ತ್ರಿವಳಿ ತಲಾಖ್ ಪದ್ಧತಿಗೆ ಸುಪ್ರೀಕೋರ್ಟ್ ವಿದಾಯ ಹೇಳಿ ತೀರ್ಪು ನೀಡಿದರೆ ಇತ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಘರ್ ವಾಪ್ಸಿ ಪ್ರಕರಣವೊಂದು ಸದ್ದಿಲ್ಲದೆ ನಡೆಯಿತು. ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದ ವ್ಯಕ್ತಿಯೊಬ್ಬ ತನ್ನ ಪುತ್ರನ ಸಮೇತ ಹಿಂದೂ ಧರ್ಮಕ್ಕೆ ವಾಪಸಾಗಿದ್ದಾರೆ. ಹಾಗಿದ್ದರೆ ಅವರು ಯಾರು? ಹೀಗೆ ಮರಳಿ ಮಾತೃ ಧರ್ಮ ಸೇರಲು ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ ವಿವರ.

ಮೈಸೂರು(ಆ.23): ಪುರೋಹಿತರಿಂದ ಮಂತ್ರ ಪಠಣ, ಹೋಮ ಹವನ ಇದು ಸಾಂಸ್ಕೃತಿಕ ನಗರಿ ಮೈಸೂರಲ್ಲಿ ನಡೆದ ಘರ್ ವಾಪಸ್ಸಿ ಕಾರ್ಯಕ್ರಮ. 20 ವರ್ಷಗಳ ಹಿಂದೆ ಒತ್ತಡಕ್ಕೆ ಬಿದ್ದು ಮುಸ್ಲಿಂ ಯುವತಿ ಮದುವೆಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದ ಸೈಯದ್ ಇದೀಗ ತನ್ನ ಮಗನೊಂದಿಗೆ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದಾರೆ. 20 ವರ್ಷಗಳ ಹಿಂದೆ ಮದುವೆಯಾಗಿ ಮತಾಂತರಾವಗಿದ್ದ ಸೈಯದ್ ಅಬ್ಬಾಸ್ಗೆ ಇಬ್ಬರು ಗಂಡು ಮಕ್ಕಳು. ಆದ್ರೆ ಕಿರಿಯ ಪುತ್ರನೊಂದಿಗೆ ಅಬ್ಬಾಸ್ ಪತ್ನಿ ಕುಟುಂಬ ತೊರೆದು ತಮಿಳುನಾಡಿಗೆ ಹೋಗಿ ನೆಲೆಸಿದ್ದಾಳಂತೆ. ಇತ್ತ ಅಬ್ಬಾಸ್ ನಿನ್ನೆ ಮತ್ತೊಬ್ಬ ಮಗನ ಜೊತೆ ಆರ್ಯ ಸಮಾಜದ ಪೌರೋಹಿತ್ಯರ ಸಮ್ಮುಖದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು.

Add Asianetnews Kannada as a Preferred SourcegooglePreferred

ಮತ್ತೆ ಹಿಂದೂ ಧರ್ಮ ದೀಕ್ಷೆ ಪಡೆದ ಸೈಯದ್ ಅಬ್ಬಾಸ್ ಇಸ್ಲಾಂಗೆ ಮತಾಂತರವಾಗುವ ಪೂರ್ವದಲ್ಲೇ ಇದ್ದ ಶೇಷಾದ್ರಿ ಹೆಸರನ್ನೇ ಪುನರ್ ನಾಮಕರಣ ಮಾಡಿಕೊಂಡರು. ಪುತ್ರ ಸೈಯದ್ ಅತೀಕ್​'ನಿಗೆ ಹರ್ಷಿಲ್ ಆರ್ಯ ಎಂದು ಮರು ನಾಮಕರಣ ಮಾಡಿದ್ದಾರೆ. ಈ ಘರ್ ವಾಪ್ಸಿ ಪ್ರಸಂಗಕ್ಕೆ ಆರ್ಯ ಸಮಾಜದ ಮುಖ್ಯಸ್ಥರಾದ ಶ್ರೀಕಂಠಯ್ಯ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೂಡ ಸಾಕ್ಷಿಯಾದರು.

ಒಟ್ಟಾರೆ ದೇಶಾದ್ಯಂತ ತ್ರಿವಳಿ ತಲಾಖ್ ರದ್ದು ಮಾಡಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ವ್ಯಾಪಕ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಇಸ್ಲಾಂ ಧರ್ಮ ತೊರೆದ ಅಪ್ಪ ಮಗ ಮಾತೃ ಧರ್ಮಕ್ಕೆ ವಾಪಸಾಗಿ ಅಚ್ಚರಿ ಮೂಡಿಸಿದ್ದಾರೆ.