ಭ್ರಷ್ಟಾಚಾರ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಲೋಕಪಾಲ್‌ ನೇಮಕ ಮಾಡಬೇಕು ಎಂದು ಆಗ್ರಹಿಸಿ ಸಾಮಾಜಿಕ ಚಳವಳಿಗಾರ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟಕ್ಕೆ ಇದೀಗ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮತ್ತು ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಅವರ ಬಲ ಲಭಿಸಿದೆ

ಹೈದರಾಬಾದ್‌: ಭ್ರಷ್ಟಾಚಾರ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಲೋಕಪಾಲ್‌ ನೇಮಕ ಮಾಡಬೇಕು ಎಂದು ಆಗ್ರಹಿಸಿ ಸಾಮಾಜಿಕ ಚಳವಳಿಗಾರ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟಕ್ಕೆ ಇದೀಗ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮತ್ತು ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಅವರ ಬಲ ಲಭಿಸಿದೆ. ಮಾ.23ರಂದು ನಿಗದಿಯಾಗಿರುವ ಅಣ್ಣಾ ಅವರ ನಿರಶನ ಪ್ರತಿಭಟನೆಯಲ್ಲಿ ಭಾಗಿಯಾಗಲು ನಿರ್ಧರಿಸಿರುವುದಾಗಿ ನ್ಯಾ.ಎನ್‌.ಸಂತೋಷ್‌ ಹೆಗ್ಡೆ ಅವರು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಈ ಬಗ್ಗೆ ಬುಧವಾರ ಮಾತನಾಡಿದ ನ್ಯಾ.ಹೆಗ್ಡೆ, ‘ತಮ್ಮ ಹೋರಾಟದಲ್ಲಿ ಸಕ್ರಿಯರಾಗುವಂತೆ ಅಣ್ಣಾ ಹಜಾರೆ ಅವರು ಆಹ್ವಾನಿಸಿದ್ದಾರೆ. ಈ ಧರಣಿ ಎಲ್ಲಿಯವರೆಗೂ ರಾಜಕೀಯೇತರವಾಗಿರುತ್ತದೆಯೋ ಅಲ್ಲಿಯವರೆಗೂ ಅಣ್ಣಾ ಅವರ ಹೋರಾಟಕ್ಕೆ ನನ್ನ ಬೆಂಬಲ ಇದ್ದೇ ಇರುತ್ತದೆ,’ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ವೇಳೆಯೂ ಗುಜರಾತ್‌ನಲ್ಲಿ ಲೋಕಾಯುಕ್ತ ನೇಮಕ ಮಾಡಿರಲಿಲ್ಲ. ಪ್ರಧಾನಿ ಆದ ಬಳಿಕವೂ ಇದೇ ಮನಸ್ಥಿತಿ ಮುಂದುವರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಲೋಕಪಾಲ್‌ ನೇಮಕ ಮಾಡಿದ್ದಲ್ಲಿ, ತಮ್ಮ ಕುರಿತಾದ ಸತ್ಯಗಳೇ ಬಯಲಾಗುತ್ತವೆ ಎಂಬ ಭೀತಿ ಆಡಳಿತಾರೂಢ ಪಕ್ಷಕ್ಕೆ ಇದೆ.

ಇದೇ ಕಾರಣಕ್ಕಾಗಿ ನಾಲ್ಕು ವರ್ಷವಾದರೂ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಲೋಕಪಾಲ್‌ ನೇಮಕದ ಬಗ್ಗೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.