ಸಿದ್ದರಾಮಯ್ಯ ಪ್ರವಾಸ ಹಿಂದಿನ ಸೀಕ್ರೇಟ್ ಇದೇನಾ..?
ವಿಧಾನಸಭೆ ಚುನಾವಣೆ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ 2ನೇ ಬಾರಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಆದರೆ ಪ್ರವಾಸದ ಹಿಂದೆ ಸರ್ಕಾರದಲ್ಲಿ ಬಿಕ್ಕಟ್ಟು ಎದುರಾಗಿದೆಯಾ ಎನ್ನುವ ಅನುಮಾನ ಕಾಡುತ್ತಿದೆ.
ಬೆಂಗಳೂರು : ವಿಧಾನಸಭೆ ಚುನಾವಣೆ ಬಳಿಕ ಸಿದ್ದರಾಮಯ್ಯ ಅವರು 2ನೇ ಬಾರಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕಳೆದ ಬಾರಿ ಸಿದ್ದರಾಮಯ್ಯ ವಿದೇಶಕ್ಕೆ ತೆರಳಿದ್ದಾಗ ರಾಜ್ಯ ರಾಜಕೀಯದಲ್ಲಿ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿತ್ತು.
ಜಾರಕಿಹೊಳಿ ಸಹೋದರರು ಸರ್ಕಾರವನ್ನೇ ಬೀಳಿಸುವ ಮಟ್ಟಕ್ಕೆ ಹೋಗಿದ್ದರು. ಇದೀಗ ಸಿದ್ದರಾಮಯ್ಯ ಅವರು ವಿದೇಶ ಪ್ರವಾಸ ಕ್ಕೆ ತೆರಳುತ್ತಿರುವುದರಿಂದ ಅತೃಪ್ತ ಶಾಸಕರು ಮತ್ತೆ ಸರ್ಕಾರ ಅಸ್ಥಿರಗೊಳಿಸುವ ಚಟುವಟಿಕೆಗಳಲ್ಲಿ ವಾಲುತ್ತಾರಾ ಎಂಬ ಅನುಮಾನವೂ ಕಾಡತೊಡಗಿದೆ.
ಅದಲ್ಲದೆ, ಈ ಬಾರಿಯೂ ಅಂತಹದೇ ಘಟನೆಯ ಮುನ್ಸೂಚನೆ ಇದ್ದು ಅಥವಾ ಅಂತಹ ಘಟನೆಯನ್ನು ನಿರೀಕ್ಷಿಸಿ ಸಿದ್ದರಾಮಯ್ಯ ಅವರು ವಿದೇಶಕ್ಕೆ ಹೋಗುತ್ತಿದ್ದಾರೆಯೇ ಎಂಬ ಮಾತುಗಳೂ ಹರಿದಾಡುತ್ತಿವೆ.
ಮತ್ತೊಂದೆಡೆ ಡಿ.22ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಸಮನ್ವಯ ಸಮಿತಿ ಸಭೆ ಬಳಿಕ ತೀರ್ಮಾನ ಆಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ದುಂಬಾಲು ಬೀಳಬಹುದು ಎಂದು ಅವರಿಂದ ಅಂತರ ಕಾಯ್ದುಕೊಳ್ಳಲು ಪ್ರವಾಸ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.