ಟಿವಿ ಬಿಡಲೊಪ್ಪದ ಸಿಧುಗೆ ಖಾತೆ ಬದಲು ಸಂಚಕಾರ?
ಸಿಧು ಟಿವಿ ಶೋಗಳಲ್ಲಿ ಭಾಗವಹಿಸುವುದು ಲಾಭದಾಯಕ ಹುದ್ದೆ ನಿಯಮಗಳನ್ನು ಉಲ್ಲಂಘಿಸುವುದರಿಂದ, ಅದರಿಂದ ಅವರು ದೂರ ಉಳಿಯುವುದು ಒಳ್ಳೆಯದು ಎಂದು ಮೂಲಗಳು ತಿಳಿಸಿವೆ.
ಚಂಡೀಗಡ(ಮಾ.22): ಸಚಿವರಾದರೂ, ಟೀವಿ ಶೋಗಳಲ್ಲಿ ಭಾಗವಹಿಸುವುದನ್ನು ಬಿಡಲೊಪ್ಪದ ಕಾಂಗ್ರೆಸ್ ನಾಯಕ ನವಜೋತ್ಸಿಂಗ್ ಸಿಧು, ಇದೀಗ ತಮ್ಮ ಖಾತೆಗೆ ಸಂಚಕಾರ ತಂದುಕೊಳ್ಳುವ ಸಾಧ್ಯತೆ ಇದೆ.
ಸಿಧು ತಮ್ಮ ನಟನಾ ಚಟುವಟಿಕೆ ಮುಂದುವರಿಸುವುದಾದಲ್ಲಿ, ಅವರ ಸಚಿವ ಖಾತೆ ಬದಲಾಯಿಸಬೇಕಾಗಬಹುದು ಎಂದು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ.
ಪ್ರಸ್ತುತ ಸಿಧುಗೆ ಸ್ಥಳೀಯಾಡಳಿತ, ವಸ್ತು ಸಂಗ್ರಹಾಲಯ ಮತ್ತು ಪ್ರವಾಸೋದ್ಯಮ, ಸಾಂಸ್ಕೃತಿಕ ವ್ಯವಹಾರ ಸಚಿವಾಲಯದ ಜವಾಬ್ದಾರಿ ನೀಡಲಾಗಿದೆ.
ಇದೇ ವೇಳೆ ‘ಪಂಜಾಬ್ನ ಮಾಜಿ ಡಿಸಿಎಂ ಸುಖ್ಬೀರ್ ಬಾದಲ್ ರೀತಿ ನಾನು ಸಾರಿಗೆ ಉದ್ಯಮಿಯಲ್ಲ. ಹಣ ಸಂಪಾದಿಸಲು ನಾನು ಭ್ರಷ್ಟನಾಗಲು ಸಾಧ್ಯವಿಲ್ಲ. ನನ್ನನ್ನು ಆಯ್ಕೆ ಮಾಡಿದ ಜನತೆಗೆ ನಾನು ವಂಚಿಸಲು ಸಾಧ್ಯವಿಲ್ಲ. ನನ್ನ ಕುಟುಂಬ ನಿರ್ವಹಿಸಲು ನಾನು ಟಿವಿ ಶೋಗಳಲ್ಲಿ ಭಾಗವಹಿಸುತ್ತೇನೆ’’ ಎಂದು ಸಿಧು ಹೇಳಿದ್ದಾರೆ.
ಇನ್ನೊಂದೆಡೆ, ಸಿಧು ಟಿವಿ ಶೋಗಳಲ್ಲಿ ಭಾಗವಹಿಸುವುದು ಲಾಭದಾಯಕ ಹುದ್ದೆ ನಿಯಮಗಳನ್ನು ಉಲ್ಲಂಘಿಸುವುದರಿಂದ, ಅದರಿಂದ ಅವರು ದೂರ ಉಳಿಯುವುದು ಒಳ್ಳೆಯದು ಎಂದು ಮೂಲಗಳು ತಿಳಿಸಿವೆ.