ವ್ಯಾಲಂಟೈನ್ಸ್’ಡೇ ದಿನವೇ ಭಗತ್ ಸಿಂಗ್, ರಾಜ್’ಗುರು, ಸುಖ್’ದೇವ್’ರನ್ನು ಗಲ್ಲಿಗೇರಿಸಿದರಾ?
ಫೆಬ್ರವರಿ ಹದಿನಾಲ್ಕನ್ನು ಪ್ರೇಮಿಗಳ ದಿನವೆಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಆದರೆ ಭಾರತದಲ್ಲಿ ಈ ದಿನದಂದು ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಲಾಗಿತ್ತು, ಗೊತ್ತೆ? ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಬೆಂಗಳೂರು (ಫೆ.16): ಫೆಬ್ರವರಿ ಹದಿನಾಲ್ಕನ್ನು ಪ್ರೇಮಿಗಳ ದಿನವೆಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಆದರೆ ಭಾರತದಲ್ಲಿ ಈ ದಿನದಂದು ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಲಾಗಿತ್ತು, ಗೊತ್ತೆ? ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
‘1931 ರ ಫೆ.14 ರಂದು ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ಸಿಂಗ್, ರಾಜ್ಗುರು ಮತ್ತು ಸುಖ್ದೇವ್ ಅವರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದರು. ಹೀಗಾಗಿ ಈ ದಿನ ಸ್ವಾತಂತ್ರ್ಯ ಹೋರಾಟಗಾರರನ್ನು
ನೇಣಿಗೇರಿಸಿದ ದಿನ. ಆದರೆ ಅದನ್ನು ಮರೆತು ವ್ಯಾಲೆಂಟೇನ್ ದಿನವನ್ನು ಮಾತ್ರ ಆಚರಿಸಲಾಗುತ್ತದೆ. ಈ ವಿಷಯ ಬಹಳಷ್ಟು ಜನರಿಗೆ ತಿಳಿದೇ ಇಲ್ಲ. ಆದಷ್ಟು ಜನರಿಗೆ ಶೇರ್ ಮಾಡಿ. ಸ್ವಾತಂತ್ರ್ಯ ಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಸೇನಾನಿಗಳಿಗೆ ನಮಿಸೋಣ’ ಎಂದು ಆ ಸಂದೇಶದಲ್ಲಿ ಬರೆಯಲಾಗಿದೆ. ಫೆ.14, ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿದ ದಿನ. ಹಾಗಾಗಿ ಈ ದಿನವನ್ನು ಕರಾಳ ದಿನವಾಗಿ ಆಚರಿಸಬೇಕು ಕಳೆದ ವರ್ಷ ಶಿವಸೇನೆ ಹೇಳಿತ್ತು.
ನಿಜಕ್ಕೂ, 1931 ರ ಫೆ.14 ರಂದು ಭಗತ್ಸಿಂಗ್ ಅವರನ್ನು ಗಲ್ಲಿಗೇರಿಸಲಾಗಿತ್ತೆ ಎಂಬುದನ್ನು ಹುಡುಕಹೊರಟಾಗ ಬಯಲಾದ ಸತ್ಯವೇ ಬೇರೆ. ಲಾಹೋರ್ ಷಡ್ಯಂತ್ರದ ಕೇಸ್ನಲ್ಲಿ ಭಗತ್ ಸಿಂಗ್, ರಾಜ್ಗುರು ಮತ್ತು ಸುಖ್'ದೇವ್ ಅವರಿಗೆ ಬ್ರಿಟಿಷರು 1931 ರ ಮಾರ್ಚ್ 24 ರಂದು ಗಲ್ಲು ಶಿಕ್ಷೆ ವಿಧಿಸುವುದಾಗಿ ಘೋಷಿಸಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಒಂದು ದಿನ ಮೊದಲೇ ಅಂದರೆ, 1931 ಮಾರ್ಚ್ 23 ರಂದೇ ಗಲ್ಲಿಗೇರಿಸಲಾಯಿತು. ಹಾಗಾಗಿ ಫೆ.14 ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿದ ದಿನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು.