ಪ್ರವಾಹ: 1 ಕೋಟಿಗಿಂತ ಹೆಚ್ಚು ಮಂದಿ ಸಂಕಷ್ಟಕ್ಕೆ| ಬಿಹಾರ, ಅಸ್ಸಾಂನಲ್ಲಿ ಇದುವರೆಗೂ ಒಟ್ಟು 114 ಮಂದಿ ಬಲಿ| ನೆರೆ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ರಕ್ಷಣಾ ಕೇಂದ್ರ ಸ್ಥಾಪನೆ

ಗುವಾಹಟಿ[ಜು.20]: ಉತ್ತರ ಭಾರತದಾದ್ಯಂತ ಎಡಬಿಡದೆ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಯಿಂದಾಗಿ ಸೃಷ್ಟಿಯಾದ ಹಿಂದೆಂದೂ ಕೇಳರಿಯದ ಪ್ರವಾಹದಲ್ಲಿ ಮುಳುಗಿರುವ ಅಸ್ಸಾಂ ಮತ್ತು ಬಿಹಾರದಲ್ಲಿ 1 ಕೋಟಿಗಿಂತ ಹೆಚ್ಚು ಮಂದಿ ಸಮಸ್ಯೆಗೆ ಸಿಲುಕಿದ್ದಾರೆ. ಅಲ್ಲದೆ, ಮಳೆ ಸಂಬಂಧಿತ ಘಟನೆಗಳಲ್ಲಿ ಉಭಯ ರಾಜ್ಯಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 114ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಉಕ್ಕಿ ಹರಿಯುತ್ತಿರುವ ಕೆರೆಗಳು ಮತ್ತು ನದಿಗಳು ಗ್ರಾಮಗಳನ್ನೂ ಹೊಕ್ಕಿರುವ ಪರಿಣಾಮ ತಗ್ಗು ಪ್ರದೇಶಗಳಲ್ಲಿರುವ ಜನರ ಬದುಕು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.

Add Asianetnews Kannada as a Preferred SourcegooglePreferred

ಅಸ್ಸಾಂನಲ್ಲಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಆದಾಗ್ಯೂ, 54 ಲಕ್ಷ ಮಂದಿ ಪ್ರವಾಹದಲ್ಲಿ ಸಿಲುಕಿದ್ದಾರೆ. ಇನ್ನೊಂದೆಡೆ ಬಿಹಾರದ 33 ಜಿಲ್ಲೆಗಳ ಪೈಕಿ 28 ಜಿಲ್ಲೆಗಳು ಜಲ ಪ್ರಳಯಕ್ಕೆ ಒಳಗಾಗಿದ್ದು, ಇದುವರೆಗೂ 2.2 ಲಕ್ಷ ಸಂತ್ರಸ್ತರನ್ನು ರಕ್ಷಿಸಿ, ಅವರಿಗೆ 1080 ಪರಿಹಾರ ಕೇಂದ್ರಗಳಲ್ಲಿ ರಕ್ಷಣೆ ನೀಡಲಾಗಿದೆ.

ಬ್ರಹ್ಮಪುತ್ರ ಹಾಗೂ ಅದರ ಉಪನದಿಗಳು ಸೇರಿದಂತೆ ಇನ್ನಿತರ ನದಿಗಳು ಮೈದುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಅಸ್ಸಾಂ ರಾಜಧಾನಿ ಗುವಾಹಟಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಭಾರೀ ನೆರೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ನೆರೆಯಲ್ಲಿ ಸಿಲುಕಿದವರಿಗೆ ನೆರವಾಗುವ ನಿಟ್ಟಿನಲ್ಲಿ ಆಹಾರ ಪೊಟ್ಟಣಗಳು, ಕುಡಿಯುವ ನೀರು, ಮಕ್ಕಳ ಆಹಾರ, ಔಷಧಿಗಳು, ಸ್ಯಾನಿಟರಿ ನ್ಯಾಪ್‌ಕಿನ್‌ ಸೇರಿದಂತೆ ಇನ್ನಿತರ ವಸ್ತುಗಳನ್ನು ಒದಗಿಸಿಕೊಡಲು ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.