ಭಾರತಕ್ಕೆ ಬೇಕಾಗಿದ್ದ ವಂಚಕನ ಗಡಿಪಾರಿಗೆ ದುಬೈ ನಿರ್ಧಾರ!
ಬಹುಕೋಟಿ ವಿವಿಐಪಿ ಚಾಪರ್ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್! ಕ್ರಿಶ್ಚಿಯನ್ ಮೈಕೆಲ್ ಗಡಿಪಾರಿಗೆ ಅಭ್ಯಂತರ ಇಲ್ಲ ಎಂದ ದುಬೈ ಉಚ್ಛ ನ್ಯಾಯಾಲಯ! ವಿವಿಐಪಿ ಚಾಪರ್ ಹಗರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಕ್ರಿಶ್ಚಿಯನ್ ಮೈಕೆಲ್! ಕ್ರಿಶ್ಚಿಯನ್ ಮೈಕೆಲ್ ಗಡಿಪಾರು ಆದೇಶ ಭಾರತಕ್ಕೆ ಸಹಕಾರಿ
ದುಬೈ(ನ.19): ಬಹುಕೋಟಿ ವಿವಿಐಪಿ ಚಾಪರ್ ಹಗರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಪ್ರಮುಖ ಆರೋಪಿ, ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಗಡಿಪಾರಿಗೆ ದುಬೈ ಕೋರ್ಟ್ ಆದೇಶ ನೀಡಿದೆ.
ದುಬೈನಲ್ಲಿ ಬಂಧನಕ್ಕೊಳಗಾಗಿರುವ ಕ್ರಿಶ್ಚಿಯನ್ ಮೈಕೆಲ್ನನ್ನು ಗಡಿಪಾರು ಮಾಡಬಹುದೆಂದು ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ದುಬೈ ಉಚ್ಛ ನ್ಯಾಯಾಲಯ ಎತ್ತಿ ಹಿಡಿದಿದ್ದು ಮೈಕೆಲ್ ಗಡಿಪಾರಿಗೆ ತನ್ನ ಅಭ್ಯಂತರ ಇಲ್ಲ ಎಂದು ಹೇಳಿದೆ.
3,600 ಕೋಟಿ ರೂಪಾಯಿ ಮೊತ್ತದ ವಿವಿಐಪಿ ಚಾಪರ್ ಹಗರಣದಲ್ಲಿ ಭಾರತಕ್ಕೆ ಬೇಕಾಗಿರುವ ಕ್ರಿಶ್ಚಿಯನ್ ಮೈಕೆಲ್ ಗಡಿಪಾರು ಆದೇಶ ಭಾರತಕ್ಕೆ ಸಹಕಾರಿಯಾಗಲಿದೆ. ಗಡಿಪಾರು ಮಾಡುವ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ ಮೈಕೆಲ್ ಪರ ವಕೀಲರು ಇಟಲಿ ಹಾಗೂ ಸ್ವಿಟ್ಜರ್ಲ್ಯಾಂಡ್ ಕೋರ್ಟ್ಗಳು ಬ್ರಿಟನ್ ಪ್ರಜೆ ಕ್ರಿಶ್ಚಿಯನ್ ಮೈಕೆಲ್ ನನ್ನು ಗಡಿಪಾರು ಮಾಡದಂತೆ ನೀಡಿದ್ದ ಆದೇಶವನ್ನು ಉಲ್ಲೇಖಿಸಿದ್ದರು.
ಮೈಕೆಲ್ ಪಾಸ್ಪೋರ್ಟ್ನ್ನು ವಶಕ್ಕೆ ಪಡೆದಿದ್ದ ದುಬೈ ನ್ಯಾಯಾಂಗ ಅಧಿಕಾರಿಗಳು ಸೆ.2 ರಂದು ಆತನನ್ನು ವಾಂಟೆಡ್ ಎಂದು ಘೋಷಿಸಿದ್ದರು. ಈಗ ಭಾರತಕ್ಕೆ ಬೇಕಾಗಿರುವ ಆರೋಪಿಯನ್ನು ದುಬೈ ನ್ಯಾಯಾಲಯ ಗಡಿಪಾರು ಮಾಡಲು ಸೂಚನೆ ನೀಡಿದೆ.