ಚಿತ್ರದುರ್ಗದಲ್ಲೊಬ್ಬ ಕುಡುಕ ಶಿಕ್ಷಕ: ಶಾಲೆಯೇ ಬಾರ್ ಅಂಡ್ ರೆಸ್ಟೋರೆಂಟ್
ಚಿತ್ರದುರ್ಗ(ಅ.06): ಶಿಕ್ಷಣ ಕಲಿಸುವ ಶಾಲೆ ದೇಗುಲದ ಸಮಾನ. ಇಂತಹ ದೇಗುಲದಲ್ಲಿ ಮುಖ್ಯ ಶಿಕ್ಷಕನೊಬ್ಬ ಮದ್ಯ, ಮಾಂಸ ಸೇವಿಸುವ ಮೂಲಕ ಶಾಲೆಯನ್ನು ಬಾರ್ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅದು ಎಲ್ಲಿ? ಆ ಶಿಕ್ಷಕ ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಚಿತ್ರದುರ್ಗದ ಕಡಬನಕಟ್ಟೆಯ ಸರ್ಕಾರಿ ಶಿಕ್ಷಕ ಆಂಜನೇಯನೇ ಆ ಕುಡುಕ ಶಿಕ್ಷಕ. ವಿದ್ಯಾರ್ಥಿಗಳಿಗೆ ಪಾಠ ಹೇಳಬೇಕಿದ್ದ ಶಿಕ್ಷಕ ಶಾಲೆಯನ್ನೇ ಬಾರ್ ಅಂಡ್ ರೆಸ್ಟೋರೆಂಟ್ ಮಾಡಿಕೊಂಡಿದ್ದಾರೆ. ಪಾಠ ಹೇಳಿಕೊಡುವ ಬದಲು ಗುಂಡು-ತುಂಡು ಪಾರ್ಟಿ ಮಾಡುತ್ತಾ ಮಜಾ ಮಾಡುತ್ತಿದ್ದಾರೆ. ಮೊನ್ನೆ ಇಡೀ ದೇಶವೇ ರಾಷ್ಟ್ರಪಿತ ಜನ್ಮದಿನಕ್ಕೆ ಸಿದ್ಧತೆ ನಡೆಸುತ್ತಿದ್ದರೆ. ಶಾಲೆ ಮುಖ್ಯಶಿಕ್ಷಕನಾಗಿರುವ ಈತ ಚಿಕನ್ ತಿನ್ನುತ್ತಾ, ಎಣ್ಣೆ ಹಾಕುತ್ತಾ ಕುಳಿತ್ತಿದ್ದ. ಇದನ್ನು ಸಾರ್ವಜನಿಕರು ಬಯಲು ಮಾಡಿದ್ದಾರೆ.
ಶಿಕ್ಷಕ ವೃತ್ತಿಗೆ ದೇವರ ಸ್ಥಾನವನ್ನು ನಾವು ಕೊಟ್ಟಿದ್ದೇವೆ. ಆದರೆ ಇಂತಹ ನೀಚ ಶಿಕ್ಷಕರಿಂದ ಇದಕ್ಕೆ ಅಪವಾದ ಬಂದಿದೆ. ಈ ಆಂಜನೇಯನ ಅವಾಂತರ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆ ಶಿಸ್ತುಕ್ರಮಕ್ಕೆ ಮುಂದಾಗಿದೆ ಹಾಗೂ ಈ ದೃಶ್ಯಗಳನ್ನು ಶಿಕ್ಷಣ ಇಲಾಖೆ ಆಯುಕ್ತರಿಗೆ ಕಳುಹಿಸಲು ನಿರ್ಧರಿಸಿದೆ.
ಜ್ಞಾನ ದೇಗುಲವನ್ನು ಗುಂಡು-ತುಂಡು ಪಾರ್ಟಿಗೆ ಬಳಸಿಕೊಂಡ ಶಿಕ್ಷಕನ ವಿರುದ್ಧ ಗ್ರಾಮಸ್ಥರು ಗರಂ ಆಗಿದ್ದು, ಆಂಜನೇಯ ಪರಾರಿಯಾಗಿದ್ದಾನೆ. ಇಂತಹ ಶಿಕ್ಷಕರಿಂದ ವಿದ್ಯಾರ್ಥಿಗಳ ಭವಿಷ್ಯ ಸಹಾ ಹದಗೆಡಲಿದ್ದು ಇನ್ನು ಮುಂದೆಯಾದರೂ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ.