ಜಾಹೀರಾತು ಕಂಪನಿಗಳು,  ಸಂಶೋಧಕರು,  ಆರ್ಥಿಕ ತಜ್ಞರು ಮತ್ತು ಚಿತ್ರನಿರ್ದೇಶಕರೊಂದಿಗೆ ಮೋದಿ ಸಭೆ  ಜಿಎಸ್ಟಿ, ನೋಟು ಅಮಾನ್ಯ ಕ್ರಮದ ಬಗ್ಗೆ ತಪ್ಪುಕಲ್ಪನೆಗಳನ್ನು ದೂರ ಮಾಡಲು ಒತ್ತು

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಸಾಧನೆಗಳನ್ನು ಪರಿಣಾಮಕಾರಿಯಾಗಿ ಜನರ ಮುಂದಿಡಲು ಪ್ರಧಾನಿ ಮೋದಿ ಕಳೆದ ಶುಕ್ರವಾರ ಜಾಹೀರಾತು ಕಂಪನಿಗಳು, ಸಂಶೋಧಕರು, ಆರ್ಥಿಕ ತಜ್ಞರು ಮತ್ತು ಚಿತ್ರನಿರ್ದೇಶಕರೊಂದಿಗೆ ಸಭೆ ನಡೆಸಿದ್ದಾರೆ ಎಂದು ಇಕಾನಮಿಕ್ಸ್ ಟೈಮ್ಸ್ ವರದಿ ಮಾಡಿದೆ.

ಜನಸಾಮಾನ್ಯರು, ವಿಶೇಷವಾಗಿ ಯುವಜನರ ಬಳಿ ತಲುಪುವ ಮಹತ್ವದ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದು, ಅಭಿವೃದ್ಧಿ, ಆರ್ಥಿಕ ಮತ್ತು ಸಾಮಾಜಿಕ ಅಜೆಂಡಾಗಳ ಬಗ್ಗೆ ಸರ್ಕಾರದ ಸಾಧನೆಗಳನ್ನು ಅವರ ಮುಂದಿಡುವ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಸರ್ಕಾರ ಈವರೆಗೆ ಏನೆಲ್ಲಾ ಮಾಡಿದೆಯೋ ಅದೆಲ್ಲಾ ಬಡಜನರ ಜೀವನ ಗುಣಮಟ್ಟವನ್ನು ಸುಧಾರಿಸಲು ಮಾಡಿದ ಪ್ರಯತ್ನವಾಗಿದೆ. ಸರ್ಕಾರ ಕೇವಲ ಉದ್ಯಮಿಗಳ ಪರವಾಗಿದೆ ಎಂಬುವುದು ನಕಾರಾತ್ಮಕ ಅಭಿಯಾನವಾಗಿದ್ದು, ಅದನ್ನು ಸಮರ್ಥವಾಗಿ ಎದುರಿಸಬೇಕು. ಜಿಎಸ್ ಟಿ ಮತ್ತು ನೋಟು ಅಮಾನ್ಯದಂತಹ ಕ್ರಮಗಳು ದೀರ್ಘವಾದ ಸಮಾಲೋಚನೆಯ ಬಳಿಕ ದೂರದೃಷ್ಟಿಯನ್ನಿಟ್ಟುಕೊಂಡು ಕೈಗೊಂಡಿರುವ ಕ್ರಮಗಳು, ಮುಂದಿನ ದಿನಗಳಲ್ಲಿ ದೇಶಕ್ಕೆ ಅದರ ಪ್ರಯೋಜನ ಸಿಗಲಿದೆಯೆಂದು ಜನರಿಗೆ ಮನವರಿಕೆ ಮಾಡುವ ಅಗತ್ಯವಿದೆ, ಎಂದು ಪ್ರಧಾನಿ ಈ ಸಭೆಯಲ್ಲಿ ಹೇಳಿದ್ದಾರೆನ್ನಲಾಗಿದೆ.

ಸಭೆಯಲ್ಲಿ ವಿವಿಧ ಕ್ಷೇತ್ರಗಳ ಸುಮಾರು 15 ಮಂದಿ ತಜ್ಞರು ಭಾಗವಹಿಸಿದ್ದು, 2 ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಪ್ರಚಾರ ಅಭಿಯಾನಗಳನ್ನು ರೂಪಿಸಿದ ಇಬ್ಬರು ಮಾಸ್ಟರ್ ಮೈಂಡ್‌ಗಳು ಈ ಸಭೆಯಲ್ಲಿ ಭಾಗವಹಿಸಿಲ್ಲ ಎನ್ನಲಾಗಿದೆ.