ಅನರ್ಹ ಶಾಸಕರ ವಿಚಾರಣೆ ದಿಢೀರ್ ಮುಂದಕ್ಕೆ : ಎದುರಾಗಿದೆ ಆತಂಕ
ಸುಪ್ರೀಂಕೋರ್ಟ್ನಲ್ಲಿ ಸೆ. 11ಕ್ಕೆ ನಿಗದಿಯಾಗಿದ್ದ 17 ಅನರ್ಹ ಶಾಸಕರ ಅರ್ಜಿಯ ವಿಚಾರಣೆ ಹಠಾತ್ತನೆ ಮುಂದೂಡಿಕೆಯಾಗಿದ್ದು, ಇದರಿಂದ ಅವರಲ್ಲಿ ಆತಂಕ ಎದುರಾಗಿದೆ.
ನವದೆಹಲಿ [ಸೆ.08]: ಸುಪ್ರೀಂಕೋರ್ಟ್ನಲ್ಲಿ ಸೆ. 11ಕ್ಕೆ ನಿಗದಿಯಾಗಿದ್ದ 17 ಅನರ್ಹ ಶಾಸಕರ ಅರ್ಜಿಯ ವಿಚಾರಣೆ ಹಠಾತ್ತನೆ ಸೆ. 16ಕ್ಕೆ ಮುಂದೂಡಿಕೆಯಾಗಿದೆ. ತ್ವರಿತ ವಿಚಾರಣೆ ನಡೆದು ತಮ್ಮ ಪರ ಆದೇಶ ಹೊರಬೀಳುವ ಉಮೇದಿಯಲ್ಲಿದ್ದ ಅನರ್ಹ ಶಾಸಕರಿಗೆ ಈ ಅನಿರೀಕ್ಷಿತ ಬೆಳವಣಿಗೆ ಆಘಾತ ನೀಡಿದೆ.
ಅಲ್ಲದೆ, ಮುಂದಿನ ತಿಂಗಳು ಸುಪ್ರೀಂಕೋರ್ಟ್ಗೆ ದಸರಾ, ದೀಪಾವಳಿ ಹಬ್ಬಗಳ ಪ್ರಯುಕ್ತ ಎರಡೆರಡು ಬಾರಿ ಸುದೀರ್ಘ ರಜೆ ಇದೆ. ಇದರಿಂದಾಗಿ ತಮ್ಮ ಪ್ರಕರಣಗಳ ವಿಚಾರಣೆ ಭಾರೀ ವಿಳಂಬವಾಗುವ ಕಳವಳದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಿಢೀರ್ ಮುಂದೂಡಿಕೆ: ಜುಲೈ ತಿಂಗಳಲ್ಲಿ ನಡೆದ ನಾಟಕೀಯ ಬೆಳವಣಿಗೆಗಳ ಸಂದರ್ಭ ಮೈತ್ರಿ ಸರ್ಕಾರದಲ್ಲಿ ವಿಧಾನಸಭಾಧ್ಯಕ್ಷರಾಗಿದ್ದ ಕೆ.ಆರ್.ರಮೇಶ್ ಕುಮಾರ್ ಅವರು ಕಾಂಗ್ರೆಸ್, ಜೆಡಿಎಸ್ ವಿರುದ್ಧ ಸಿಡಿದೆದ್ದಿದ್ದ 17 ಶಾಸಕರನ್ನು ಅನರ್ಹಗೊಳಿಸಿದ್ದರು. ಇದರ ವಿರುದ್ಧ ಪದಚ್ಯುತ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಪದಚ್ಯುತಗೊಂಡು ಸರಿಸುಮಾರು ಒಂದೂವರೆ ತಿಂಗಳು ಆಗುತ್ತ ಬಂದರೂ ವಿಚಾರಣೆ ನಡೆಯದೆ ಆತಂಕಕ್ಕೆ ಒಳಗಾಗಿದ್ದರು.