ಬೆಂಗಳೂರು(ಮಾ.04): ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಮೂರು ದಿನಗಳಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ಓಲಾ ಮತ್ತು ಉಬರ್ ಕ್ಯಾಬ್ ಚಾಲಕರು ಮತ್ತು ಮಾಲೀಕರು, ಸಂಸ್ಥೆಗೆ ಸೆಡ್ಡು ಹೊಡೆಯಲು ನಿರ್ಧರಿಸಿದ್ದಾರೆ.
ತಮ್ಮದೇ ಆದ ಹೊಸ ಅ್ಯಪ್ ಸಿದ್ಧಪಡಿಸಿ ಕಾರ್ಯ ನಿರ್ವಹಿಸಲು ನಿರ್ಣಯ ಕೈಗೊಂಡಿದ್ದಾರೆ. ಕಾನೂನು ಹೋರಾಟಕ್ಕೆ ಬೆಂಬಲ ಸೂಚಿಸುವುದಾಗಿ ಭರವಸೆ ನೀಡಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಂದಿನ ಎರಡು ದಿನಗಳಲ್ಲಿ ಭೇಟಿ ಮಾಡಿ ಅಂತಿಮ ನಿರ್ಣಯ ಕೈಗೊಳ್ಳುವುದಾಗಿ ಧರಣಿ ನಿರತ ಓಲಾ ಮತ್ತು ಉಬರ್ ಕ್ಯಾಬ್ ಚಾಲಕರು ಮತ್ತು ಮಾಲೀಕರ ಸಂಘವು ತಿಳಿಸಿದೆ. ಕುಮಾರಸ್ವಾಮಿ ಭೇಟಿ ಬಳಿಕ ಹೊಸದಾಗಿ ಅ್ಯಪ್ ಸಿದ್ಧಪಡಿಸಲಾಗುವುದು.
ನಂತರ ಧರಣಿ ನಡೆಸುತ್ತಿರುವ 40ರಿಂದ 50 ಸಾವಿರ ಚಾಲಕರಿಗೆ ಅ್ಯಪ್ ಬಳಕೆ ಬಗ್ಗೆ, ತಾಂತ್ರಿಕವಾಗಿ ತರಬೇತಿ ನೀಡಿ ಮತ್ತೆ ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದ್ದಾರೆ. ಸಾರಿಗೆ ಇಲಾಖೆ ಮಧ್ಯೆ ಪ್ರವೇಶಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರೂ ಸಹ ಈವರೆಗೆ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸಿಲ್ಲ. ಸಹಕಾರ, ಬೆಂಬಲವನ್ನೂ ಸೂಚಿಸಿಲ್ಲ. ಹೀಗಾಗಿ, ಹೊಸ ಅ್ಯಪ್ ಮೂಲಕ ಕಾರ್ಯ ನಿರ್ವಹಿಸುವುದು ಅನಿವಾರ್ಯವಾಗಿದೆ ಎಂಬ ಮಾತನ್ನು ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.