ಅಲೋಕ್, ರಾಕೇಶ್ ಬೆಕ್ಕುಗಳಂತೆ ಕಚ್ಚಾಡ್ತಿದ್ದರು: ಸುಪ್ರೀಂಗೆ ಕೇಂದ್ರದ ಹೇಳಿಕೆ!
ಸಿಬಿಐ ಒಳಜಗಳ ಕುರಿತಂತೆ ಸುಪ್ರೀಂ ಕೋರ್ಟ್ ಗೆ ಅಭಿಪ್ರಾಯ ಸಲ್ಲಿಸಿದ್ದ ಕೇಂದ್ರ! ‘ಅಲೋಕ್ ವರ್ಮಾ, ರಾಕೇಶ್ ಅಸ್ಥಾನ ಬೆಕ್ಕುಗಳಂತೆ ಕಚ್ಚಾಡುತ್ತಿದ್ದರು’! ಸುಪ್ರೀಂ ಮುಂದೆ ಹೇಳಿಕೆ ನೀಡಿದ ಅಟಾರ್ನಿ ಜನರಲ್ ವೇಣುಗೋಪಾಲ್! ‘ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಲ್ಲಿ ಅಸಾಮಾನ್ಯ ಪರಿಸ್ಥಿತಿ ನಿರ್ಮಾಣ’! ‘ಅಧಿಕಾರಿಗಳ ನಡುವಿನ ಜಗಳದಿಂದ ಸಿಬಿಐ ಗೌರವಕ್ಕೆ ಧಕ್ಕೆಯಾಗಿದೆ’
ನವದೆಹಲಿ(ಡಿ.05): ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ, ಬೆಕ್ಕುಗಳ ಹಾಗೆ ಕಿತ್ತಾಡುತ್ತಿದ್ದರು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಲ್ಲಿ ಅಸಾಮಾನ್ಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೆ ಬಹುತೇಕ ಕಾರಣ ಈ ಇಬ್ಬರೂ ಅಧಿಕಾರಿಗಳ ಕಚ್ಚಾಟವೇ ಕಾರಣ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಅಭಿಪ್ರಾಯಪಟ್ಟಿದೆ.
ಕಡ್ಡಾಯ ರಜೆಯ ಮೇಲೆ ಕಳುಹಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಅಲೋಕ್ ವರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ, ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ತಮ್ಮ ವಾದ ಮಂಡಿಸಿದರು. ಇಬ್ಬರು ಉನ್ನತ ಅಧಿಕಾರಿಗಳ ನಡುವಿನ ಜಗಳದಿಂದ ಸಿಬಿಐ ಗೌರವಕ್ಕೆ ಧಕ್ಕೆಯಾಗಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.
ಇಬ್ಬರು ಅಧಿಕಾರಿಗಳ ಆಂತರಿಕ ಭಿನ್ನಾಭಿಪ್ರಾಯಗಳನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸಿದ ನಂತರ ಅವರನ್ನು ರಜೆಯ ಮೇಲೆ ಕಳುಹಿಸಲಾಗಿದೆ. ಅವರನ್ನು ವರ್ಗಾವಣೆ ಮಾಡಿಲ್ಲ ಎಂದು ಎಜಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.