ಮೈಮೇಲೆ ಅಗಾಧ ಪ್ರಮಾಣದ ಚಿನ್ನಾಭರಣಗಳನ್ನು ಹೇರಿಕೊಂಡಿರುವ ವ್ಯಕ್ತಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗೆ ಬಂಗಾರದಲ್ಲೇ ಮುಳುಗಿರುವ ವ್ಯಕ್ತಿ ಆಂಧ್ರಪ್ರದೇಶದ ತಿರುಪತಿ ವೆಂಕಟರಮಣ ದೇವಸ್ಥಾನದ ಪ್ರಮುಖ ಪೂಜಾರಿ ಎಂದು ಹೇಳಲಾಗಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?  

ಮೈಮೇಲೆ ಅಗಾಧ ಪ್ರಮಾಣದ ಚಿನ್ನಾಭರಣಗಳನ್ನು ಹೇರಿಕೊಂಡಿರುವ ವ್ಯಕ್ತಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗೆ ಬಂಗಾರದಲ್ಲೇ ಮುಳುಗಿರುವ ವ್ಯಕ್ತಿ ಆಂಧ್ರಪ್ರದೇಶದ ತಿರುಪತಿ ವೆಂಕಟರಮಣ ದೇವಸ್ಥಾನದ ಪ್ರಮುಖ ಪೂಜಾರಿ ಎಂದು ಹೇಳಲಾಗಿದೆ.

Add Asianetnews Kannada as a Preferred SourcegooglePreferred

ಈ ವ್ಯಕ್ತಿ ಧರಿಸಿರುವ ಚಿನ್ನಾಭರಣಗಳು ಸುಮಾರು 125 ಕೆ.ಜಿ ಇವೆ ಎಂದು ಹೇಳಲಾಗಿದೆ. ಹಾಗೆಯೇ ಚಿನ್ನಾಭರಣ ಧರಿಸಿ ವಧುವಿನಂತೆ ಸಿಂಗಾರಗೊಂಡಿರುವ ಮೂವರು ಮಹಿಳೆಯರ ಫೋಟೋಗಳೊಂದಿಗೆ ಈ ವ್ಯಕ್ತಿ ಫೋಟೋವನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ.

ಇದೀಗ ಟ್ವೀಟರ್‌ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್‌ ಆಗುತ್ತಿದೆ. ಮೀನಾ ಕುಮಾರಿ ಎಂಬುವವರ ಈ ಫೇಸ್‌ಬುಕ್‌ ಪೋಸ್ಟ್‌ 2018ರಿಂದ ಈಚೆಗೆ 67,000 ಬಾರಿ ಶೇರ್‌ ಆಗಿದೆ.

ಆದರೆ ನಿಜಕ್ಕೂ ಅಗಾಧ ಪ್ರಮಾಣದ ಬಂಗಾರವನ್ನು ಧರಿಸಿರುವ ವ್ಯಕ್ತಿ ತಿರುಪತಿ ದೇವಾಲಯದ ಪ್ರಮುಖ ಪೂಜಾರಿಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಆಲ್ಟ್‌ ನ್ಯೂಸ್‌ ಸುದ್ದಿ ಸಂಸ್ಥೆಯು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಪಾಕಿಸ್ತಾನಿ ನಿವಾಸಿ ಅಮ್ಜಾದ್‌ ಸಹೀದ್‌ ಎಂಬುವವರು ಫೇಸ್‌ಬುಕ್‌ ಪೋಸ್ಟ್‌ ಲಭ್ಯವಾಗಿದೆ. ತಾನು ಜ್ಯುವೆಲರಿ ಮಹಲ್‌ನ ಸಿಇಒ ಎಂದು ತಮ್ಮ ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದಾರೆ.

ಅವರ ಪೇಜ್‌ನಲ್ಲಿ ಈ ರೀತಿಯ ಸಾಕಷ್ಟುಫೋಟೋಗಳಿವೆ. ತಮ್ಮ ಟ್ವೀಟರ್‌ ಖಾತೆಯಲ್ಲೂ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನು ವಧುಗಳಂತೆ ಸಿಂಗರಿಸಿಕೊಂಡಿರುವ ಮೂವರು ಮಹಿಳೆಯರ ಫೋಟೋ 3 ವರ್ಷಗಳಿಂದಲೂ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದರ ಮೂಲ ಲಭ್ಯವಾಗಿಲ್ಲ. ಒಟ್ಟಾರೆ ಪಾಕಿಸ್ತಾನಿ ವ್ಯಕ್ತಿಯ ಫೋಟೋವನ್ನು ತಿರುಪತಿ ದೇವಾಲಯದ ಪೂಜಾರಿ ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್