ಜಾರಿ ನಿರ್ದೇಶನಾ ಲಯದಿಂದ ಎಫ್‌ಐಆರ್ ದಾಖಲಾಗುವ ಭೀತಿ ಎದುರಿಸುತ್ತಿರುವ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಸೋಮವಾರ ರಾಜ್ಯ ಸರ್ಕಾರದ ನಿಯೋಗದೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. 

ಬೆಂಗಳೂರು : ಆದಾಯ ತೆರಿಗೆ ಇಲಾಖೆ ದಾಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾ ಲಯದಿಂದ ಎಫ್‌ಐಆರ್ ದಾಖಲಾಗುವ ಭೀತಿ ಎದುರಿಸುತ್ತಿರುವ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಸೋಮವಾರ ರಾಜ್ಯ ಸರ್ಕಾರದ ನಿಯೋಗದೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಭಾನುವಾರ ದೆಹಲಿಗೆ ಹಾರಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ನಡುವೆ ಅವರು ಕೇಸುಗಳ ಬಗ್ಗೆ 80 ವಕೀಲರ ಜೊತೆ ಚರ್ಚಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ನೆರೆಯಿಂದ ಉಂಟಾಗಿರುವ ನಷ್ಟದ ಸಂಬಂಧ ಪರಿಹಾರ ಕೇಳುವ ಸಲುವಾಗಿ ಸಿಎಂ ಕುಮಾರಸ್ವಾಮಿ ಹಾಗೂ ಕೊಡಗು ನಿಯೋಗದ ಜತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭೇಟಿಗೆ ಸಮಯ ನಿಗದಿಯಾಗಿದೆ. 

ಈ ನಿಯೋಗದೊಂದಿಗೆ ಶಿವಕುಮಾರ್ ತೆರಳುತ್ತಿದ್ದು, ಬಿಜೆಪಿ ನಾಯಕರಿಂದ ಆದಾಯ ತೆರಿಗೆ ಇಲಾಖೆ ದುರ್ಬಳಕೆ ಆಗುತ್ತಿದೆ ಎಂದು ನರೇಂದ್ರ ಮೋದಿ ಅವರ ಗಮನಕ್ಕೆ ತರುತ್ತಾರೆಯೇ ಎಂಬ ಬಗ್ಗೆ ಕುತೂಹಲ ಮೂಡಿದೆ. ಆದರೆ, ನಿಯೋಗದೊಂದಿಗೆ ಪ್ರತಿಪಕ್ಷ ಬಿಜೆಪಿಯ ಹಲವು ಸದಸ್ಯರು ಹಾಜರಿರುತ್ತಾರೆ. 5 ಜತೆಗೆ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಭೇಟಿ ಮಾಡಲು ಸಮಯವಕಾಶ ನೀಡಿಲ್ಲ. ಹೀಗಾಗಿ ಈ ಬಗ್ಗೆ ಚರ್ಚೆ ಯಾಗುವುದು ಅನುಮಾನ ಎನ್ನಲಾಗಿದೆ. 

80 ವಕೀಲರೊಂದಿಗೆ ಚರ್ಚಿಸುತ್ತಿದ್ದೇನೆ: ದೆಹಲಿಗೆ ತೆರಳುವ ಮೊದಲು ಮಾತನಾಡಿದ ಶಿವಕುಮಾರ್, ಐಟಿ ದಾಳಿ ಪ್ರಕರಣದ ಹಿಂದೆ ಬಿಜೆಪಿ ನಾಯಕರ ಕೈವಾಡ ಇದೆ ಎಂಬುದು ಗೊತ್ತಿದೆ. ಆದರೆ ನಾನು ಕಿವಿಯಲ್ಲಿ ಹೂವು ಇಟ್ಟುಕೊಂಡು ಬೆಂಗಳೂರಿಗೆ ಬಂದಿಲ್ಲ. ಕಾನೂನಾತ್ಮಕವಾಗಿ ಹೇಗೆ ಹೋರಾಟ ಮಾಡಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಈಗ ಪ್ರತಿದಿನ 80 ಜನ ವಕೀಲರ ಜತೆ ಚರ್ಚೆ ಮಾಡುತ್ತಿದ್ದೇನೆ ಎಂದರು. ರಾಜಕೀಯದಲ್ಲಿ ಯಾರ ಶಕ್ತಿ ಹೆಚ್ಚಿರುತ್ತದೆಯೋ ಅವರನ್ನು ಟಾರ್ಗೆಟ್ ಮಾಡುತ್ತಾರೆ. ಬಿಜೆಪಿಯವರು ಸರ್ಕಾರ ಅತಂತ್ರಗೊಳಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. 

ಕಾಂಗ್ರೆಸ್ ಮತ್ತು ಜೆಡಿ ಎಸ್ ಶಾಸಕರ ಜತೆ ಮಾತನಾಡುತ್ತಿದ್ದಾರೆ. ನಾನು ಸಹ ಬೆಂಗಳೂರಿಗೆ ರಾಜಕೀಯ ಮಾಡಲೇ ಬಂದಿದ್ದೇನೆ. ಆಮಿಷ ಒಡ್ಡುವುದು ರಾಜಕೀಯದಲ್ಲಿ ಕಾಮನ್ ಗೇಮ್. ಗೇಮ್ ಆಡುವುದಕ್ಕೆ ನನಗೂ ಬರುತ್ತದೆ ಎಂದರು.