ಇಷ್ಟು ಕಡಿಮೆ ಸಮಯದಲ್ಲಿ ನೀವಿನ್ನು ಮೈಸೂರಿನಿಂದ ಚೆನ್ನೈಗೆ ಪ್ರಯಾಣಿಸಬಹುದು!
ಚೆನ್ನೈ ಹಾಗೂ ಮೈಸೂರು ನಡುವೆ ಇನ್ನು ಮುಂದೆ ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರಯಾಣ ಮಾಡಬಹುದಾಗಿದೆ. ಇದಕ್ಕೆ ಕಾರಣ ಈ 2 ನಗರಗಳ ನಡುವಿನ ಹೈ ಸ್ಪೀಡ್ ರೈಲು ಯೋಜನೆಗೆ ಮರು ಜೀವ ಬಂದಿದೆ.
ನವದೆಹಲಿ: ‘145 ತಿರುವುಗಳಿರುವ ಕಾರಣ ಕಾರ್ಯಸಾಧುವಲ್ಲ’ ಎಂಬ ಕಾರಣಕ್ಕೆ ನನೆಗುದಿಗೆ ಬಿದ್ದಿದ್ದ ಚೆನ್ನೈ-ಮೈಸೂರು ಹೈಸ್ಪೀಡ್ ರೈಲು ಯೋಜನೆಗೆ ಮರುಜೀವ ಬಂದಿದೆ.
ಉಭಯ ನಗರಗಳ ಪ್ರಯಾಣ ಅವಧಿಯನ್ನು 2030ರ ವೇಳೆಗೆ 5 ತಾಸಿನಷ್ಟುಕಡಿತಗೊಳಿಸುವ ಈ ಯೋಜನೆಯ ಕಾರ್ಯಸಾಧು ವರದಿಯನ್ನು ರೈಲ್ವೆ ಮಂಡಳಿಗೆ ಜರ್ಮನಿ ಸರ್ಕಾರ ಸಲ್ಲಿಸಿದೆ. ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವನಿ ಲೋಹಾನಿ ಅವರಿಗೆ ಜರ್ಮನಿ ರಾಯಭಾರಿ ಮಾರ್ಟಿನ್ ನೇ ಅವರು, 435 ಕಿ.ಮೀ. ಉದ್ದದ ಈ ಮಾರ್ಗದ ಅಧ್ಯಯನ ನಡೆಸಿದ ವರದಿಯನ್ನು ಶುಕ್ರವಾರ ಸಲ್ಲಿಸಿದರು.
ಗಂಟೆಗೆ 320 ಕಿ.ಮೀ. ವೇಗದಲ್ಲಿ ಸಾಗುವ ಈ ರೈಲು ಚೆನ್ನೈನಿಂದ ಮೈಸೂರಿಗೆ ಕೇವಲ 2.20 ತಾಸಿನಲ್ಲಿ ಕ್ರಮಿಸಲಿದೆ. ಹಾಲಿ ಇರುವ ಸಾಮಾನ್ಯ ರೈಲು ಮಾರ್ಗದಲ್ಲಿ ಇಷ್ಟೇ ದೂರವನ್ನು ಕ್ರಮಿಸಲು ರೈಲುಗಳು ಸುಮಾರು 7 ತಾಸು ತೆಗೆದುಕೊಳ್ಳುತ್ತಿವೆ.
ಯೋಜನೆಯ ಪ್ರಕಾರ, ಚೆನ್ನೈ-ಅರಕ್ಕೋಣಂ-ಬೆಂಗಳೂರು-ಮೈಸೂರು ಮಾರ್ಗದ ಶೇ.85 ಭಾಗ ಎತ್ತರಿಸಿದ ಮಾರ್ಗವಾಗಲಿದೆ. ಶೇ.11ರಷ್ಟುಗುಹೆಗಳು ಈ ಮಾರ್ಗದಲ್ಲಿರಲಿವೆ. ಬೆಂಗಳೂರು-ಚೆನ್ನೈ ಪ್ರಯಾಣ ಅವಧಿ 100 ನಿಮಿಷಕ್ಕೆ, ಬೆಂಗಳೂರು-ಮೈಸೂರು ಪ್ರಯಾಣ ಅವಧಿಯನ್ನು 40 ನಿಮಿಷಕ್ಕೆ ತಗ್ಗಿಸಲಿದೆ ಎಂದು ಹೇಳಿದರು.
‘ಜರ್ಮನಿ ಸರ್ಕಾರವೇ ಹಣ ವಿನಿಯೋಗಿಸಿ ಅಧ್ಯಯನ ಮಾಡಿ ಕಾರ್ಯಸಾಧು ವರದಿ ಸಲ್ಲಿಸಿದೆ. ಇದು ಇಂತಹ ಮಾರ್ಗ ಅತ್ಯವಶ್ಯಕವಾಗಿರುವ ಮಾರ್ಗವಾಗಿದ್ದು, ಸಂಚಾರ ಸಮಸ್ಯೆಗೆ ಪರಿಹಾರ ಒದಗಿಸಲಿದೆ. ಸುಮಾರು 1 ಲಕ್ಷ ಕೋಟಿ ರುಪಾಯಿ ಖರ್ಚು ಇದರಿಂದ ತಗುಲಲಿದೆ’ ಎಂದರು.