ತೆಲಂಗಾಣ ಸಿಎಂ ಕೆಸಿಆರ್ಗೆ ಮೂಗುದಾರ
ಲೋಕಸಭೆ ವಿಸರ್ಜನೆ ಮಾಡಿದ ತತ್ಕ್ಷಣವೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಈ ಸಂದರ್ಭದಲ್ಲಿ ಹಂಗಾಮಿ ಸರ್ಕಾರ ಯಾವುದೇ ಅನುದಾನ ಹಂಚಿಕೆ ಮತ್ತು ಹೊಸ ಯೋಜನೆ ಅನುಷ್ಠಾನ ಗೊಳಿಸುವಂತಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ನಿಟ್ಟಿನಲ್ಲಿ ತೆಲಂಗಾಣ ಹಂಗಾಮಿ ಮುಖ್ಯಮಂತ್ರಿಗೆ ಮೂಗುದಾರ ವಿಧಿಸಿದಂತಾಗಿದೆ.
ನವದೆಹಲಿ: ಅವಧಿಪೂರ್ವ ಚುನಾವಣೆಗೆ ಕೋರಿ ವಿಧಾನಸಭೆ ಅಥವಾ ಲೋಕಸಭೆ ವಿಸರ್ಜನೆ ಮಾಡಿದ ತತ್ಕ್ಷಣವೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಈ ಸಂದರ್ಭದಲ್ಲಿ ಹಂಗಾಮಿ ಸರ್ಕಾರ ಯಾವುದೇ ಅನುದಾನ ಹಂಚಿಕೆ ಮತ್ತು ಹೊಸ ಯೋಜನೆ ಅನುಷ್ಠಾನ ಗೊಳಿಸುವಂತಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. ಹೀಗಾಗಿ ಈಗಾಗಲೇ ತೆಲಂಗಾಣದಲ್ಲಿ ಚುನಾವಣಾ ನೀತಿ ಸಂಹಿಗೆ ಜಾರಿಗೆ ಬಂದಿದೆ ಆಯೋಗ ಸ್ಪಷ್ಟಪಡಿಸಿದೆ.
ಆಯೋಗದ ಈ ನಿಲುವು, ಅವಧಿ ಪೂರ್ವ ಚುನಾವಣೆಗಾಗಿ ವಿಧಾನಸಭೆ ವಿಸರ್ಜಿಸಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಮರ್ಮಘಾತವೇ ಆಗಿದೆ.
ಸಾಮಾನ್ಯವಾಗಿ ಚುನಾವಣೆ ದಿನಾಂಕ ಘೋಷಣೆಯಾಗಿ, ಚುನಾವಣೆ ಪ್ರಕ್ರಿಯೆ ಮುಗಿಯುವ ಹಂತದವರೆಗೂ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತಿತ್ತು. ಆದರೆ, ಆಡಳಿತಾರೂಢ ಹಂಗಾಮಿ ಸರ್ಕಾರವು ಪರಿಸ್ಥಿತಿಯ ಲಾಭವನ್ನು ದುರುಪಯೋಗಪಡಿಸಿಕೊಳ್ಳುತ್ತದೆ ಎಂಬ ನಿಟ್ಟಿನಲ್ಲಿ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಇಂಥ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಇದರ ಪ್ರಕಾರ ಯಾವುದೇ ಹೊಸ ಕಾರ್ಯಕ್ರಮಗಳಿಗೆ ಸಂಪನ್ಮೂಲ ಬಳಸುವಂತಿಲ್ಲ. ಹಂಗಾಮಿ ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳಿಗೂ ಇದೇ ನಿಯಮ ಅನ್ವಯವಾಗುತ್ತದೆ ಎಂದು ಆಯೋಗ ಸ್ಪಷ್ಟವಾಗಿ ಹೇಳಿದೆ.