ಕೊನೆಗೂ ಕೆಎಎಸ್ ಅಧಿಕಾರಿಗೆ ಕಾರು ಕೊಟ್ಟ ಸರ್ಕಾರ
ಸರ್ಕಾರದಿಂದ ಸಾರಿಗೆ ಭತ್ಯೆ ನೀಡದ ಹಿನ್ನೆಲೆಯಲ್ಲಿ ರಾಜಾನಕುಂಟೆ ಮಾರಸಂದ್ರದಿಂದ ಸೈಕಲ್ ಮೂಲಕ ಬಹುಮಹಡಿ ಕಟ್ಟಡದ ಕಚೇರಿಗೆ ಸವಾರಿ ಮಾಡಿ ಪ್ರತಿಭಟಿಸಿದ್ದ ಕೆಎಎಸ್ ಅಧಿಕಾರಿ ಕೆ. ಮಥಾಯಿ ಅವರಿಗೆ ಕೊನೆಗೂ ವಾಹನ ನೀಡಿ ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ.
ಬೆಂಗಳೂರು: ಸರ್ಕಾರದಿಂದ ಸಾರಿಗೆ ಭತ್ಯೆ ನೀಡದ ಹಿನ್ನೆಲೆಯಲ್ಲಿ ರಾಜಾನಕುಂಟೆ ಮಾರಸಂದ್ರದಿಂದ ಸೈಕಲ್ ಮೂಲಕ ಬಹುಮಹಡಿ ಕಟ್ಟಡದ ಕಚೇರಿಗೆ ಸವಾರಿ ಮಾಡಿ ಪ್ರತಿಭಟಿಸಿದ್ದ ಕೆಎಎಸ್ ಅಧಿಕಾರಿ ಕೆ. ಮಥಾಯಿ ಅವರಿಗೆ ಕೊನೆಗೂ ವಾಹನ ನೀಡಿ ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ.
ಏಕಾಏಕಿ ತಮಗೆ ಸಾರಿಗೆ ಭತ್ಯೆ ತಡೆ ಹಿಡಿದು ವಾಹನ ವ್ಯವಸ್ಥೆ ರದ್ದುಗೊಳಿಸಿದ್ದ ಐಎಎಸ್ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಿದ್ದರು. ಕಚೇರಿಗೆ ಸೈಕಲ್ ಸವಾರಿ ಮೂಲಕ ಆಗಮಿಸಿ ಗಾಂಧಿಗಿರಿ ಮೂಲಕ ಪ್ರತಿಭಟನೆ ನಡೆಸಿದ್ದ ಮಥಾಯಿ ಹೋರಾಟಕ್ಕೆ ಕೊನೆಗೂ ಫಲ ದೊರೆತಿದೆ.
ನನ್ನ ಓಡಾಟಕ್ಕೆ ಮಂಜೂರಾಗಿದ್ದ ಗುತ್ತಿಗೆ ವಾಹನಕ್ಕೆ ಮಾಸಿಕ 30 ಸಾವಿರ ರು. ಬಾಡಿಗೆ ನಿಗದಿಯಾಗಿತ್ತು. ಈ ಸೇವೆಯನ್ನು ಹಠಾತ್ತನೆ ಸ್ಥಗಿತಗೊಳಿಸಿ ಉದ್ದೇಶಪೂರ್ವಕವಾಗಿ ಸಾರಿಗೆ ಭತ್ಯೆ ತಡೆ ಹಿಡಿದಿದ್ದರು. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಕೆ. ಮಥಾಯಿ ಸಾರಿಗೆ ಭತ್ಯೆಗೆ ಒತ್ತಾಯಿಸಿದ್ದರು. ೨೦೧೬ರ ಸೆಪ್ಟೆಂಬರ್ನಲ್ಲಿ ಸಕಾಲ ಆಯೋಗದ ಆಡಳಿತಾಧಿಕಾರಿಯಾಗಿ
ವರ್ಗಾವಣೆಯಾದ ನನಗೆ ಗುತ್ತಿಗೆ ವಾಹನ ನೀಡಲು ನಿರಾಕರಿಸಲಾಗಿತ್ತು. 2012ರಿಂದ ಇದೇ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಕಾರು ಒದಗಿಸಲಾಗಿತ್ತು. ಆದರೆ ಬಿಬಿಎಂಪಿಯಲ್ಲಿ ನಡೆದಿದ್ದ ಎರಡು ಸಾವಿರ ಕೋಟಿ ಮೊತ್ತದ ಜಾಹಿರಾತು ಹಗರಣದ ಬಗ್ಗೆ ವರದಿ ನೀಡಿದ್ದಕ್ಕಾಗಿ ಅಂದಿನ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ಅವರು ನನ್ನ ವಿರುದ್ಧ ಹಗೆ ಸಾಧಿಸುತ್ತಿದ್ದಾರೆ ಎಂದು ಮಥಾಯಿ ಆರೋಪಿಸಿದ್ದರು. ಬಳಿಕ ಈ ಸಂಬಂಧ ಲೋಕಾಯುಕ್ತರಿಗೂ ದೂರು ನೀಡಿದ್ದರು. ಇದೆಲ್ಲದ ಫಲವಾಗಿ ಶುಕ್ರವಾರ ಗುತ್ತಿಗೆ ವಾಹನ ನೀಡಿ ಹಿರಿಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.