ಸಾರಿಗೆ ಅಧಿಕಾರಿಗಳಿಂದ ಸಚಿವ ಹೆಚ್.ಎಂ.ರೇವಣ್ಣ ಎಲೆಕ್ಷನ್ ಫಂಡ್ ಕಲೆಕ್ಷನ್?
ಅಧಿಕಾರಿಗಳಿಗೆ ಬೆದರಿಸಿ ಕೋಟ್ಯಾಂತರ ರೂಪಾಯಿ ಸಂಗ್ರಹ..?
ಪ್ರಾಮಾಣಿಕ ಅಧಿಕಾರಿಯಿಂದ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು.
ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಧಿಕಾರಿಗಳ ಮೂಲಕ ಸರ್ಕಾರ ಫಂಡ್ ಸಂಗ್ರಹಕ್ಕೆ ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸಾರಿಗೆ ಅಧಿಕಾರಿಗಳ ಮೂಲಕ ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಕಲೆಕ್ಷನ್ ಇಳಿದಿದ್ದಾರಾ..? ಸಾರಿಗೆ ಸಿಬ್ಬಂದಿಯೊಬ್ಬರು ಚುನಾವಣಾ ಆಯೋಗಕ್ಕೆ ಬರೆದ ಪತ್ರ ಈ ಎಲ್ಲಾ ಅನುಮಾನಗಳನ್ನು ಹುಟ್ಟಿಹಾಕಿದೆ.
ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಆರ್ಟಿಓ ಗಾಯತ್ರಿದೇವಿ ಅವರು ಎಲೆಕ್ಷನ್ ಫಂಡ್ಗಾಗಿ ಲಕ್ಷಾಂತರ ರೂಪಾಯಿ ನೀಡುವಂತೆ ತಮ್ಮ ಸಿಬ್ಬಂದಿಗೆ ತಾಕೀತು ಮಾಡಿದ್ದಾರೆ. ಮೀಟಿಂಗ್ ಕರೆದಿದ್ದ ಆರ್ಟಿಓ ಗಾಯಂತ್ರಿ ದೇವಿ ಗುಮಾಸ್ತರು 15 ಸಾವಿರ, ಎಸ್ಡಿಎ, ಎಫ್ಡಿಎ 25 ಸಾವಿರ , ಅಧೀಕ್ಷಕರು 40 ಹಾಗೂ ಮೋಟಾರು ವಾಹನ ಇನ್ಸ್ಪೆಕ್ಟರ್ 1 ಲಕ್ಷ ನೀಡುವಂತೆ ತಾಕೀತು ಮಾಡಿದ್ದಾರೆ. ಹಣ ಕೊಡದಿದ್ದರೇ ಪರಿಣಾಮ ಸರಿಯಿರುವುದಿಲ್ಲ ಎಂದು ತಮ್ಮ ಸಿಬ್ಬಂದಿಗೆ ಧಮಕಿ ಹಾಕಲಾಗಿದೆ.
ಲಂಚ ಪಡೆದು ಕೊಡ್ತಿರೋ ಅಥಾವ ಸಾಲ ಮಾಡಿಯಾದರೂ ಕೊಡಲೇಬೇಕು. ಒಂದು ವೇಳೆ ಹಣ ನೀಡದೇ ಇದ್ದಲ್ಲಿ ಹೆಡ್ ಆಫೀಸ್ಗೆ ಕಂಪ್ಲೈಂಟ್ ಮಾಡಿ ಟ್ರಾನ್ಸ್ಫರ್ ಮಾಡಿಸುತ್ತೇನೆ ಎಂದು ಗಾಯತ್ರಿ ದೇವಿ ಸಿಬ್ಬಂದಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ದಾಖಲಾಗಿದೆ.
ಗಾಯಂತ್ರಿ ದೇವಿ ಅವರು ಹಣ ನೀಡುವಂತೆ ಧಮಕಿ ಹಾಕಿದ್ದಕ್ಕೆ ಕೆಲ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನೊಂದ ಸಿಬ್ಬಂದಿ ಒಬ್ಬರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಪತ್ರವನ್ನ ಗಂಭಿರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಸಾರಿಗೆ ಆಯುಕ್ತರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಒಟ್ಟಾರೆ, ಸರ್ಕಾರ ಚುನಾವಣೆ ಹೆಸರಲ್ಲಿ ಅಧಿಕಾರಿಗಳನ್ನು ಭ್ರಷ್ಟಾಚಾರಕ್ಕೆ ನೂಕಿ ಹಣ ಸಂಗ್ರಹಕ್ಕೆ ಮುಂದಾಗಿರುವುದು ಮಾತ್ರ ದುರಂತ...
[ವರದಿ: ರಮೇಶ್.ಕೆ.ಹೆಚ್ ಕ್ರೈಂ ಬ್ಯೂರೋ ]