ಮಂತ್ರಾಲಯದಲ್ಲಿ ಉರುಳು ಸೇವೆ ಮಾಡಿದ ರಾಘಣ್ಣ
- ಮಂತ್ರಾಲಯಕ್ಕೆ ಪ್ರತಿ ವರ್ಷವೂ ಭೇಟಿ
- ರಾಯರ ಕೃಪೆಯಿಂದ ಆರೋಗ್ಯ ಸುಧಾರಿಸಿದೆ ಎಂದ ರಾಘವೇಂದ್ರ ರಾಜ್'ಕುಮಾರ್
ರಾಯಚೂರು[ಜೂ.13] : ಮಂತ್ರಾಲಯದ ರಾಘವೇಂದ್ರ ಮಠಕ್ಕೆ ರಾಜ್ ಕುಟುಂಬ ಭೇಟಿ ನೀಡಿದ್ದು ನಟ ರಾಘವೇಂದ್ರ ರಾಜ್'ಕುಮಾರ್ ರಾಯರ ದರ್ಶನ ಪಡೆದು ಉರುಳು ಸೇವೆ ಮಾಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಘವೇಂದ್ರ ಸ್ವಾಮಿ ದರ್ಶನದಿಂದ ನನ್ನ ಆರೋಗ್ಯ ಸುಧಾರಿಸಿದೆ. ಕಳೆದ ಬಾರಿ ಮಠಕ್ಕೆ ಬಂದಾಗ ನನ್ನಿಂದ ನಡೆಯಲು ಆಗುತ್ತಿರಲಿಲ್ಲ. ಆದರೆ ಈ ಬಾರಿ ರಾಯರ ದರ್ಶನ ಹಾಗೂ ಉರುಳು ಸೇವೆ ಮಾಡಿದ್ದೇನೆ.
ಮುಂದಿನ ದಿನಗಳಲ್ಲಿ ಮಠದಂಗಳದಲ್ಲಿ ನಾನು ಓಡಾಡುತ್ತೇನೆ. ತಂದೆಯವರು ರಾಘವೇಂದ್ರರ ಪಾತ್ರ ಮಾಡಿದ ಸಂದರ್ಭದಲ್ಲಿ ನಾನು ಜನಿಸಿದ ಕಾರಣ ನನ್ನ ಹೆಸರನ್ನು ರಾಘವೇಂದ್ರ ಅಂತಾ ಇಡಲಾಗಿದೆ.
ರಾಯರ ಆಶೀರ್ವಾದದಿಂದ ನಮ್ಮ ಕುಟುಂಬ ಬೆಳೆದಿದೆ. ತಂದೆಯವರ ಮಾರ್ಗದರ್ಶನದಲ್ಲಿ ನಾವು ಮಠಕ್ಕೆ ಪ್ರತಿ ವರ್ಷ ಬರುತ್ತೇವೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಾವು ಬೇಡಿಕೊಂಡಿದ್ದೇವೆ. ಯಾವುದೇ ಹೊಸ ಕಾರ್ಯ ಆರಂಭಿಸುವಾಗ ಮಠಕ್ಕೆ ನಾವು ಬರುತ್ತೇವೆ. ಪುತ್ರ ವಿನಯ್ ನಟನೆಯ ಹೊಸ ಸಿನಿಮಾ ಸ್ಕ್ರಿಪ್ಟ್ ಪೂಜೆಗೆ ಆಗಮಿಸಿದ್ದೇವೆ ಎಂದು ತಿಳಿಸಿದರು.
"