ಕನ್ನಡ ಸಿನಿಮಾಗಳೇ ಚೆನ್ನಾಗಿ ಓಡುತ್ತಿವೆ ಪ್ರದರ್ಶಕರ ಮಹಾಮಂಡಳದ ಸದಸ್ಯರು ಕರ್ನಾಟಕದಾದ್ಯಂತ ಇದ್ದಾರೆ. ಆದರೆ ಬೆಂಗಳೂರು, ಮೈಸೂರು, ಕೋಲಾರ ಮುಂತಾದ ದಕ್ಷಿಣ ಭಾಗದ ಪ್ರದರ್ಶಕರು ಅಷ್ಟೇನೂ ಸಕ್ರಿಯವಾಗಿಲ್ಲ. ಹೀಗಾಗಿ ಎಲ್ಲರೂ ಡಬ್ಬಿಂಗ್‌ ಸಿನಿಮಾ ಪ್ರದರ್ಶಿಸುತ್ತಾರೆ ಎಂಬುದು ಸರಿಯಲ್ಲ. ಈಗಂತೂ ಕನ್ನಡ ಚಿತ್ರಗಳು ಚೆನ್ನಾಗಿ ಓಡುತ್ತಿರುವುದರಿಂದ ಡಬ್ಬಿಂಗ್‌ ಸಿನಿಮಾಗಳಿಗೆ ಉಳಿಗಾಲ ಇಲ್ಲ. ಒರಾಯನ್‌ ಮಾಲ್‌ನಲ್ಲಿ ಕಳೆದ ವಾರ ಸಂಗ್ರಹವಾದ ಒಟ್ಟು ಗಳಿಕೆ 1.08 ಕೋಟಿ. ಅದರಲ್ಲಿ 72 ಲಕ್ಷ ಕನ್ನಡ ಸಿನಿಮಾಗಳಿಂದಲೇ ಬಂದದ್ದು. ಕೇವಲ ರಾಜಕುಮಾರ ಒಂದೇ 48 ಲಕ್ಷ ಗಳಿಕೆ ಕಂಡಿದೆ. ಇಂಥ ಪರಿಸ್ಥಿತಿಯಲ್ಲಿ ಡಬ್ಬಿಂಗ್‌ ಸಿನಿಮಾಗಳನ್ನು ನೆಚ್ಚಿಕೊಳ್ಳಲು ಯಾವ ಕನ್ನಡ ಚಿತ್ರಗಳ ಪ್ರದರ್ಶಕನೂ ಮುಂದೆ ಬರುವುದಿಲ್ಲ.ಕೆ.ವಿ. ಚಂದ್ರಶೇಖರ್‌ ಹಿರಿಯ ಪ್ರದರ್ಶಕ,ವೀರೇಶ್‌ ಚಿತ್ರಮಂದಿರದ ಮಾಲಿಕ

ಬೆಂಗಳೂರು (ಏ.23): ಡಬ್ಬಿಂಗ್‌ ಸಿನಿಮಾ ಪ್ರದರ್ಶನಕ್ಕೆ ಕನ್ನಡ ಚಲನಚಿತ್ರ ಪ್ರದರ್ಶಕರ ಮಹಾಮಂಡಳ ನಿರ್ಧರಿಸಿದೆ. ಶನಿವಾರ ಚಿತ್ರದುರ್ಗದಲ್ಲಿ ನಡೆದ ಮಹಾಮಂಡಳದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

