿಸಿದ ಅಪಘಾತವೊಂದು ಸಂಭವಿಸಿತ್ತು. ಸ್ಕೂಟಿಯಲ್ಲಿ ಬರುತ್ತಿದ್ದ ಮಹಿಳಾ ಪ್ರವಾಸಿಗರೊಬ್ಬರು ಈ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದರು. ಸ್ಥಳೀಯರು ಪೊಲೀಸರಿಗೆ ಹಾಗೂ ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದರು. ಆದರೆ ಅದಕ್ಕೂ ಮುನ್ನ ಅದೇ ದಾರಿಯಲ್ಲಿ ತಮ್ಮ ಕೆಲಸದ ನಿಮಿತ್ತ ಪ್ರಯಾಣಿಸುತ್ತಿದ್ದ ಗೋವಾ ಸಿಎಂ ಇದನ್ನು ಗಮನಿಸಿದ್ದಾರೆ. ಮುಖ್ಯಮಂತ್ರಿಯಾಗುವುದಕ್ಕೂ ಮುನ್ನ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದ ಸಿಎಂ ಕೂಡಲೇ ತಮ್ಮ ಕಾರು ನಿಲ್ಲಿಸಿ ಆ ಪ್ರವಾಸಿಗರ ನೆರವಿಗೆ ಧಾವಿಸಿದ್ದಾರೆ. ಈ ಮೂಲಕ ತಮ್ಮ ವೈದ್ಯಕೀಯ ಧರ್ಮ ಪಾಲಿಸಿದ್ದಾರೆ.
ಮಹಿಳೆಗೆ ತುರ್ತು ಹಾಗೂ ಪ್ರಾಥಮಿಕ ಚಿಕಿತ್ಸೆ ನೀಡಿದ ಗೋವಾ ಸಿಎಂ ಪ್ರಮೋದ್ ಸಾವಂತ್ ಬಳಿಕ ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಸಿಎಂ ಸಾಹೇಬರ ಮಾನವೀಯತೆಗೆ ಸಲಾಂ ಎಂದಿದ್ದಾರೆ.
ಮಾನವೀಯತೆ ಮೆರೆದ ಗೋವಾ ಸಿಎಂ, ಸುದ್ದಿಯನ್ನು ಇಂಗ್ಲೀಷ್ನಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