ಯಡಿಯೂರಪ್ಪ ವಿರುದ್ಧ ಡಿನೋಟಿಫಿಕೇಶನ್​ ಸಂಬಂಧ ದಾಖಲಾಗಿರುವ  ಎಸಿಬಿ ಎಫ್​ಐಆರ್​ ಸದ್ದು ಮಾಡುತ್ತಿರುವ ಮಧ್ಯದಲ್ಲೇ ಎಸಿಬಿಯಿಂದ ಮತ್ತೊಂದು ಎಫ್​ಐಆರ್​ ದಾಖಲಾಗಿರುವುದು ಹುಬ್ಬೇರಿಸಿದೆ. 2007-08ರಲ್ಲಿ ಕೆಎಂಎಫ್​  ಜಾಗವನ್ನು ಅಕ್ರಮ ಪರಭಾರೆ ಮಾಡಲಾಗಿದೆ ಎಂದು ಅಂದಿನ  ಕೆಎಂಎಫ್​ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಹಾಗೂ ಲೋಕೋಪಯೋಗಿ ಇಲಾಖೆ ಎಂಜಿನಿಯರ್​ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ.

ಬೆಂಗಳೂರು (ಆ.20): ಯಡಿಯೂರಪ್ಪ ವಿರುದ್ಧ ಡಿನೋಟಿಫಿಕೇಶನ್​ ಸಂಬಂಧ ದಾಖಲಾಗಿರುವ ಎಸಿಬಿ ಎಫ್​ಐಆರ್​ ಸದ್ದು ಮಾಡುತ್ತಿರುವ ಮಧ್ಯದಲ್ಲೇ ಎಸಿಬಿಯಿಂದ ಮತ್ತೊಂದು ಎಫ್​ಐಆರ್​ ದಾಖಲಾಗಿರುವುದು ಹುಬ್ಬೇರಿಸಿದೆ. 2007-08ರಲ್ಲಿ ಕೆಎಂಎಫ್​ ಜಾಗವನ್ನು ಅಕ್ರಮ ಪರಭಾರೆ ಮಾಡಲಾಗಿದೆ ಎಂದು ಅಂದಿನ ಕೆಎಂಎಫ್​ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಹಾಗೂ ಲೋಕೋಪಯೋಗಿ ಇಲಾಖೆ ಎಂಜಿನಿಯರ್​ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ.

ರಾಜ್ಯದಲ್ಲಿ ಟಾರ್ಗೆಟ್ ಪಾಲಿಟಿಕ್ಸ್​?

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಎಸಿಬಿ ಎಫ್​ಐಆರ್​ ಈಗಾಗಲೇ ಆಡಳಿತಾರೂಢ ಕಾಂಗ್ರೆಸ್​ ಮತ್ತು ವಿಪಕ್ಷ ಬಿಜೆಪಿ ಮಧ್ಯೆ ತಿಕ್ಕಾಟ ತಂದಿಟ್ಟಿದೆ. ಇದರ ಮಧ್ಯೆಯೇ ಬೆಂಗಳೂರಿನ ಕೋರಮಂಗಲದಲ್ಲಿ ಕೆಎಂಎಫ್​ಗೆ ಸೇರಿದ 4 ಎಕರೆ 14 ಗುಂಟೆ ಜಮೀನು ದುರುಪಯೋಗಪಡಿಸಿಕೊಂಡು ವಾಣಿಜ್ಯ ಸಂಕೀರ್ಣ ಕಟ್ಟಿ ಸರ್ಕಾರಕ್ಕೆ 200 ಕೋಟಿ ರೂ. ನಷ್ಟ ಉಂಟು ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಮೇ ತಿಂಗಳಿನಲ್ಲಿ ಎಸಿಬಿಗೆ ದೂರು ಸಲ್ಲಿಸಿದ್ದರು. 2007-08ರಲ್ಲಿ ನಡೆದ ಪ್ರಕರಣ ಇದಾಗಿದ್ದು, ಈ ಸಂಬಂಧ ಆಗಸ್ಟ್​ 9ರಂದು ಕೆಎಂಎಫ್​ನ ಅಂದಿನ ಆಡಳಿತ ಮಂಡಳಿ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಸೇರಿದಂತೆ ಹಲವರ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ. ಆದರೆ 2007-08ರಲ್ಲಿ ಹೆಚ್​.ಡಿ. ರೇವಣ್ಣ ಮತ್ತು ಸೋಮಶೇಖರ ರೆಡ್ಡಿ ಕೆಎಂಎಫ್​ ಅಧ್ಯಕ್ಷರಾಗಿ ಇದ್ದಿದ್ದು ಈಗ ಕುತೂಹಲ ಮೂಡಿಸಿದೆ. ಅಂದಿನ ಕೆಎಂಎಫ್​ ಎಂಡಿ ರಾಮಲಿಂಗೇಗೌಡ ಮತ್ತು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರಾಗಿದ್ದ ಸತ್ಯನಾರಾಯಣ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಇದಕ್ಕೆ ಪೂರಕವಾಗಿ ಹಾಸನದಲ್ಲಿ ಮಾತನಾಡಿರುವ ಪಶುಸಂಗೋಪನಾ ಸಚಿವ ಎ. ಮಂಜು, ಕೆಎಂಎಫ್​ ಅಧ್ಯಕ್ಷರ ನಿರ್ದೇಶನದ ಬಳಿಕವೇ ಪ್ರಾಜೆಕ್ಟ್​ ವರ್ಕ್​ ನಡೆಯುವುದಾಗಿದ್ದು, ಹೆಚ್​.ಡಿ. ರೇವಣ್ಣ ಅವರ ಪಾತ್ರದ ಬಗ್ಗೆ ತನಿಖೆಯ ನಂತರವಷ್ಟೇ ತಿಳಿಯಲಿದೆ ಎಂದಿರುವುದು ಅಚ್ಚರಿ ಮೂಡಿಸಿದೆ.

ಒಟ್ಟಾರೆ, ಕೆಎಂಎಫ್​ ಪ್ರಕರಣದಲ್ಲಿ ಎಸಿಬಿ ದಾಖಲಿಸಿಕೊಂಡಿರುವ ಎಫ್​ಐಆರ್​ ಹಿಂದೆ ರಾಜಕೀಯದ ನೆರಳು ಸಣ್ಣದಾಗಿ ಗೋಚರಿಸುತ್ತಿದ್ದು, ಇನ್ಯಾವ ತಿರುವು ಪಡೆದುಕೊಳ್ಳುತ್ತದೋ ಗೊತ್ತಿಲ್ಲ.