ಚುನಾವಣಾ ಟಿಕೆಟ್ ನೀಡಲು 5 ಕೋಟಿಗೆ ಬೇಡಿಕೆ : ಸ್ಫೋಟಕ ಸಂಗತಿ ಬಿಚ್ಚಿಟ್ಟ ಮುಖಂಡ
ಚುನಾವಣೆಗೆ ಟಿಕೆಟ್ ನೀಡಲು 5 ಕೋಟಿಗೆ ಬೇಡಿಕೆ ಸಲ್ಲಿಸಿದ್ದಾಗಿ ರಾಜಕೀಯ ಮುಖಂಡರೋರ್ವರು ಗಂಭೀರ ಆರೋಪ ಮಾಡಿದ್ದಾರೆ.
ಲಕ್ನೋ : ಬಹಜನ ಸಮಾಜವಾದಿ ಪಕ್ಷದ ಮುಖಂಡೆ ಮಾಯಾವತಿ ಶುಕ್ರವಾರ ಮಾಜಿ ಎಂಎಲ್ ಸಿ ಮುಕುಲ್ ಉಪಾಧ್ಯಾಯ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಉಚ್ಛಾಟನೆ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮುಕುಲ್ ಮಾಯಾವತಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, 2019ರ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಟಿಕೆಟ್ ನೀಡಬೇಕು ಎಂದಾದಲ್ಲಿ 5 ಕೋಟಿ ಹಣವನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು ಎಂದು ಆರೋಪ ಮಾಡಿದ್ದಾರೆ. ಈ ವೇಳೆ ತಾವು ಹಣವನ್ನು ನೀಡಲು ನಿರಾಕರಿಸಿದ್ದು, ಈ ನಿಟ್ಟಿನಲ್ಲಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಮುಕುಲ್ ಅವರು ಗಾಜಿಯಾಬಾದ್ ಕ್ಷೇತ್ರದಿಂದ ಸ್ಪರ್ಧೆಮಾಡಿದ್ದರು. ಅದಾದ ಬಳಿಕ 2017ರಲ್ಲಿ ನಡೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶಿಕಾರ್ ಪುರ್ , ಬುಲಂದ್ ಶೇರ್ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು.
ಆದರೆ ಬಿಜೆಪಿ ವಿರುದ್ಧ ಸೋಲನ್ನು ಕಂಡಿದ್ದರು. ಇನ್ನು 2007ರ ವಿಧಾನಸಭಾ ಚುನಾವಣೆಯಲ್ಲಿಯೂ ಕೂಡ 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಇದೀಗ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅವರನ್ನು ಉಚ್ಛಾಟನೆ ಮಾಡಲಾಗಿದೆ.