Add Asianetnews Kannada as a Preferred SourcegooglePreferred

ಸಭೆ ನಂತರ ಸುದ್ದಿಗಾರರಿಗೆ ವಿವರ ನೀಡಿದ ಮಹಾಮಂಡಳದ ಅಧ್ಯಕ್ಷ ಆರ್‌.ಆರ್‌.ಓದೂಗೌಡರ್‌, ರಾಜ್ಯದ 23 ಜಿಲ್ಲೆಗಳ ಪ್ರದರ್ಶಕರು ಸಭೆಯಲ್ಲಿ ಪಾಲ್ಗೊಂಡಿದ್ದು, ಒಮ್ಮತದ ಅಭಿಪ್ರಾಯದ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಇನ್ನು ರಾಜ್ಯ ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ಚಿತ್ರಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಡಬ್ಬಿಂಗ್‌ ಚಿತ್ರಪ್ರದರ್ಶಿಸಿದರೆ ಥಿಯೇ ಟರ್‌ಗೆ ಬೆಂಕಿ ಹಚ್ಚುತ್ತೇವೆ ಎಂದು ಹಲವರು ಹೇಳಿದ್ದು, ಇವರಾರೂ ಚಲನಚಿತ್ರ ಕ್ಷೇತ್ರಕ್ಕೆ ಸಂಬಂಧಿಸಿದವರಲ್ಲ. ‘ಚಿತ್ರ ಪ್ರದರ್ಶಕರು ಕನ್ನಡ ವಿರೋಧಿಗಳು' ಎಂಬ ಹಣೆಪಟ್ಟಿಕಟ್ಟಲಾಗಿದೆ. ನಿಜವಾದ ಕನ್ನಡ ಪ್ರೇಮಿಗಳು ನಾವೇ ಎಂಬುದು ಸಾಬೀತುಪಡಿಸಲು ಈ ತೀರ್ಮಾನಕ್ಕೆ ಬಂದಿದ್ದೇವೆ ಎಂದರು. ಡಬ್ಬಿಂಗ್‌ ಚಿತ್ರ ಪ್ರದರ್ಶನದಿಂದ ಆಗುವ ನಷ್ಟ, ಇತ್ಯಾದಿ ವಿಚಾರಗಳ ಬಗ್ಗೆ ಮಾತುಕತೆ ನಡೆಸಲು ಮಹಾಮಂಡಳ ಸಿದ್ಧವಿದೆ. ಆದರೆ ಈವರೆಗೂ ಈ ನಿಟ್ಟಿನಲ್ಲಿ ಯಾರೂ ಪ್ರಯತ್ನ ಮಾಡಿಲ್ಲ. ಡಬ್ಬಿಂಗ್‌ನಿಂದ ನಿಜ ಕ್ಕೂ ಕನ್ನಡ ಚಿತ್ರೋದ್ಯಮ, ಭಾಷೆಗೆ ಧಕ್ಕೆ ಆಗುವುದಿದ್ದರೆ ನಾವು ಪ್ರದರ್ಶನ ಮಾಡು ವುದಿಲ್ಲ. ನಮಗೆ ಮನವರಿಕೆ ಮಾಡಿ ಕೊಡುವ ಕೆಲಸ ಮೊದಲು ಮಾಡಬೇಕು ಎಂದು ಆಗ್ರಹಿಸಿದರು.

ಡಿಸ್ಕವರಿ, ಡಿಸ್ನಿ, ನ್ಯಾಷನಲ್‌ ಜಿಯಾಗ್ರಫಿ ಚಾನಲ್‌ಗಳು ಇಂದು ತೆಲಗು, ತಮಿಳು, ಹಿಂದಿ ಭಾಷೆಯಲ್ಲಿ ಪ್ರಸಾರವಾಗುತ್ತವೆ. ಕನ್ನಡದ ಮಕ್ಕಳಿಗೆ ಆ ಜ್ಞಾನ ಬೇಡವೆ? ಈ ಎಲ್ಲ ಚಾನಲ್‌ಗಳು ಕನ್ನಡದಲ್ಲಿ ಬಂದರೆ ಮಕ್ಕಳ ಕಲಿಕೆಗೆ ಅನುಕೂಲವಾ ಗುತ್ತದೆ. ಅಮಿತಾಬ್‌ ಬಚ್ಚನ್‌, ಬಾಬಾ ರಾಮದೇವ್‌ ಅವರ ಜಾಹೀರಾತುಗಳು ಕನ್ನಡದಲ್ಲಿ ಬರುವುದಾದರೆ ಸಿನಿಮಾಗಳು ಏಕೆ ಬೇಡ ಎಂದು ಓದೂಗೌಡರ್‌ ಪ್ರಶ್ನಿಸಿದರು.

ಚಿತ್ರ ಪ್ರದರ್ಶಕರ ಮಹಾಮಂಡಳದ ಶಿವಮೊಗ್ಗ ಶ್ಯಾಂಪ್ರ ಸಾದ್‌, ಹಾವೇರಿಯ ಗುಪ್ತ, ವಿಜಯಪುರದ ಎಂ.ಡಿ. ಜೋಷಿ, ಮೈಸೂರಿನ ರಾಜಾರಾಂ, ತುಮಕೂರಿನ ಹರೀಶ್‌, ಚಿತ್ರದುರ್ಗ, ಕುಮಾರ್‌, ಪ್ರಸನ್ನ, ಮಧುಕುಮಾರ್‌ ಇದ್ದರು.