‘ಭ್ರಮೆಯಿಂದ ಹೊರಬನ್ನಿ’ ಅಜಿತ್ ದೋವಲ್ ಭೇಟಿ ಬಗ್ಗೆ ಚೀನಾ ಮಾಧ್ಯಮ ಕ್ಯಾತೆ
ಈ ವಾರಾಂತ್ಯದಲ್ಲಿ ನಡೆಯಲಿರುವ ಬ್ರಿಕ್ಸ್ ಸಭೆಯಲ್ಲಿ ಭಾಗವಹಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಬೀಜಿಂಗ್’ಗೆ ಭೇಟಿ ನೀಡುತ್ತಿದ್ದಾರೆ. ಈ ಭೇಟಿಯು ಭಾರತ ಚೀನಾ ನಡುವೆ ಉಂಟಾಗಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ಸಹಕಾರಿಯಾಗಬಹುದೆಂದು ನಿರೀಕ್ಷಿಸಲಾಗುತ್ತಿರುವ ಬೆನ್ನಲ್ಲೇ, ಚೀನಾ ಮಾಧ್ಯಮಗಳು ಅದರ ಬಗ್ಗೆ ಅಪಸ್ವರ ಎತ್ತಿವೆ.
ಬೀಜಿಂಗ್: ಈ ವಾರಾಂತ್ಯದಲ್ಲಿ ನಡೆಯಲಿರುವ ಬ್ರಿಕ್ಸ್ ಸಭೆಯಲ್ಲಿ ಭಾಗವಹಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಬೀಜಿಂಗ್’ಗೆ ಭೇಟಿ ನೀಡುತ್ತಿದ್ದಾರೆ. ಈ ಭೇಟಿಯು ಭಾರತ ಚೀನಾ ನಡುವೆ ಉಂಟಾಗಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ಸಹಕಾರಿಯಾಗಬಹುದೆಂದು ನಿರೀಕ್ಷಿಸಲಾಗುತ್ತಿರುವ ಬೆನ್ನಲ್ಲೇ, ಚೀನಾ ಮಾಧ್ಯಮಗಳು ಅದರ ಬಗ್ಗೆ ಅಪಸ್ವರ ಎತ್ತಿವೆ.
ಅಜಿತ್ ದೋವಲ್ ಬೀಜಿಂಗ್’ಗೆ ಬರುತ್ತಿರುವುದು ಬ್ರಿಕ್ಸ್ ಸಭೆಗೆಯೇ ಹೊರತು ಈ ವಿವಾದವನ್ನು ಬಗೆಹರಿಸಲು ಅಲ್ಲವೆಂದು ಚೀನಾದ ಗ್ಲೋಬಲ್ ಟೈಮ್ಸ್ ತನ್ನ ಸಂಪಾದಕೀಯದಲ್ಲಿ ಬರೆದುಕೊಂಡಿದೆ.
ಬ್ರಿಕ್ಸ್ ಶೃಂಗಸಭೆಯ ಪೂರ್ವಸಿದ್ಧತೆಗಾಗಿ ಸದಸ್ಯ-ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಗೆ ಅಜಿತ್ ದೋವಲ್ ಬರುತ್ತಿದ್ದಾರೆ. ಇದು ಚೀನಾ-ಭಾರತದ ನಡುವಿನ ವಿವಾದಗಳನ್ನು ಬಗೆಹರಿಸುವ ವೇದಿಕೆ ಅಲ್ಲ ಎಂದು ಪತ್ರಿಕೆಯು ಹೇಳಿದೆ.
ಜು. 27 ಮತ್ತು 28ಕ್ಕೆ ಬ್ರಿಕ್ಸ್ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯು ನಡೆಯಲಿದೆ.
ದೋವಲ್ ಭೇಟಿಯು ಚೀನಾ-ಭಾರತ ನಡುವೆ ಉಂಟಾಗಿರುವ ವಿವಾದವನ್ನು ಬಗೆಹರಿಸಬಹದೆಂದು ಭಾರತೀಯ ಮಾಧ್ಯಮಗಳು ಭಾರೀ ನಿರೀಕ್ಷೆಗಳನಿಟ್ಟಿವೆ, ಎಂದು ಅದು ಹೇಳಿದೆ.
ಚೀನಾ ಮತ್ತು ಭಾರತ ನಡುವೆ ಅರ್ಥಪೂರ್ಣ ಮಾತುಕತೆ ನಡೆಯಬೇಕಾದರೆ ಭಾರತ ಮೊದಲು ತನ್ನ ಸೇನೆಯನ್ನು ‘ವಿವಾದಿತ ಗಡಿ’ಯಿಂದ ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಅದು ಹೇಳಿದೆ.
ಚೀನಾ ಭೂಭಾಗದಿಂದ ಭಾರತವು ತನ್ನ ಸೇನೆಯನ್ನು ನಿಶರ್ತವಾಗಿ ಹಿಂಪಡೆದರೆ ಮಾತ್ರ ಚೀನಾವು ಮಾತುಕತೆ ನಡೆಸಲು ಸಿದ್ಧ. ಅಜಿತ್ ದೋವಲ್ ಭೇಟಿಯು ಈ ವಿವಾದವನ್ನು ಬಗೆಹರಿಸುತ್ತದೆ ಎಂಬ ಭ್ರಮೆಯಿಂದ ಭಾರತವು ಹೊರಬರಬೇಕೆಂದು ಅದು ಹೇಳಿದೆ.
ಭಾರತವು ಸ್ವಯಂಪ್ರೇರಿತವಾಗಿ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳದಿದ್ದರೆ, ಚೀನಾ ಸೇನೆಯು ಸೂಕ್ತವಾಗಿ ಪ್ರತಿಕ್ರಿಯಿಸುವುದು ಎಂದು ಪತ್ರಿಕೆಯು ಎಚ್ಚರಿಸಿದೆ.