ಅನ್ನ ಹಾಕಿ ಸಾಕಿದ ಮಾಲೀಕನೆಡೆ ನಾಯಿಯ ಪ್ರಾಮಾಣಿಕತೆ| ಮಾಲೀಕ ಹಾಗೂ ಆತನ ಕುಟುಂಬವನ್ನು ಕಾಪಾಡಲು ತನ್ನ ಪ್ರಾಣವನ್ನೇ ಬಲಿ ಕೊಟ್ಟ ನಾಯಿ| ವಿಷಕಾರಿ ಹಾವಿನೊಂದಿಗೆ ಕಾದಾಡಿ ಪ್ರಾಣ ತೆತ್ತ ನಾಯಿ

ಪಾಟ್ನಾ[ಆ.04]: ನಾಯಿಯ ಪ್ರಾಮಾಣಿಕತೆಗೆ ಸಾಟಿಯೇ ಇಲ್ಲ ಎಂಬ ಮಾತಿದೆ. ಇದಕ್ಕೆ ಉದಾಹರಣೆ ಎಂಬಂತೆ ಹಲವಾರು ಘಟನೆಗಳೂ ನಮ್ಮ ಕಣ್ಣೆದುರು ಸಂಭವಿಸುತ್ತವೆ. ಸದ್ಯ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ನಾಯಿಯೊಂದು ವಿಷಕಾರಿ ಹಾವಿನೊಂದಿಗೆ ಕಾದಾಡಿ ತನ್ನನ್ನು ಮುದ್ದಿನಿಂದ ಸಾಕಿದ ಮಾಲೀಕನನ್ನು ಕಾಪಾಡಿದೆ. ದುರಾದೃಷ್ಟವಶಾತ್ ಮಾಲೀಕನನ್ನು ಕಾಪಾಡುವ ಭರದಲ್ಲಿ ಶ್ವಾನ ತನ್ನ ಪ್ರಾಣವನ್ನೇ ಬಲಿ ನೀಡಿದೆ. ಸದ್ಯ ಈ ಘಟನೆ ಜಿಲ್ಲೆಯಾದ್ಯಂತ ಸದ್ದು ಮಾಡಲಾರಂಭಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಾರಾಜಗಂಗಜ್ ನಗರ ಪಂಚಾಯತ್‌ನ ಹಳ್ಳಿಯೊಂದರಲ್ಲಿ ಗುರುವಾರ ರಾತ್ರಿ ಸಾಕು ನಾಯಿ ಮಾಲೀಕನೆಡೆ ತನ್ನ ಪ್ರಾಮಾಣಿಕತೆಯನ್ನು ತೋರುತ್ತಾ, ತನ್ನ ಪ್ರಾಣ ಬಲಿ ನೀಡಿ ತನ್ನನ್ನು ಸಾಕಿದ್ದ ಕುಟುಂಬ ಮಂದಿಯನ್ನು ಕಾಪಾಡಿದೆ. ಹೌದು ಇಲ್ಲಿನ ಮುಖೇಸ್ ಪಾಂಡೆ ಕುಟುಂಬ ಮಂದಿ ರಾತ್ರಿ ಊಟ ಮಾಡಿ ಮಲಗಿದ್ದರು. ಹೀಗಿರುವಾಗ ವಿಷಕಾರಿ ಹಾವೊಂದು ಮನೆಯೊಳಗೆ ನುಗ್ಗಲು ಯತ್ನಿಸಿದೆ. ಆದರೆ ಮನೆ ಕಾಯುತ್ತಿದ್ದ ನಾಯಿಯ ಕಣ್ಣು ಹಾವಿನ ಮೇಲೆ ಬಿದ್ದಿದೆ. ತಡ ಮಾಡದ ನಾಯಿ ಕೂಡಲೇ ಜೋರಾಗಿ ಬೊಗಳುತ್ತಾ ಹಾವಿನ ಮೇಲೆರಗಿ ಕಾದಾಟ ಆರಂಭಿಸಿದೆ.

ಆದರೆ ಇದಾವುದನ್ನೂ ಅರಿಯದ ಮುಕೇಶ್ ಪಾಂಡೆ ಕುಟುಂಬ ಸದಸ್ಯರು ಶುಕ್ರವಾರ ಬೆಳಗ್ಗೆ ಎಂದಿನಂತೆ ಎದ್ದು, ಹೊರಗೆ ಬಂದಾಗ ವಿಚಾರ ಬೆಳಕಿಗೆ ಬಂದಿದೆ. ಒಂದೆಡೆ ನಾಯಿ ಸತ್ತು ಬಿದ್ದದ್ದರೆ, ಪಕ್ಕದಲ್ಲೇ ಹಾವು ಕೂಡಾ ಸತ್ತು ಬಿದ್ದಿತ್ತು. ನಾಯಿಯ ಪ್ರಾಮಾಣಿಕತೆ ಇಡೀ ಗ್ರಾಮಸ್ಥರನ್ನು ಭಾವುಕರನ್ನಾಗಿಸಿದೆ. ಸದ್ಯ ಈ ಪುಟ್ಟ ನಾಯಿಯ ಪ್ರಾಮಾಣಿಕತೆ ಎ್ಲಲೆಡೆ ಸದ್ದು ಮಾಡುತ್ತಿದೆ.