ಕಾಂಗ್ರೆಸ್ ಹೇಳೋದೆಲ್ಲಾ ಸುಳ್ಳು..ವಾಯುಸೇನೆ ಕೊಟ್ಟ ದಾಖಲೆಗಳಿವು!
ಇಡೀ ದೇಶದಲ್ಲಿ ರಫೆಲ್ ಯುದ್ಧ ವಿಮಾನವೇ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದೆ. ಎನ್ ಡಿಎ ಒಕ್ಕೂಟದ ಮೇಲೆ ಇದೇ ವಿಚಾರ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ವಾಗ್ದಾಳಿ ಮಾಡುತ್ತಿದ್ದಾರೆ. ಹಾಗಾದರೆ ನಿಜಕ್ಕೂ ಎನ್ ಡಿಎ ಒಕ್ಕೂಟ ಮಾಡಿಕೊಂಡ ಒಪ್ಪಂದದಿಂದ ದೇಶಕ್ಕೆ ನಷ್ಟ ಆಗಿದೆಯಾ? ಇಲ್ಲ ಎನ್ನುತ್ತಾರೆ ವಾಯುದಳ ಅಧಿಕಾರಿಗಳು.. ಹಾಗಾದರೆ ನಮ್ಮ ಸೋದರ ಸಂಸ್ಥೆ ಮೈ ನೇಶನ್ ಗೆ ನೀಡಿದ ಸಂದರ್ಶನದಲ್ಲಿ ವಾಯು ಸೇನೆ ಹಿರಿಯ ಅಧಿಕಾರಿಗಳು ಏನು ಹೇಳಿದ್ದಾರೆ?
ನವದೆಹಲಿ(ಸೆ.25) ಭಾರತೀಯ ವಾಯು ಸೇನೆಯ ವೈಸ್ ಚೀಫ್ ಏರ್ ಮಾರ್ಷಲ್ ಎಸ್ ಬಿ ಡಿಯೋ ಮತ್ತು ಡೆಪ್ಯೂಟಿ ಚೀಫ್ ಏರ್ ಮಾರ್ಷಲ್ ಆರ್ ನಂಬಿಯಾರ್ ಹೇಳುವುದೇ ಬೇರೆ. ಅನೇಕ ಆಧಾರಗಳನ್ನು ನೀಡುವ ಸೈನ್ಯದ ಹಿರಿಯ ಅಧಿಕಾರಿಗಳು ಹಿಂದೆ ಯುಪಿಎ ಸರಕಾರ ಮಾಡಿಕೊಂಡಿದ್ದ ಒಪ್ಪಂದಕ್ಕೆ ಹೋಲಿಸಿದರೆ ಇದು ಸಾವಿರ ಪಾಲು ಉತ್ತಮವಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ.
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ರಫೆಲ್ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ವೆಚ್ಚ, ಮೆಂಟೇನನ್ಸ್, ಡಿಲೆವರಿ ಸೇರಿದಂತೆ ಎಲ್ಲ ವಿಚಾರದಲ್ಲಿಯೂ ಈ ಒಪ್ಪಂದವೇ ಸರಿಯಾಗಿದೆ ಎಂದಿದ್ದಾರೆ.
ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಗೆ ಮೂವತ್ತು ಸಾವಿರ ಕೋಟಿ ರೂ. ಮೊತ್ತದ ಹಣ ಈ ಒಪ್ಪಂದಿಂದ ಸಿಗುತ್ತದೆ ಎಂಬ ಆರೋಪದಲ್ಲಿಯೂ ಹುರುಳಿಲ್ಲ. ಹೆಚ್ಚು ಅಂದರೆ 6500 ಕೋಟಿ ರೂ. ಮೊತ್ತದ ಪಾಲುದಾರಿಕೆ ಸಿಗಬಹುದು ಎಂದು ಡಿಯೋ ಹೇಳುತ್ತಾರೆ.
ಫ್ರಾನ್ಸ್ ನಲ್ಲಿ ರಫೆಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಅನುಭವವನ್ನು ಹಂಚಿಕೊಂಡಿರುವ ಆರ್ ನಂಬಿಯಾರ್, ರಫೆಲ್ ನಲ್ಲಿ ಹಾರಾಟ ಮಾಡಿದೆ, ಯಾವ ಹೊಸ ಅಂಶಗಳು ಭಾರತದ ಯುದ್ಧ ಸೇನೆಗೆ ಲಭ್ಯವಾಗಬಹುದು ಎಂಬ ಮನವರಿಕೆಯೂ ನನಗೆ ಆಯಿತು. ಮೂರು ಹಂತದಲ್ಲಿ ಕಾರ್ಯ ನಿರ್ವಹಿಸುವ ಯುದ್ಧ ವಿಮಾನ ಭಾರತದ ಸೇನೆಯ ಇಂದಿನ ಅಗತ್ಯಕ್ಕೆ ಬೇಕಾಗಿದೆ ಎಂದು ಹೇಳುತ್ತಾರೆ.
ವಾಯು ಸೇನೆಯ ಯುದ್ಧ ಸಾಮರ್ಥ್ಯ ಹೆಚ್ಚಳಕ್ಕೆ ರಫೆಲ್ ಯುದ್ಧ ವಿಮಾನ ಅಗತ್ಯವಾಗಿದೆ. ಸೇನೆಯ ಶಕ್ತಿ ಜಾಸ್ತಿ ಮಾಡುವುದರೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನು ಇಂಗ್ಲೀಷ್ ನಲ್ಲಿ ಓದಿ