ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಖರೀದಿ ಇನ್ಮುಂದೆ ಆಗಲಿದೆ ಕ್ಯಾಷ್'ಲೆಸ್
ತೈಲ ಕಂಪನಿಗಳು ಈಗಾಗಲೇ ಬೆಂಗಳೂರಿನ ಎಲ್ಲ ಎಲ್ಪಿಜಿ ಏಜೆನ್ಸಿಗಳನ್ನು ಸಂಪರ್ಕಿಸಿದ್ದು ಕ್ಯಾಶ್ಲೆಸ್ ವ್ಯವಹಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ಗಳೊಂದಿಗೆ ಏಜೆನ್ಸಿಗಳ ಖಾತೆಗಳನ್ನು ಹೊಂದಾಣಿಕೆ ಮಾಡುವ ಕಾರ್ಯವೂ ಆರಂಭಿಸಲಾಗಿದೆ. ಈ ಮೂಲಕ ಬೆಂಗಳೂರು ಮೊಟ್ಟಮೊದಲ ಎಲ್'ಪಿಜಿ ಕ್ಯಾಶ್'ಲೆಸ್ ವ್ಯವಹಾರ ನಗರಿ ಎಂಬ ಗರಿಮೆ ಪಡೆದುಕೊಳ್ಳಲಿದೆ.
ಬೆಂಗಳೂರು: ದೇಶದಲ್ಲಿ ರೂ.500 ಹಾಗೂ ರೂ.1000 ಮುಖಬೆಲೆಯ ನೋಟುಗಳ ಅಮಾನ್ಯದ ಬಳಿಕ ಕ್ಯಾಶ್'ಲೆಸ್ ವ್ಯವಹಾರಕ್ಕೆ ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ, ಇದೀಗ ಬೆಂಗಳೂರಿನಲ್ಲಿ ಅಡುಗೆ ಅನಿಲ ಸಿಲಿಂಡರ್ ಖರೀದಿಯನ್ನು ಸಂಪೂರ್ಣ ಕ್ಯಾಶ್'ಲೆಸ್ ಮಾಡಲು ಮುಂದಾಗಿದೆ. ಈಗಾಗಲೇ ಅನೇಕ ಗ್ಯಾಸ್ ಏಜೆನ್ಸಿಗಳು ಕ್ಯಾಶ್ಲೆಸ್ ವ್ಯವಹಾರ ಆರಂಭಿಸಿದ್ದು ಕಾರ್ಡ್ ಬಳಸಿ ಏಜೆನ್ಸಿಗಳ ಖಾತೆಗೆ ಹಣ ಜಮಾವಣೆ ಮೂಲಕ ಸಿಲಿಂಡರ್ ಖರೀದಿ ಮಾಡುತ್ತಿದ್ದಾರೆ.
ಕ್ಯಾಶ್'ಲೆಸ್ ಆರ್ಥಿಕತೆ ಕಟ್ಟಲು ಹೊರಟಿರುವ ಬೆನ್ನಲ್ಲೇ ಅತಿ ಹೆಚ್ಚು ವ್ಯವಹಾರ ಮಾಡುವ ಅಡುಗೆ ಅನಿಲ ವ್ಯವಹಾರವನ್ನು ಸಂಪೂರ್ಣ ಕ್ಯಾಶ್ಲೆಸ್ ಮಾಡಲು ತೈಲ ವಿತರಣಾ ಕಂಪನಿಗಳು ಮುಂದಾಗಿದ್ದು ಹಿಂದೂಸ್ತಾನ್ ಪೆಟ್ರೋಲಿಯಂ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಮೊದಲಾದ ಸಂಸ್ಥೆಗಳು ದೇಶದ ಐಟಿ ರಾಜಧಾನಿಯನ್ನು ದೇಶದ ಮೊಟ್ಟಮೊದಲ ಎಲ್ಪಿಜಿ ಕ್ಯಾಶ್ಲೆಸ್ ವ್ಯವಹಾರ ನಗರಿ ಮಾಡುವ ಗುರಿ ಹೊಂದಿದ್ದಾರೆ. ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಉಪಕಾರ್ಯದರ್ಶಿ ಕೆ.ಎಂ.ಮಹೇಶ್ ಬೆಂಗಳೂರಿನಲ್ಲಿ ಸಭೆ ನಡೆಸಿದ್ದು, ಕ್ಯಾಶ್'ಲೆಸ್ ವ್ಯವಹಾರದ ಕುರಿತು ಚರ್ಚಿಸಿದ್ದಾರೆ.
