Me Too ಬಗ್ಗೆ ಕೋರ್ಟ್ ಇದೀಗ ಖಡಕ್ ಎಚ್ಚರಿಕೆಯೊಂದನ್ನು ನೀಡಿದೆ. ಖ್ಯಾತನಾಮರ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪಗಳು ‘ಮೀ ಟೂ’ ಅಭಿಯಾನದಡಿ ಕೇಳಿಬರುತ್ತಿರುವಾಗಲೇ, ‘ಮೀ ಟೂ’ ಅಭಿಯಾನ ಇರುವುದು ಲೈಂಗಿಕವಾಗಿ ಶೋಷಣೆಗೆ ಒಳಗಾದವರಿಗೆ ಮಾತ್ರ ಎಂದಿದೆ.

ಮುಂಬೈ: ಹಲವು ಖ್ಯಾತನಾಮರ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪಗಳು ‘ಮೀ ಟೂ’ ಅಭಿಯಾನದಡಿ ಕೇಳಿಬರುತ್ತಿರುವಾಗಲೇ, ‘ಮೀ ಟೂ’ ಅಭಿಯಾನ ಇರುವುದು ಲೈಂಗಿಕವಾಗಿ ಶೋಷಣೆಗೆ ಒಳಗಾದವರಿಗೆ ಮಾತ್ರ. ಶೋಷಿತರನ್ನು ಇಟ್ಟುಕೊಂಡು ಸ್ವಾರ್ಥ ಸಾಧನೆಗಾಗಿ ಯಾರದೇ ವಿರುದ್ಧ ಲೈಂಗಿಕ ಕಿರುಕುಳ ಆಪಾದನೆ ಮಾಡಲು ಅದನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಬಾಂಬೆ ಹೈಕೋರ್ಟ್‌ ಎಚ್ಚರಿಕೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲೈಂಗಿಕ ಕಿರುಕುಳ ಅನುಭವಿಸಿದವರ ಹೆಗಲಿನ ಮೇಲೆ ಇಟ್ಟು ಗುಂಡು ಹಾರಿಸುವ ಕೆಲಸ ಮಾಡಬಾರದು. ತಮಗಿಷ್ಟಬಂದದ್ದನ್ನು ಬರೆಯಬಾರದು. ಮೀ ಟೂ ಅಭಿಯಾನ ಅದಕ್ಕಾಗಿ ಇಲ್ಲ. ಇಂತಹ ಪ್ರಕರಣಗಳಲ್ಲಿ ಮಾರ್ಗಸೂಚಿಗಳು ಬೇಕು. ಇಲ್ಲದೇ ಹೋದರೆ ಇದನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೋ ಗೊತ್ತಿಲ್ಲ. ಸರ್ಕಾರಗಳೇ ಈ ಬಗ್ಗೆ ಮಾರ್ಗಸೂಚಿ ಸಿದ್ಧಪಡಿಸಬೇಕು ಎಂದು ನ್ಯಾಯಮೂರ್ತಿ ಎಸ್‌.ಜೆ. ಕಥಾವಾಲ್ಲಾ ಅವರು ತಿಳಿಸಿದ್ದಾರೆ.

2015ರಲ್ಲಿ ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ತಮ್ಮ ಕಂಪನಿಯ ಮಹಿಳೆಯೊಬ್ಬರು ಆಪಾದನೆ ಮಾಡಿದ ಬಳಿಕ ಚಿತ್ರ ನಿರ್ದೇಶಕರು ಹಾಗೂ ಮಾಜಿ ಪಾಲುದಾರರೂ ಆದ ಅನುರಾಗ್‌ ಕಶ್ಯಪ್‌, ವಿಕ್ರಮಾದಿತ್ಯ ಮೋಟ್ವಾನೆ ಹಾಗೂ ಮಥು ಮಾಂಟೆನಾ ಅವರು ತಮ್ಮ ವಿರುದ್ಧ ಸರಣಿ ಆರೋಪಗಳನ್ನು ಮಾಡುತ್ತಿದ್ದಾರೆ. ಅವರಿಂದ ತಮ್ಮ ಮಾನಹಾನಿಯಾಗಿದ್ದು 10 ಕೋಟಿ ರು. ಪರಿಹಾರ ಕೊಡಿಸಬೇಕು ಎಂದು ಚಿತ್ರ ನಿರ್ದೇಶಕ ವಿಕಾಸ್‌ ಬಹಲ್‌ ಅವರು ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದೇ ವೇಳೆ, ಈ ಪ್ರಕರಣದಲ್ಲಿ ತಾವು ಕಕ್ಷಿದಾರರಾಗಲು ಇಷ್ಟಪಡುವುದಿಲ್ಲ ಎಂದು ವಿಕಾಸ್‌ ವಿರುದ್ಧ ಆರೋಪ ಮಾಡಿದ್ದ ಮಹಿಳೆಯ ಪರ ವಕೀಲರು ನ್ಯಾಯಾಲಯ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಸಿದ ನ್ಯಾಯಮೂರ್ತಿಗಳು, ಮಹಿಳೆಗೇ ಈ ಪ್ರಕರಣ ಮುಂದುವರಿಸಲು ಇಷ್ಟವಿಲ್ಲ. ಹೀಗಾಗಿ ಯಾರೊಬ್ಬರೂ ಈ ಪ್ರಕರಣದ ಬಗ್ಗೆ ಮಾತನಾಡಬಾರದು ಎಂದು ತಾಕೀತು ಮಾಡಿತು.