ಮನೆಗಾಗಿ ಅಲೆಯುತ್ತಿದ್ದ ಮುಸ್ಲಿಂ ವೈದ್ಯರ ಕೈ ಹಿಡಿದ ದುರ್ಗಾ ಪೂಜಾ ಕಮಿಟಿ!
ಮುಸ್ಲಿಮರೆಂಬ ಕಾರಣಕ್ಕೆ ಮನೆ ನಿರಾಕರಣೆ! ನಗರದಲ್ಲಿ ಮನೆ ಸಿಗದೇ ಒದ್ದಾಡಿದ ಯುವ ವೈದ್ಯರು! ವೈದ್ಯರಿಗೆ ಸಹಾಯ ಮಾಡಿದ ದುರ್ಗಾ ಪೂಜಾ ಕಮಿಟಿ! ಪಶ್ಚಿಮ ಬಂಗಾಳಧ ಕೋಲ್ಕತ್ತಾದಲ್ಲಿ ಸಾಮರಸ್ಯದ ಸಂದೇಶ
ಕೋಲ್ಕತ್ತಾ(ಆ.೪): ಕೋಲ್ಕತ್ತಾದಲ್ಲಿ ಮುಸ್ಲಿಮರೆಂಬ ಕಾರಣಕ್ಕೆ ಮೂವರು ವೈದ್ಯರಿಗೆ ಮನೆ ಬಾಡಿಗೆ ನೀಡಲು ನಿರಾಕರಿಸಲಾಗಿತ್ತು. ಆದರೆ ಸ್ಥಳೀಯ ದುರ್ಗಾ ಪೂಜಾ ಕಮಿಟಿ ಆ ಮುಸ್ಲಿಂ ವೈದ್ಯರಿಗೆ ಆಶ್ರಯ ನೀಡಿದ್ದಲ್ಲದೇ, ಎನ್ಜಿಓ ಸಹಾಯದಿಂದ ಅವರಿಗೆ ಮನೆ ಕೊಡಿಸುವಲ್ಲಿ ಯಶಸ್ವಿಯಾಗಿದೆ.
ಇಲ್ಲಿನ ಮೊಹ್ಮದ್ ಅಫ್ತಾಬ್ ಆಲಂ, ಮೊಜ್ತಾಬಾ ಹಸನ್, ನಾಸೀರ್ ಶೇಖ್ ಎಂಬ ಮೂವರು ಯುವ ಮುಸ್ಲಿಂ ವೈದ್ಯರು ಮನೆಯೊಂದನ್ನು ಬಾಡಿಗೆ ಪಡೆದಿದ್ದರು. ಆದರೆ ಮನೆ ಬಾಡಿಗೆ ನೀಡಿದ ಮಾಲೀಕ ಕೇವಲ ಒಮದೇ ವಾರದಲ್ಲಿ ಅವರನ್ನು ಅವರ ಧರ್ಮದ ಕಾರಣಕ್ಕೆ ಮನೆಯಿಂದ ಹೊರ ಹಾಕಿದ್ದಾನೆ.
ಏಕಾಏಕಿ ನಿರ್ಗತಿಕರಾದ ಈ ಮೂವರೂ ವೈದ್ಯರು ನಗರದಲ್ಲಿ ಅದೆಷ್ಟೇ ಮನೆ ಹುಡುಕಿದರೂ ಒಂದಲ್ಲಾ ಒಂದು ಕಾರಣ ನೀಡಿ ಇವರಿಗೆ ಮನೆ ನಿರಾಕರಿಸಲಾಗುತ್ತಿತ್ತು. ವಿಷಯ ಅರಿತ ಸ್ಥಳೀಯ ದುರ್ಗಾ ಪೂಜಾ ಕಮಿಟಿ ಸದಸ್ಯರು, ಮೂವರೂ ವೈದ್ಯರಿಗೆ ಆಶ್ರಯ ಕಲ್ಪಿಸಿದ್ದಲ್ಲದೇ ಶಾಂಗತಿ ಅಭಿಜಾನ್ ಎಂನ ಎನ್ಜಿಓ ಸಹಾಯದಿಂದ ಅವರಿಗೆ ಸೂಕ್ತ ಬಾಡಿಗೆ ಮನೆ ಕೊಡಿಸುವಲ್ಲಿ ಯಶಸ್ವಿಯಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೂವರೂ ವೈದ್ಯರು, ಸ್ಥಳೀಯ ದುರ್ಗಾ ಪೂಜಾ ಕಮಿಟಿ ಸದಸ್ಯರಾದ ದ್ವೈಪಾಯನ್ ದಾ ಸೂಕ್ತ ಸಮಯದಲ್ಲಿ ನಮ್ಮ ಸಹಾಯಕ್ಕೆ ಬಂದಿದ್ದರಿಂದ ಸಮಸ್ಯೆ ಬಗೆಹರಿದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಹಿಂದೂ, ಮುಸ್ಲಿಮರ ನಡುವೆ ವೈಷಮ್ಯ ಹೆಚ್ಚುತ್ತಿದೆ ಎಂದು ಕೆಲವರು ಬೊಬ್ಬೆ ಹೊಡೆಯುತ್ತಿರುವ ಈ ಸಂದರ್ಭದಲ್ಲಿ ಈ ಘಟನೆ ಸಾಮರಸ್ಯದ ಪ್ರತೀಕವಾಗಿ ನಿಲ್ಲುತ್ತದೆ.