* ಉಗ್ರರಿಗೆ ಹಣಕಾಸು ಪೂರೈಕೆ ಸಂಬಂಧ ರಾಜ್ಯದಲ್ಲಿ 5 ಲಕ್ಷದ ಆಸ್ತಿ ಜಪ್ತಿ ಮಾಡಿದ ಇಡಿ* ಧೀರಜ್ ಸಾವೋ ಎಂಬವನ ಖಾತೆಗೆ ದೇಶದ ವಿವಿಧೆಡೆಯ ಅನಾಮಿಕರಿಂದ ಹಣ ಬರುತ್ತಿತ್ತು* ಕಮಿಷನ್ ಪಡೆದು ಇಂಡಿಯನ್ ಮುಜಾಹಿದೀನ್ ನಂಟಿರುವ ಕೆಲವರಿಗೆ ಈತ ಹಣ ರವಾನಿಸುತ್ತಿದ್ದ* ಅವರು ಮಂಗಳೂರಿನ ಪಂಜಿಮೊಗೆರು ಎಂಬಲ್ಲಿ ಆಸ್ತಿ ಖರೀದಿಸಿದ್ದು ಇದೀಗ ಪತ್ತೆಯಾಗಿದೆ* ಇವರೆಲ್ಲರಿಗೂ ಪಾಕಿಸ್ತಾನದ ಖಾಲಿದ್ ಎಂಬ ವ್ಯಕ್ತಿಯ ನಂಟು ಇದೆ. ತನಿಖೆ ಪ್ರಗತಿಯಲ್ಲಿದೆ

ನವದೆಹಲಿ: ಕರ್ನಾಟಕದಲ್ಲಿ, ಅದರಲ್ಲೂ ವಿಶೇಷವಾಗಿ ಕರಾವಳಿ ಭಾಗದಲ್ಲಿ ಭಯೋತ್ಪಾದಕರ ಜಾಲವಿದೆ ಎಂಬ ವಾದಕ್ಕೆ ಪುಷ್ಟಿ ನೀಡುವಂತೆ, ಜಾರಿ ನಿರ್ದೇಶನಾಲಯ (ಇ.ಡಿ.), ರಾಜ್ಯದಲ್ಲಿ ನಿಷೇಧಿತ ಇಂಡಿಯನ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಯ ಕಾರ್ಯಕರ್ತರಿಗೆ ಸೇರಿದ ೫ ಲಕ್ಷ ರು. ಮೌಲ್ಯದ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಇದಲ್ಲದೆ, ಈ ಉಗ್ರರಿಗೆ ಪಾಕಿಸ್ತಾನದ ನಂಟು ಕೂಡ ಇದೆ ಎಂಬ ವಿಷಯವನ್ನು ಅದು ಖಚಿತಪಡಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌'ಎ) ಅನುಸಾರ ಮಂಗಳೂರಿನಲ್ಲಿನ ಸ್ಥಿರಾಸ್ತಿಯೊಂದು ಸೇರಿದಂತೆ 5 ಲಕ್ಷ ರುಪಾಯಿ ಮೌಲ್ಯದ ಆಸ್ತಿ-ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ‘ಈ ಆಸ್ತಿಪಾಸ್ತಿಯು ಉಗ್ರಗಾಮಿ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸುವ ವ್ಯಕ್ತಿಗಳಿಗೆ ಸೇರಿದೆ. ಈ ವ್ಯಕ್ತಿಗಳಿಗೆ ಪಾಕಿಸ್ತಾನದ ಸಂಪರ್ಕವೂ ಇದೆ’ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ‘ಧೀರಜ್ ಸಾವೋ ಎಂಬಾತನ ಖಾತೆಗೆ ದೇಶದ ವಿವಿಧ ಭಾಗಗಳಿಂದ ಹಣ ಬಂದು ಬೀಳುತ್ತಿತ್ತು. ಈತ ತನ್ನ ಕಮಿಶನ್ ಇರಿಸಿಕೊಂಡು ಇಂಡಿಯನ್ ಮುಜಾಹಿದೀನ್ (ಐಎಂ) ಸಂಘಟನೆಗೆ ಸೇರಿದ ವಿವಿಧ ವ್ಯಕ್ತಿಗಳ ಖಾತೆಗೆ ಹಣವನ್ನು ವರ್ಗಾಯಿಸುತ್ತಿದ್ದ.

