ಕೊಡಗು ಪ್ರವಾಹ : ಪರಿಹಾರದ ಆಸೆಗೆ ಹೆತ್ತ ಮಗನನ್ನೇ ‘ಕೊಂದರು’!
ಪರಿಹಾರ ಪಡೆದುಕೊಳ್ಳುವ ಸಲುವಾಗಿ ಬದುಕಿರುವ ಮಗನನ್ನೇ ಸತ್ತಿರುವುದಾಗಿ ದಂಪತಿ ಹೇಳಿದ ಘಟನೆ ಕೊಡಗಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಇದೀಗ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಡಿಕೇರಿ: ಕೊಡಗಿನ ಪ್ರಕೃತಿ ವಿಕೋಪದ ಪರಿಹಾರ ಪಡೆಯುವ ಉದ್ದೇಶದಿಂದ ಸ್ವಂತ ಮಗುವೇ ಸತ್ತಿದೆ ಎಂದು ದಂಪತಿ ವಂಚಿಸಿರುವ ಘಟನೆ ಮಡಿಕೇರಿಯಲ್ಲಿ ಬೆಳಕಿಗೆ ಬಂದಿದೆ. ತಾಲೂಕಿನ ಕಾಲೂರು ಗ್ರಾಮದ ಸೋಮಶೇಖರ್ ಮತ್ತು ದಂಪತಿ ಹೀಗೆ ವಂಚಿಸಲು ಯತ್ನಿಸಿದ ದಂಪತಿ.
ಮಹಾಮಳೆ ಸಂದರ್ಭ ಮಡಿಕೇರಿ ಮೈತ್ರಿ ಸಭಾಂಗಣದ ಪರಿಹಾರ ಕೇಂದ್ರಕ್ಕೆ ಆಗಮಿಸಿ ಉಳಿದುಕೊಂಡಿದ್ದ ದಂಪತಿ ತಮ್ಮ 7 ವರ್ಷದ ಮಗ ನದಿಯಲ್ಲಿ ಕೊಚ್ಚಿ ಹೋಗಿದ್ದಾನೆಂದು ತಿಳಿಸಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಿದ್ದರಿಂದ ಬಾಲಕನ ಪತ್ತೆಗಾಗಿ ರಕ್ಷಣಾ ತಂಡ ಹಲವು ದಿನಗಳ ಕಾರ್ಯಾಚರಣೆ ನಡೆಸಿತ್ತು.
ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಮಡಿಕೇರಿಗೆ ಆಗಮಿಸಿದ ಕೋತೂರಿನ ಸತೀಶ್ ಎಂಬವರು ಈ ಕುರಿತು ಸ್ಪಷ್ಟನೆ ನೀಡಿ, ಬಾಲಕ ಬದುಕಿರುವುದನ್ನು ತಿಳಿಸಿದ್ದಾರೆ. ಬಾಲಕನ ತಾಯಿ ಸುಮಾ ವಿರಾಜಪೇಟೆ ಬಳಿಯ ತನ್ನ ತಾಯಿಯ ಮನೆಯಲ್ಲಿ ಮಗನನ್ನು ಬಿಟ್ಟಿದ್ದರು ಎಂಬುದು ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಂಪತಿಯನ್ನು ವಶಕ್ಕೆ ಪಡೆಯಲಾಗಿದೆ.