ಮಾಜಿ ಸಿಎಂ ಸಿದ್ದರಾಮಯ್ಯಗೆ ಹೊಸ ಆಫರ್
ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿಯಲ್ಲಿ ಗೆದ್ದಿರೋ ಸಿದ್ದರಾಮಯ್ಯ ಬಾದಾಮಿಯಲ್ಲೇ ಮನೆ ಮಾಡಲು ಮುಂದಾಗಿರೋ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯನವರಿಗೆ ಬಾದಾಮಿ ಅಭಿಮಾನಿಯೊಬ್ಬರು ಉಚಿತ ಬಾಡಿಗೆ ಮನೆ ಕೊಡಲು ಮುಂದೆ ಬಂದಿದ್ದಾರೆ.
ಬಾದಾಮಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿಯಲ್ಲಿ ಗೆದ್ದಿರುವ ಸಿದ್ದರಾಮಯ್ಯ ಬಾದಾಮಿಯಲ್ಲೇ ಮನೆ ಮಾಡಲು ಮುಂದಾಗಿದ್ದಾರೆ. ಇದೇ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯನವರಿಗೆ ಬಾದಾಮಿ ಅಭಿಮಾನಿಯೊಬ್ಬರು ಉಚಿತ ಬಾಡಿಗೆ ಮನೆ ಕೊಡಲು ಮುಂದೆ ಬಂದಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ನೂತನ ಶಾಸಕ ಸಿದ್ದರಾಮಯ್ಯ ಮನೆ ಮತ್ತು ಕಚೇರಿ ಮಾಡುವುದಾಗಿ ಈಗಾಗಲೇ ಹೇಳಿದ್ದರು. ಬಾದಾಮಿಯ ಸಿದ್ದರಾಮಯ್ಯ ಅಭಿಮಾನಿ ಶಂಕರಗೌಡ ಕೆಳಗಿನಮನಿ ಎಂಬುವರು ಉಚಿತ ಬಾಡಿಗೆ ಮನೆ ಆಫರ್ ಕೊಟ್ಟಿದ್ದಾರೆ.
ಬಾದಾಮಿಯ ಎಸ್ ಎಫ್ ಹೊಸ ಗೌಡರ ಕಾಲೋನಿಯ ಜಯನಗರದಲ್ಲಿರುವ ಮನೆ ಸುಸಜ್ಜಿತವಾದ ಡಬಲ್ ಬೆಡ್ ರೂಮ್, ಡೈನಿಂಗ್ ಹಾಲ್, ಆಫೀಸ್ ರೂಮ್, ಪೂಜಾ ರೂಮ್, ಕಾರ್ ಪಾರ್ಕಿಂಗ್ ಸೇರಿದಂತೆ 186 *150 ಅಳತೆಯ ವಿಶಾಲವಾದ ಹೊರಾಂಗಣ ಜಾಗವನ್ನು ಹೊಂದಿದೆ.
ಇನ್ನು ಶಂಕರಗೌಡ ಕೆಳಗಿನಮನಿ ಮನೆಯನ್ನು ಈಗಾಗಲೇ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಜೂನ್ 11 ರಂದು ಬಾದಾಮಿಗೆ ಆಗಮಿಸಿದ್ದ ವೇಳೆ ನೋಡಿದ್ದರು. ಅಲ್ಲದೇ ಬಾದಾಮಿ ಕಾಂಗ್ರೆಸ್ ಯುವ ಮುಖಂಡ ಮಹೇಶ್ ಹೊಸಗೌಡರ ಮನೆಯನ್ನೂ ಡಾ. ಯತೀಂದ್ರ ನೋಡಿದ್ದು, ಇವರು ಸಹಿತ ಸಿದ್ದರಾಮಯ್ಯ ರಿಗೆ ಉಚಿತ ಬಾಡಿಗೆ ಮನೆಕೊಡಲು ಸಿದ್ದವೆಂದಿದ್ದಾರೆ.
ಮೂಲತಃ ಗುತ್ತಿಗೆದಾರರಾಗಿರುವ ಶಂಕರಗೌಡ ಕೆಳಗಿನಮನಿ, ಐತಿಹಾಸಿಕ ಬಾದಾಮಿ ಕ್ಷೇತ್ರ ಅಭಿವೃದ್ದಿ ಜೊತೆಗೆ ಮಾಜಿ ಸಿಎಂ ಎನ್ನುವ ಕಾರಣಕ್ಕೆ ಉಚಿತ ಬಾಡಿಗೆ ಮನೆ ಕೊಡುವ ಮಹದಾಸೆ ಹೊಂದಿದ್ದೇನೆ ಎಂದು ಹೇಳಿದ್ದಾರೆ.