ಸಿಬಿಐ ಹಂಗಾಮಿ ನಿರ್ದೇಶಕ ಹಿಂದುತ್ವವಾದಿಯೇ?! ಎಂ. ನಾಗೇಶ್ವರ್ ರಾವ್ ಹಿಂದೂ ಪರ ನಿಲುವೇ ಅವರ ನೇಮಕಕ್ಕೆ ಕಾರಣವೇ?! ಆರ್‌ಎಸ್‌ಎಸ್‌ ಜೊತೆಗಿನ ನಾಗೇಶ್ವರ್ ರಾವ್ ನಂಟು ಎಂತದ್ದು?! ರಾಮ್ ಮಾಧವ್ ಇಂಡಿಯಾ ಫೌಂಡೇಶನ್‌ನಲ್ಲಿ ರಾವ್ ಸಕ್ರೀಯ?! ಹಿಂದೂ ಬೇಡಿಕೆಗಳಿಗೆ ಧ್ವನಿಗೂಡಿಸುವ ಹಿರಿಯ ಐಪಿಎಸ್ ಅಧಿಕಾರಿ?

ನವದೆಹಲಿ(ಅ.26): ಹಿರಿಯ ಐಪಿಎಸ್ ಅಧಿಕಾರಿ ಎಂ ನಾಗೇಶ್ವರ್ ರಾವ್ ಅವರನ್ನು ಸಿಬಿಐ ಹಂಗಾಮಿ ನಿರ್ದೇಶಕರಾಗಿ ನೇಮಕ ಮಾಡಿರುವ ವಿಚಾರ ಈಗಾಗಲೇ ವಿವಾದದ ಸ್ವರೂಪ ಪಡೆದುಕೊಂಡಿದೆ. ಸಿಬಿಐ ಉನ್ನತ ಅಧಿಕಾರಿಗಳ ಜಟಾಪಟಿ ಮತ್ತು ಆ ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಾಲಯ ನಾಗೇಶ್ವರ್ ರಾವ್ ಅವರನ್ನು ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಿದೆ.

Add Asianetnews Kannada as a Preferred SourcegooglePreferred

ನಾಗೇಶ್ವರ್ ರಾವ್ ನೇಮಕದ ಹಿಂದೆ ಹಿಂದುತ್ವದ ಅಜೆಂಡಾ ಕೆಲಸ ಮಾಡಿದೆ ಎಂಬುದು ವಿಪಕ್ಷಗಳು ಮಾಡುತ್ತಿರುವ ಆರೋಪವಾಗಿದೆ. ಕಾರಣ ನಾಗೇಶ್ವರ್ ರಾವ್ ಹಿಂದುತ್ವದ ಕಾರ್ಯಸೂಚಿಗಳನ್ನು ಜಾರಿಗೆ ತರುವಲ್ಲಿ ಸಕ್ರೀಯರಾಗಿರುವುದು ಇದಕ್ಕೆ ಪುಷ್ಠಿ ನೀಡಿದೆ.

ನಾಗೇಶ್‌ವರ್ ರಾವ್ ಹಿನ್ನೆಲೆಯನ್ನು ಗಮನಿಸಿದರೆ, ಈ ಹಿರಿಯ ಐಪಿಎಸ್ ಅಧಿಕಾರಿ ಆರ್‌ಎಸ್‌ಎಸ್‌ ಸಂಘಟನೆಯೊಂದಿಗೆ ಅತ್ಯಂತ ಗಾಢವಾದ ಸಂಬಂಧ ಹೊಂದಿದ್ದಾರೆ. ಹಿಂದೂ ಸಂಘಟನೆಗಳ ಅನೇಕ ಕಾರ್ಯಗಳಿಗೆ ಸಾಥ್ ನೀಡಿರುವ ರಾವ್, ಬಹಿರಂಗವಾಗಿಯೇ ಕೆಲವು ಹೋರಾಟಗಳಿಗೆ ಬೆಂಬಲ ನೀಡಿರುವುದು ಸುಳ್ಳಲ್ಲ.

ಪ್ರಮುಖವಾಗಿ ಹಿಂದೂ ದೇವಾಲಯಗಳ ಮೇಲೆ ಸರ್ಕಾರದ ನಿಯಂತ್ರಣವನ್ನು ಪ್ರಶ್ನಿಸಿ ನಡೆದ ಹೋರಾಟದಲ್ಲಿ ನಾಗೇಶ್ವರ್ ರಾವ್ ಗುರುತಿಸಿಕೊಂಡಿದ್ದರು. ಅಲ್ಪಸಂಖ್ಯಾತರ ಪರ ಮತ್ತು ಹಿಂದೂ ವಿರೋಧಿ ಕಾನೂನುಗಳ ಮಾನ್ಯತೆ ಪ್ರಶ್ನಿಸಿ ನಡೆದ ಚರ್ಚೆಯಲ್ಲೂ ರಾವ್ ಕಾಣಿಸಿಕೊಂಡಿದ್ದರು. ಅಲ್ಲದೇ ಗೋಮಾಂಸ ರಫ್ತು ವಿರೋಧಿ ಹೋರಾಟದಲ್ಲಿ ರಾವ್ ತಮ್ಮ ಧ್ವನಿ ಗಟ್ಟಿಗೊಳಿಸಿದ್ದರು.

ರಾಮ್ ಮಾಧವ್ ಜೊತೆ ರಾವ್ ಸ್ನೇಹ ಸಂಬಂಧ:

ಅಲ್ಲದೇ ರಾವ್ ಮತ್ತು ಆರ್‌ಎಸ್‌ಎಸ್‌ ಪ್ರಚಾರಕರಾಗಿದ್ದ ಮತ್ತು ಸದ್ಯ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ರಾಮ್ ಮಾಧವ್ ನಡುವೆ ಗಾಢವಾದ ಸ್ನೇಹ ಸಂಬಂಧವಿದ್ದು, ರಾಮ್ ಮಾಧವ್ ನೇತೃತ್ವದ ಇಂಡಿಯಾ ಫೌಂಡೇಶನ್‌ನಲ್ಲಿ ರಾವ್ ಸಕ್ರೀಯವಾಗಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಆರ್‌ಎಸ್‌ಎಸ್‌ ಚಿಂತಕರ ಛಾವಡಿ, ವಿವೇಕಾನಂದ ಇಂಟರನ್ಯಾಶನಲ್ ಫೌಂಡೇಶನ್ ಜೊತೆಯೂ ರಾವ್ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಹಿಂದೂ ಸಮಿತಿಯೊಂದು ಸಿದ್ಧಪಡಿಸಿರುವ ಹಿಂದೂ ಶಾಸನಗಳ ಬೇಡಿಕೆ ಎಂಬ 7 ಬೇಡಿಕೆಗಳನ್ನೊಳಗೊಂಡ ಪ್ರಸ್ತಾವವನ್ನು ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲಿದ್ದು, ಈ ಪ್ರಸ್ತಾವನೆ ಸಿದ್ಧಪಡಿಸುವಲ್ಲೂ ನಾಗೇಶ್ವರ್ ರಾವ್ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.