ಯಾರಿಗೆ ಒಲಿಯುತ್ತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ..?
ಹಿರಿಯ ನಾಯಕ ಎಸ್.ಆರ್. ಪಾಟೀಲ್ ಅವರ ರಾಜೀನಾಮೆಯಿಂದ ತೆರವಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ಈಶ್ವರ್ ಖಂಡ್ರೆ ಪಾಲಾಗುವ ಸಾಧ್ಯತೆಯ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ಬೆಂಗಳೂರು : ಹಿರಿಯ ನಾಯಕ ಎಸ್.ಆರ್. ಪಾಟೀಲ್ ಅವರ ರಾಜೀನಾಮೆಯಿಂದ ತೆರವಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ಈಶ್ವರ್ ಖಂಡ್ರೆ ಪಾಲಾಗುವ ಸಾಧ್ಯತೆಯ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ಕೆಪಿಸಿಸಿಯಲ್ಲಿ ಲಿಂಗಾಯತ ಪ್ರಾತಿನಿಧ್ಯವಿಲ್ಲ ಎಂಬ ಕಾರಣಕ್ಕೆ ಈಶ್ವರ ಖಂಡ್ರೆ ಅವರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನ ದೊರೆಯಬಹುದು ಎನ್ನಲಾಗುತ್ತಿದೆ. ಆದರೆ, ಈ ಹುದ್ದೆ ಕಾರ್ಯಾಧ್ಯಕ್ಷ ಸ್ಥಾನವೇ ಅಥವಾ ಕೆಪಿಸಿಸಿ ಅಧ್ಯಕ್ಷಗಿರಿಯೇ ಎಂಬುದು ಖಚಿತವಾಗಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆದಿದೆ. ಕಾಂಗ್ರೆಸ್ನ ಒಂದು ಪ್ರಭಾವಿ ಗುಂಪು ದಿನೇಶ್ ಗುಂಡೂರಾವ್ ಅವರಿಗೆ ಈ ಹುದ್ದೆ ದೊರಕಿಸಿಕೊಡಲು ಯತ್ನಿಸಿದರೆ, ಹಿಂದುಳಿದ ವರ್ಗಗಳಿಂದ ಬಿ.ಕೆ. ಹರಿಪ್ರಸಾದ್ ಹಾಗೂ ಪರಿಶಿಷ್ಟರ ಪೈಕಿ ಸಂಸದ ಕೆ.ಎಚ್.ಮುನಿಯಪ್ಪ ಆಸಕ್ತರಾಗಿದ್ದಾರೆ.
ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಯಾವ ಸಮುದಾಯಕ್ಕೆ ದೊರೆಯುತ್ತದೆ ಎಂಬುದರ ಮೇಲೆ ಕಾರ್ಯಾಧ್ಯಕ್ಷ ಸ್ಥಾನವು ಲಿಂಗಾಯತರಿಗೆ ದೊರೆಯುವುದೋ ಅಥವಾ ಇಲ್ಲವೋ ಎಂದು ನಿರ್ಧಾರವಾಗಲಿದೆ. ಲಿಂಗಾಯತರು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಪರಿಗಣಿತವಾಗದಿದ್ದರೆ, ಖಚಿತವಾಗಿ ಆ ಸಮುದಾಯಕ್ಕೆ ಕಾರ್ಯಾಧ್ಯಕ್ಷ ಹುದ್ದೆ ದೊರೆಯಲಿದ್ದು, ಆಗ ಆ ಹುದ್ದೆ ಈಶ್ವರ್ ಖಂಡ್ರೆ ಪಾಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ.