ಕೇಂದ್ರ ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್ ಗರಂ
ಕೇಂದ್ರ ಸರ್ಕಾರ ರಚಿಸಿರುವ ಕಾವೇರಿ ನಿರ್ವಹಣಾ ಸಮಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ನೆರೆ ರಾಜ್ಯದ ಒತ್ತಡಕ್ಕೆ ಮಣಿದಿರುವ ಕೇಂದ್ರವು ರಾಜ್ಯದ ಹಿತವನ್ನು ಕಡೆಗಣಿಸಿ ಏಕಮುಖ ತೀರ್ಮಾನ ಕೈಕೊಂಡಿದೆ ಎಂದು ಆರೋಪಿಸಿದ್ದಾರೆ.
ಹುಬ್ಬಳ್ಳಿ : ಕೇಂದ್ರ ಸರ್ಕಾರ ರಚಿಸಿರುವ ಕಾವೇರಿ ನಿರ್ವಹಣಾ ಸಮಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ನೆರೆ ರಾಜ್ಯದ ಒತ್ತಡಕ್ಕೆ ಮಣಿದಿರುವ ಕೇಂದ್ರವು ರಾಜ್ಯದ ಹಿತವನ್ನು ಕಡೆಗಣಿಸಿ ಏಕಮುಖ ತೀರ್ಮಾನ ಕೈಕೊಂಡಿದೆ ಎಂದು ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ರಾಜ್ಯದ ರೈತರ ಹಾಗೂ ಬೆಂಗಳೂರಿನ ಹಿತ ಮುಖ್ಯವಾಗಿದ್ದು ಕೇಂದ್ರದ ಈ ನಡೆಯ ಬಗ್ಗೆ ಶೀಘ್ರದಲ್ಲೇ ಚರ್ಚಿಸಿ ನಮ್ಮ ಮುಂದಿನ ನಡೆಯನ್ನು ತಿಳಿಸುತ್ತೇವೆ ಎಂದರು.
ಸಮಿತಿ ರಚನೆ ಮಾಡುವಂತೆ ನ್ಯಾಯಾಲಯದ ಆದೇಶಕ್ಕೆ ನಾವು ತಲೆಬಾಗುತ್ತೇವೆ. ಆದರೆ ಸಮಿತಿ ರಚನೆಗೂ ಮುನ್ನ ನಮಗೆ ಮಾಹಿತಿ ನೀಡಬೇಕಿತ್ತು. ಆ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಿತಿಗೆ ಸಂಬಂಧಪಟ್ಟು ಪ್ರಧಾನಿ ಮೋದಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ನಮ್ಮ ಸಿಎಂ ಭೇಟಿ ಮಾಡಿ ಮನವಿ ಮಾಡಿದ್ದರು. ರಾಜ್ಯದ ಅಪೇಕ್ಷೆ ಹಾಗೂ ಆಕ್ಷೇಪಗಳನ್ನು ಆಗ ವಿವರಿಸಲಾಗಿತ್ತು. ಸಮಿತಿ ರಚನೆ ಬಗ್ಗೆ ವ್ಯಾಪಕ ಚರ್ಚೆಯಾಗಬೇಕಿದ್ದು ಸ್ವಲ್ಪ ಸಮಯ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದೆವು.
ಆದರೆ ಕೇಂದ್ರ ಮಾತ್ರ ರಾಜ್ಯದ ಹಿತವನ್ನು ಗಣನೆಗೆ ತೆಗೆದುಕೊಂಡಿಲ್ಲ. ಪಕ್ಕದ ರಾಜ್ಯದ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ನಿರ್ವಹಣಾ ಸಮಿತಿ ರಚಿಸಲಾಗಿದೆ. ನಮ್ಮ ಗಮನಕ್ಕೆ ತಾರದೆ ನೋಟಿಫಿಕೇಶನ್ ಮಾಡಿ ಆಘಾತ ಉಂಟು ಮಾಡಿದೆ. ಇದು ಖಂಡನೀಯವಾಗಿದ್ದು ಕೇಂದ್ರ ಸರ್ಕಾರ ಹೀಗೆ ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳಬಾರದು ಎಂದು ನುಡಿದರು.