ಯೋಗರಾಜ್ ಭಟ್ ‘ಗೆ ಚುನಾವಣಾ ಗೀತೆ ರಚನೆಯ ಜವಾಬ್ದಾರಿ
ಈ ಬಾರಿ ಚುನಾವಣೆಗೆ ಒಂದು ಅದ್ಭುತ ಗೀತೆಯನ್ನು ರಚನೆ ಮಾಡುವ ಜವಾಬ್ದಾರಿಯು ಚಿತ್ರ ನಿರ್ದೇಶಕರು ಹಾಗೂ ಗೀತೆ ರಚನೆಕಾರರಾದ ಯೋಗರಾಜ್ ಭಟ್ ಅವರಿಗೆ ಹಾಗೂ ಪಂಚತಂತ್ರ ಚಿತ್ರತಂಡಕ್ಕೆ ಚುನಾವಣಾ ಆಯೋಗ ನೀಡಿದೆ.
ಬೆಂಗಳೂರು : ಈಗಾಗಲೇ ಕರ್ನಾಟಕ ಚುನಾವಣಾ ದಿನಾಂಕ ಫಿಕ್ಸ್ ಆಗಿದೆ. ಮೇ 12ಕ್ಕೆ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿದೆ. ಮೇ 15ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ಚುನಾವಣೆಗೆ ಒಂದು ಅದ್ಭುತ ಗೀತೆಯನ್ನು ರಚನೆ ಮಾಡುವ ಜವಾಬ್ದಾರಿಯು ಚಿತ್ರ ನಿರ್ದೇಶಕರು ಹಾಗೂ ಗೀತೆ ರಚನೆಕಾರರಾದ ಯೋಗರಾಜ್ ಭಟ್ ಅವರಿಗೆ ಹಾಗೂ ಪಂಚತಂತ್ರ ಚಿತ್ರತಂಡಕ್ಕೆ ಚುನಾವಣಾ ಆಯೋಗ ನೀಡಿದೆ.
ಹಾಡನ್ನು ಚಿತ್ರೀಕರಿಸುವ ಜವಾಬ್ದಾರಿಯನ್ನೂ ಕೂಡ ಅವರಿಗೆ ನೀಡಲಾಗಿದೆ. ಈ ಬಗ್ಗೆ ಮಾತನಾಡಿರುವ ಯೋಗರಾಜ್ ಭಟ್ ಅವರು ಇದು ನನ್ನ ಹಾಗೂ ನನ್ನ ತಂಡಕ್ಕೆ ದೊಡ್ಡ ಹೆಮ್ಮೆಯಾಗಿದೆ. ಚಿತ್ರೀಕರಣವನ್ನೂ ಈಗಾಗಲೇ ರಾಜ್ಯದಲ್ಲಿ ಆರಂಭ ಮಾಡಿದ್ದು, ಗೀತರಚನೆಯೂ ಕೂಡ ನಡೆಯುತ್ತಿದೆ. ಸಂಗೀತ ನಿರ್ದೇಶನ ಹರಿಕೃಷ್ಣ ಅವರ ಜವಾಬ್ದಾರಿಯಾಗಿದ್ದು, ಇಮ್ರಾನ್ ಸರ್ದಾರಿಯ ನೃತ್ಯ ಸಂಯೋಜಕರಾಗಿದ್ದಾರೆ ಎಂದು ಹೇಳಿದ್ದಾರೆ.
ಮೀಡಿಯಾ ಕನೆಕ್ಟ್ ಸಂಸ್ಥೆ ಪ್ರಸ್ತುತಪಡಿಸುತ್ತಿರುವ ಹಾಡು ಜನಮಾನಸದಲ್ಲಿ ವೈರಲ್ ಆಗುವ ಸಾಧ್ಯತೆಗಳಿವೆ ಎನ್ನಬಹುದಾಗಿದೆ. ಈ ಒಂದು ಹಾಡಿನಿಂದಾಗಿ ಓಟು ಮಾಡುವವರ ಸಂಖ್ಯೆ ಹೆಚ್ಚಾದಲ್ಲಿ ನಮ್ಮ ಶ್ರಮ ಸಾರ್ಥಕ. ಓಟಿಂಗ್ ಹೆಚ್ಚಿಸಲು ಮತ್ತು ಹಾಡನ್ನು ಪ್ರಚುರಪಡಿಸಲು ಮಾಧ್ಯಮದವರೆಲ್ಲಾ ಕೈ ಜೋಡಿಸಬೇಕು ಎಂದು ಅವರು ಹೇಳಿದ್ದಾರೆ.