‘ಸಿಜೇರಿಯನ್ ಬೇಡ ಅಂದ್ರೆ ಗರುಡ್ ಗಂಗೆ ನೀರು ಕುಡಿರಿ’!
ಸಿಜೇರಿಯನ್ ತಪ್ಪಿಸಿಕೊಳ್ಳಲು ಬಿಜೆಪಿ ಸಂಸದರ ಬಳಿ ಇದೆ ರಾಮಬಾಣ| ಗರುಡ್ ಗಂಗೆ ನೀರು ಕುಡಿದರೆ ಸಿಜೇರಿಯನ್ ತಪ್ಪುತ್ತಂತೆ| ಉತ್ತಾರಾಖಂಡ್ ಬಿಜೆಪಿ ರಾಜ್ಯಾಧ್ಯಕ್ಷ ಅಜಯ್ ಭಟ್ ಪ್ರತಿಪಾದನೆ| ಉತ್ತರಾಖಂಡ್’ನ ಭಾಗೇಶ್ವರ್ ಜಿಲ್ಲೆಯ ಕುಮೋನ್ ಬಳಿಯ ಗರುಡ್ ಗಂಗೆ ನದಿ| ಲೋಕಸಭೆಯಲ್ಲಿ ಗರುಡ್ ಗಂಗೆ ನದಿ ಪ್ರಸ್ತಾಪಿಸಿದ ಸಂಸದ ಅಜಯ್ ಭಟ್|
ಡೆಹ್ರಾಡೂನ್(ಜು.20): ಸಹಜ ಹೆರಿಗೆಯಾದರೆ ಸಾಕು..ಇದು ಪ್ರತಿಯೊಬ್ಬ ಗರ್ಭವತಿ ಮತ್ತಾಕೆಯ ಕುಟುಂಬ ನಿತ್ಯವೂ ದೇವರಲ್ಲಿ ಇಡುವ ಬೇಡಿಕೆ. ಸಹಜವಾಗಿ ಮಗು ಜನ್ಮ ತಾಳಿದರೆ ಸಾಕು ಎಂಬುದು ಎಲ್ಲರ ಬಯಕೆಯಾಗಿರುತ್ತದೆ.
ಆದರೆ ಕೆಲವೊಮ್ಮೆ ತಾಯಿ ಮತ್ತು ಮಗುವಿನ ಹಿತದೃಷ್ಟಿಯಿಂದ ಅನಿವಾರ್ಯವಾಗಿ ಸಿಜೇರಿಯನ್ ಮೊರೆ ಹೋಗಬೇಕಾಗುತ್ತದೆ. ಸೀಸೆರಿಯನ್ ನಿಜಕ್ಕೂ ತ್ರಾಸದಾಯಕ ಪ್ರಕ್ರಿಯೆ. ಇದರಿಂದ ತಾಯಿ ಮತ್ತು ಮಗು ಇಬ್ಬರೂ ಸಂಕಷ್ಟ ಅನುಭವಿಸುತ್ತಾರೆ.
ಆದರೆ ದೇಶದ ಗರ್ಭಿಣಿಯರಿಗೆ ಉತ್ತರಾಖಂಡ್ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಅಜಯ್ ಭಟ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಗರ್ಭಿಣಿಯರು ಸಿಜೇರಿಯನ್ ಸಂಕಷ್ಟದಿಂದ ಪಾರಾಗಬೇಕಾದರೆ ಉತ್ತರಾಖಂಡ್’ನ ಭಾಗೇಶ್ವರ್ ಜಿಲ್ಲೆಯ ಕುಮೋನ್ ಬಳಿಯ ಗರುಡ್ ಗಂಗೆ ನದಿಯ ನೀರು ಕುಡಿಯಬೇಕು ಎಂದು ಅಜಯ್ ಭಟ್ ಹೇಳಿದ್ದಾರೆ.
ಈ ಲೋಕಸಭೆಯಲ್ಲಿ ಮಾತನಾಡಿರುವ ಅಜಯ್ ಭಟ್, ಗರುಡ್ ಗಂಗೆಯಲ್ಲಿ ಹಲವು ಆರೋಗ್ಯಕರ ಗುಣಲಕ್ಷಣಗಳಿದ್ದು ಗರ್ಭವತಿಯರು ಸಿಜೇರಿಯನ್ ತಪ್ಪಿಸಿಕೊಳ್ಳಲು ಈ ನದಿಯ ನೀರು ಕುಡಿಯಬೇಕು ಎಂದು ಹೇಳಿದ್ದಾರೆ.
ಹಾವು ಕಚ್ಚಿದರೂ ಗರುಡ್ ಗಂಗೆ ನದಿಯ ನೀರು ಕುಡಿಯುವುದರಿಂದ ವಾಸಿಯಾಗುತ್ತದೆ ಎಂದು ಅಜಯ್ ಭಟ್ ಪ್ರತಿಪಾದಿಸಿದ್ದಾರೆ.