ಸಿದ್ದುಗೆ ಸಾಕಾಯ್ತಾ ರಾಜಕಾರಣ, ಇಲ್ಲಿವೆ 5 ಅಸಲಿ ಕಾರಣ
ರಾಜ್ಯ ರಾಜಕಾರಣದಲ್ಲಿ ಪ್ರತಿದಿನ ಒಂದಿಲ್ಲೊಂದು ಬದಲಾವಣೆ ನಡೆಯುತ್ತಲೆ ಇದೆ. ಈಗ ಉಪಚುನಾವಣೆ ಎದುರಾಗಿದೆ.. ಆದರೆ ಇದ್ದಕ್ಕಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವ ಮಾತನ್ನಾಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಇಂಥ ಮಾತನ್ನಾಡಲು ಕಾರಣ ಏನು?
ಬೆಂಗಳೂರು[ಅ.17] ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಸಿದ್ದರಾಮಯ್ಯ! ಹೌದು ಇದೊಂದು ಅಚ್ಚರಿಯ ಸುದ್ದಿ. ಬಾದಾಮಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿದ್ದರಾಮಯ್ಯ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇನ್ನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಹಾಗಾದರೆ ಇಂಥ ಹೇಳಿಕೆ ನೀಡಲು ನಿಜವಾದ ಕಾರಣ ಏನು?
ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭೆ ಕ್ಷೇತ್ರದ ಗುಳೇದಗುಡ್ಡ ಪಟ್ಟಣದಲ್ಲಿ ಪುರಸಭೆಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, 'ನಾನು 13 ಚುನಾವಣೆ ಎದುರಿಸಿದ್ದೇನೆ. ಈ ಐದು ವರ್ಷ ಪೂರೈಸಿದ ಮೇಲೆ ಇನ್ನು ಮುಂದೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಆದರೆ, ರಾಜಕಾರಣ ಬಿಡುವುದಿಲ್ಲ' ಎಂದರು. ಹಾಗಾದರೆ ನಿಜಕ್ಕೂ ಸಿದ್ದರಾಮಯ್ಯ ನಿವೃತ್ತಿ ತೆಗೆದುಕೊಳ್ಳುತ್ತಿದ್ದಾರಾ?
1. ಮಗನ ರಾಜಕಾರಣ ಜೀವನ: ಒಬ್ಬ ಮಗನನ್ನು ಕಳೆದುಕೊಂಡ ಸಿದ್ದರಾಮಯ್ಯ ಮತ್ತೊಬ್ಬ ಪುತ್ರ ಯತೀಂದ್ರಗೆ ವರುಣಾ ಕ್ಷೇತ್ರದ ಮೂಲಕ ರಾಜಕೀಯ ಜೀವನ ಕಲ್ಪಿಸಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋಲು ಕಂಡ ನಂತರ ಸಿದ್ದರಾಮಯ್ಯ ನಿಧಾನವಾಗಿ ಉತ್ತರ ಕರ್ನಾಟಕದ ಕಡೆ ಮುಖ ಮಾಡಿದ್ದಾರೆ.
2. ನನಗೆ ವಯಸ್ಸಾಗಿದೆ: 'ನನಗೂ ಸಹ ವಯಸ್ಸಾಗುತ್ತಿದೆ. ನನಗೆ 71 ವರ್ಷ ವಯಸ್ಸಾಗಿದೆ. ಹಾಗಾಗಿ ಈಗಿನ 5 ವರ್ಷ ಪೂರೈಸಿದ ಮೇಲೆ ಇನ್ನು ಮುಂದೆ ಚುನಾವಣೆಗೆ ನಿಲ್ಲೋದಿಲ್ಲ. ಅಭಿವೃದ್ಧಿ ಕೆಲಸ ಮಾಡಲು ಚುನಾವಣೆಗೆ ನಿಲ್ಲಬೇಕೆಂದಿಲ್ಲ ಎಂಬುದನ್ನು ಅವರೇ ಹೇಳಿದ್ದಾರೆ.
ಮೈತ್ರಿ VS ಬಿಜೆಪಿ ; 5 ಕ್ಷೇತ್ರದ ಅಖಾಡದಲ್ಲಿ ಯಾರೆಲ್ಲ ಇದ್ದಾರೆ?
3. ಹುದ್ದೆಗಳು ಉಳಿದಿಲ್ಲ: ರಾಜ್ಯದಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದರೂ ಸಿದ್ದರಾಮಯ್ಯ ಯಾವ ಹುದ್ದೆ ಸ್ವೀಕಾರ ಮಾಡಿಲ್ಲ. ಸಮನ್ವಯ ಸಮಿತಿ ಹಿಡಿತ ಇದ್ದರೂ ಅದು ಹೆಸರಿಗೆ ಮಾತ್ರ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಸಂಪರ್ಕ ಸೇತುವಾಗಿ ಕೆಲಸ ಮಾಡಿಕೊಂಡೇ ಇದ್ದಾರೆ.
4. ಸರಕಾರದಲ್ಲಿಯೂ ಆಸಕ್ತಿ ಇಲ್ಲ: ಒಂದು ಕಡೆ ಮೈತ್ರಿ ಸರಕಾರ ಬಂದ ಮೇಲೆ ಸಿದ್ದರಾಮಯ್ಯ ಬೆಂಬಲಿಗರು ಅಥವಾ ಹಿಂದಿನ ಸರಕಾರದಲ್ಲಿ ಪ್ರಭಾವಿ ಎಂದು ಗುರುತಿಸಿಕೊಂಡಿದ್ದವರು ಬದಿಗೆ ಸರಿಯುವಂಥಹ ಸ್ಥಿತಿ ನಿರ್ಮಾಣವಾಯಿತು. ಸಿದ್ದರಾಮಯ್ಯ ಸಹ ತಮ್ಮ ಬೆಂಬಲಿಗರ ರಕ್ಷಣೆಗೆ ಆಕ್ರಮಣಕಾರಿಯಾಗಿ ವರ್ತಿಸಿದ್ದು ಕಾಣಲಿಲ್ಲ. ಇದು ಸಹ ಅವರ ನಿವೃತ್ತಿಯ ಸೂಚನೆ ನೀಡಿತ್ತು.
5. ಬದಲಾಗುವ ಪರಿಸ್ಥಿತಿ: 5 ವರ್ಷಗಳ ನಂತರ ರಾಜ್ಯದ ರಾಜಕಾರಣದ ಪರಿಸ್ಥಿತಿ ಸಂಪೂರ್ಣ ಬದಲಾಗುವ ಸಾಧ್ಯತೆ ಇದೆ. ಮೈತ್ರಿ ಸರಕಾರ 5 ವರ್ಷ ಪೂರೖಸಿದ್ದೇ ಆದಲ್ಲಿ ಬಿಜೆಪಿ ಮತ್ತು ಮೈತ್ರಿ ಸಕರಕಾರ ಅಂದರೆ ಜೆಡಿಎಸ್ -ಕಾಂಗ್ರೆಸ್ ಎನ್ನುವಂಥಹ ಸ್ಥಿತಿಯೇ ಇರುತ್ತದೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಚಿಗುರಿಕೊಳ್ಳಲೂ ಬಹುದು. ಮತ್ತೆ ಪಕ್ಷ ಕಟ್ಟುವ ,ಬಳ್ಳಾರಿ ಪಾದಯಾತ್ರೆಯಂತಹ ರಿಸ್ಕ್ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಸಿದ್ದರಾಮಯ್ಯ ಇಲ್ಲ.