ಕ್ಯಾಶ್'ಲೆಸ್ ಆರಂಭ: ನೋಟು ಅಮಾನ್ಯದ ಬೆನ್ನಲ್ಲೇ ಆರಂಭಗೊಂಡ ನೋಟುಗಳ ಸಮಸ್ಯೆ ಹಿನ್ನೆಲೆಯಲ್ಲಿ ಬೆಂಗಳೂರಿನ ಹತ್ತಾರು ಏಜೆನ್ಸಿಗಳು ಈಗಾಗಲೇ ಕ್ಯಾಶ್ಲೆಸ್ ವ್ಯವಹಾರ ಆರಂಭಿಸಿವೆ. ಪೇಟಿಎಂ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಕೆಯನ್ನೂ ಆರಂಭಿಸಿದ್ದಲ್ಲದೇ ಅನೇಕ ಏಜೆನ್ಸಿಗಳ ಸಿಲಿಂಡರ್ ಸರಬರಾಜುದಾರರು ಸ್ವೈಪಿಂಗ್ ಮಷಿನ್ಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಪೇಟಿಎಂ ಮೂಲಕ ಸ್ಮಾರ್ಟ್ಫೋನ್ಗಳಿಂದಲೂ ಹಣ ಪಾವತಿ ಆರಂಭಿಸಿದ್ದಾರೆ. ಐಎಂಪಿಎಸ್ ಮಾಡಲು ಆರಂಭಿಸಿದ್ದಾರೆ.
ತೈಲ ಕಂಪನಿಗಳಿಂದ ಸಂಪರ್ಕ: ತೈಲ ಕಂಪನಿಗಳು ಈಗಾಗಲೇ ಬೆಂಗಳೂರಿನ ಎಲ್ಲ ಎಲ್ಪಿಜಿ ಏಜೆನ್ಸಿಗಳನ್ನು ಸಂಪರ್ಕಿಸಿದ್ದು ಕ್ಯಾಶ್ಲೆಸ್ ವ್ಯವಹಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ಗಳೊಂದಿಗೆ ಏಜೆನ್ಸಿಗಳ ಖಾತೆಗಳನ್ನು ಹೊಂದಾಣಿಕೆ ಮಾಡುವ ಕಾರ್ಯವೂ ಆರಂಭಿಸಲಾಗಿದೆ. ಈ ಮೂಲಕ ಬೆಂಗಳೂರು ಮೊಟ್ಟಮೊದಲ ಎಲ್'ಪಿಜಿ ಕ್ಯಾಶ್'ಲೆಸ್ ವ್ಯವಹಾರ ನಗರಿ ಎಂಬ ಗರಿಮೆ ಪಡೆದುಕೊಳ್ಳಲಿದೆ.
ಹೇಗೆಲ್ಲಾ ಪಾವತಿ?
ಏಜೆನ್ಸಿ ಖಾತೆಗೆ ಹಣ ವರ್ಗಾವಣೆ
ಆನ್ಲೈನ್ ಪಾವತಿ ಸೌಲಭ್ಯ
ಕಾರ್ಡ್ ಬಳಸಿಯೂ ಪಾವತಿಸಬಹುದು
ಮೊಬೈಲ್ ವ್ಯಾಲೆಟ್ಗೂ ಅವಕಾಶ
ತೈಲ ಕಂಪನಿಗಳು ನಮ್ಮನ್ನು ಸಂಪರ್ಕಿಸಿ ಕ್ಯಾಶ್ಲೆಸ್ ವ್ಯವಹಾರದ ಕುರಿತು ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಬ್ಯಾಂಕ್ ಖಾತೆ ಇಲ್ಲದವರು, ಕಾರ್ಡ್ ಇಲ್ಲದವರು ಏನು ಮಾಡಬೇಕೆಂಬ ಪ್ರಶ್ನೆ ಈಗ ಎದುರಾಗಿದೆ.
- ಶ್ರಿನಿವಾಸ ಗೌಡ, ಗ್ಯಾಸ್ ಏಜೆನ್ಸಿ ಮಾಲೀಕ
(epaper.kannadaprabha.in)