Add Asianetnews Kannada as a Preferred SourcegooglePreferred

ಐಎಂ ಜತೆ ನಂಟಿದ್ದ ಮಂಗಳೂರಿನ ಜುಬೇರ್ ಹುಸೇನ್, ಆಯಿಷಾ ಬಾನು ಹಾಗೂ ರಾಜು ಖಾನ್ ಹಾಗೂ ಇತರರ ಖಾತೆಗೂ ಹಣ ಜಮೆ ಆಗಿತ್ತು’ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. 2013ರಲ್ಲೇ ಆಯೇಷಾ ಮತ್ತು ಇತರರನ್ನು ಎನ್'ಐಎ ಬಂಧಿಸಿತ್ತು. ‘ಇದೇ ಹಣದಿಂದ ಬಾನು ಹಾಗೂ ಹುಸೇನ್ ಅವರು ಮಂಗಳೂರಿನ ಪಂಜಿಮೊಗೇರು ಎಂಬಲ್ಲಿ ಆಸ್ತಿ ಖರೀದಿಸಿದ್ದರು ಎಂದು ನಮಗೆ ತನಿಖೆಯಿಂದ ತಿಳಿದುಬಂತು. ಆರೋಪಿಗಳಿಗೆ ಪಾಕಿಸ್ತಾನಿ ನಾಗರಿಕ ಖಾಲಿದ್ ಎಂಬಾತನ ಸಂಪರ್ಕವಿದೆ. ಈತನ ನಿರ್ದೇಶನಾನುಸಾರ ಆರೋಪಿಗಳು ವಿವಿಧ ಬ್ಯಾಂಕ್‌'ಗಳಲ್ಲಿ ಖಾತೆ ತೆರೆದಿದ್ದರು. ಇಲ್ಲಿ ಹಣ ಸ್ವೀಕಾರ ಮಾಡಿ ಐಎಂನ ವಿವಿಧ ಉಗ್ರರ ಖಾತೆಗೆ ಕಮಿಶನ್ ಮುರಿದುಕೊಂಡು ಉಳಿದ ಹಣ ಜಮೆ ಮಾಡುತ್ತಿದ್ದರು’ ಎಂದು ಅದು ವಿವರಿಸಿದೆ. ‘ಎಲ್ಲ ಖಾತೆಗಳನ್ನು ಪರಿಶೀಲಿಸಿದಾಗ ಅಪರಿಚಿತ ವ್ಯಕ್ತಿಗಳು ಭಾರತದ ವಿವಿಧ ಭಾಗಗಳಲ್ಲಿ ಈ ಖಾತೆಗಳಿಗೆ ಹಣ ಜಮೆ ಮಾಡುತ್ತಿದ್ದುದು ಕಂಡುಬಂದಿದೆ. ಹಣ ಜಮೆಯಾದ ಕೂಡಲೇ ಮೂಲ ಶಾಖೆಗಳನ್ನು ಹೊರತುಪಡಿಸಿ ಇತರೆಡೆ ಎಟಿಎಂನಿಂದ ಹಣ ವಿತ್‌'ಡ್ರಾ ಆಗುತ್ತಿತ್ತು. ಇದು ಉಗ್ರ ಚಟುವಟಿಕೆಗಳಿಗೆ ಬಳಕೆಯಾಗುತ್ತಿತ್ತು. ಹೀಗಾಗಿ ಇತರರ ಭಾಗೀದಾರಿಕೆ ಹಾಗೂ ಸಂಪರ್ಕದ ಬಗ್ಗೆಯೂ ತನುಖೆ ನಡೆದಿದೆ’ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

epaperkannadaprabha.com